Operation Kaveri: ಹಕ್ಕಿಪಿಕ್ಕಿ ಜನ ಸೇರಿ ಸುಡಾನ್​ನಿಂದ ಭಾರತೀಯರ ಕರೆತರಲು ಆಪರೇಷನ್ ಕಾವೇರಿ

|

Updated on: Apr 24, 2023 | 9:47 PM

ಸಂಘರ್ಷಪೀಡಿತ ಸುಡಾನ್​ನಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರೂ ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಸೋಮವಾರ ‘ಆಪರೇಷನ್ ಕಾವೇರಿ’ಗೆ ಚಾಲನೆ ನೀಡಿದೆ.

Operation Kaveri: ಹಕ್ಕಿಪಿಕ್ಕಿ ಜನ ಸೇರಿ ಸುಡಾನ್​ನಿಂದ ಭಾರತೀಯರ ಕರೆತರಲು ಆಪರೇಷನ್ ಕಾವೇರಿ
ಚಿತ್ರ ಕೃಪೆ; ವಿದೇಶಾಂಗ ಸಚಿವರ ಟ್ವೀಟ್
Image Credit source: Twitter
Follow us on

ನವದೆಹಲಿ: ಸಂಘರ್ಷಪೀಡಿತ ಸುಡಾನ್​ನಲ್ಲಿ (Sudan Crisis) ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರೂ ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಸೋಮವಾರ ‘ಆಪರೇಷನ್ ಕಾವೇರಿ (Operation Kaveri)’ಗೆ ಚಾಲನೆ ನೀಡಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸುಡಾನ್​ನಲ್ಲಿ ಕನ್ನಡಿಗರೂ ಸೇರಿದಂತೆ ನೂರಾರು ಮಂದಿ ಭಾರತೀಯರು ಸಿಲುಕಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದಾರೆ. ಅವರನ್ನು ಕರೆತರಲು ನಮ್ಮ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸೌದಿ ಅರೇಬಿಯಾಕ್ಕೆ ಎರಡು ಹೆವಿ-ಲಿಫ್ಟ್ ವಿಮಾನಗಳನ್ನು ಮತ್ತು ಸುಡಾನ್ ಕರಾವಳಿಗೆ ಹಡಗನ್ನು ಕಳುಹಿಸಲಾಗಿದೆ ಎಂದು ಏಪ್ರಿಲ್ 23ರಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.


ಸಂಘರ್ಷಕ್ಕೆ ತುಸು ವಿರಾಮ ದೊರೆತ ಸಂದರ್ಭ ಬಳಸಿಕೊಂಡು ಸುಡಾನ್‌ನಿಂದ ಜನರನ್ನು ಸ್ಥಳಾಂತರಿಸಲು ಭಾರತವು ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ: Sudan conflict: ಸಂಘರ್ಷ ಪೀಡಿತ ಆಫ್ರಿಕಾದಲ್ಲಿ ಸಿಲುಕಿದ ನೂರಾರು ಕನ್ನಡಿಗರು: ಅಲ್ಲಿನ ಸಂಕಷ್ಟದ ಬಗ್ಗೆ ಟಿವಿ9 ಜೊತೆ ಅಳಲು ತೋಡಿಕೊಂಡ ದಾವಣಗೆರೆ ವ್ಯಕ್ತಿ

ಸುಡಾನ್​ನಲ್ಲಿ ಮಹಿಳೆಯರೂ ಸೇರಿದಂತೆ ಕರ್ನಾಟಕದ ಹತ್ತಾರು ಮಂದಿ ಸಿಲುಕಿದ್ದಾರೆ. ಈ ಪೈಕಿ ಹೆಚ್ಚಿನವರು ರಾಜ್ಯದ ಹಕ್ಕಿಪಿಕ್ಕಿ ಜನಾಂಗದವರಾಗಿದ್ದಾರೆ. ಜತೆಗೆ ಇತರ ರಾಜ್ಯಗಳ ಅನೇಕ ಮಂದಿಯೂ ಸಿಲುಕಿದ್ದಾರೆ.

ಸುಡಾನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸುಡಾನ್​​ಗಿರುವ ಭಾರತದ ರಾಯಭಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸುಡಾನ್​​ನಲ್ಲಿನ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವರದಿಯನ್ನು ಕೇಳಿದ್ದ ಪ್ರಧಾನಿ, ಅಲ್ಲಿರುವ 3,000ಕ್ಕಿಂತಲೂ ಹೆಚ್ಚು ಭಾರತೀಯರ ಸುರಕ್ಷೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು. ಕಳೆದ ವಾರ ಸುಡಾನ್​​ನಲ್ಲಿ ಗುಂಡಿನ ದಾಳಿಗೆ ಬಲಿಯಾದ ಭಾರತೀಯರ ಸಾವಿಗೆ ಮೋದಿ ಸಂತಾಪ ಸೂಚಿಸಿದ್ದರು.

28ಕ್ಕೂ ಹೆಚ್ಚು ಮಂದಿಯ ಸ್ಥಳಾಂತರ

ಫ್ರೆಂಚ್ ವಾಯುಪಡೆಯ ವಿಮಾನದ ಮೂಲಕ ಸುಡಾನ್‌ನಿಂದ ಐವರು ಭಾರತೀಯ ಪ್ರಜೆಗಳು ಸೇರಿದಂತೆ ಇತರ ದೇಶಗಳ 28 ಕ್ಕೂ ಹೆಚ್ಚು ಜನರನ್ನು ಫ್ರಾನ್ಸ್‌ನ ಸೇನಾ ನೆಲೆಗೆ ಕರೆತರಲಾಗಿದೆ ಎಂದು ಫ್ರೆಂಚ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಈ ಹಿಂದೆ ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾಗಿದ್ದ ಸಂದರ್ಭದಲ್ಲಿ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ ಭಾರತೀಯರನ್ನು ಕರೆತರಲಾಗಿತ್ತು. ಅಫ್ಘಾನಿಸ್ತಾನ ಸಂಘರ್ಷದ ಸಂದರ್ಭದಲ್ಲಿ ‘ಆಪರೇಷನ್ ದೇವಿ ಶಕ್ತಿ’ ಮೂಲಕ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:40 pm, Mon, 24 April 23