Onion Price Hike: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ: ಉತ್ಪಾದನೆ ಭಾರಿ ಕುಸಿತ

ಕರ್ನಾಟಕದಾದ್ಯಂತ ಮತ್ತು ರಾಜಾಧಾನಿ ಬೆಂಗಳೂರಿನಲ್ಲಿ ಬೆಲೆ ಏರಿಕೆಯಿಂದಾಗಿ ಜನರು ಮೊದಲೇ‌ ರೋಸಿ ಹೋಗಿದ್ದಾರೆ. ಈ ಮಧ್ಯೆ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಆಗಿದೆ. ಮಳೆಯಿಂದಾಗಿ ಬೆಳೆ ನಾಶ, ಉತ್ಪಾದನೆ ಕುಸಿತವೇ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.

Onion Price Hike: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ: ಉತ್ಪಾದನೆ ಭಾರಿ ಕುಸಿತ
ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ
Poornima Agali Nagaraj Edited By:

Updated on: Sep 18, 2024 | 7:13 AM

ಬೆಂಗಳೂರು, ಸೆಪ್ಟೆಂಬರ್ 18: ದಿನದಿಂದ ದಿನಕ್ಕೆ ಸಾಮಾನ್ಯ ಜನರ ಬದುಕು ದುಬಾರಿಯಾಗುತ್ತಿದೆ. ಅಗತ್ಯ ವಸ್ತುಗಳ‌ ಬೆಲೆ‌ ಏರಿಕೆಯಾಗುತ್ತಿದ್ದು, ಬಡವರು ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟವಾಗಿ ಹೋಗಿದೆ.‌ ಈ ಮಧ್ಯೆ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಹಾಕರಿಗೆ ಕಣ್ಣೀರು ತರಿಸುತ್ತಿದೆ. ಸದ್ಯ ಕರ್ನಾಟಕದ ಹಲವೆಡೆ ಅತಿಯಾದ ಮಳೆಯ ಕಾರಣ ಬೆಳೆ ನೀರು‌ಪಾಲಗುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ಮಳೆಯಿಂದಾಗಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ಹಬ್ಬದ ವಾರದಲ್ಲಿ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗ 60 ರಿಂದ 70 ರೂಪಾಯಿ ಆಗಿದೆ.

ಈರುಳ್ಳಿ ಉತ್ಪಾದನೆ ಭಾರಿ ಕುಸಿತ

ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ.‌ ಪರಿಣಾಮವಾಗಿ ಪೂರೈಕೆ ಕೂಡ ಕಡಿಮೆಯಾಗಿದೆ. ಸದ್ಯ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳಲಾಗುತ್ತಿದೆ.

ದಸರಾ ವೇಳೆಗೆ ಈರುಳ್ಳಿ ಬೆಲೆ ಮತ್ತಷ್ಟು ದುಬಾರಿ ಸಾಧ್ಯತೆ

ದಸರಾ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೆ, ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.

ಬೆಳ್ಳುಳ್ಳಿ ಬೆಲೆಯೂ ಏರಿಕೆ

ಈ‌ ಮಧ್ಯೆ ಬೆಳ್ಳುಳ್ಳಿ ಕೆಜಿಗೆ 400 ರೂ. ಆಗಿದೆ. ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ತರಕಾರಿ ಹಾಗೂ ಈರುಳ್ಳಿಯ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಅಂತ ವ್ಯಾಪಾರಸ್ಥರು ಅಂದಾಜಿಸಿದ್ದಾರೆ.

ಒಟ್ಟಿನಲ್ಲಿ ಮಳೆಯ ಕಾರಣದಿಂದಾಗಿ ಈರುಳ್ಳಿ ಬೆಲೆ ಒಂದೇ ವಾರದಲ್ಲಿ 60 ರಿಂದ 70 ರೂ. ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Wed, 18 September 24

Poornima Agali Nagaraj
Follow Us