ಸನಾತನ ಧರ್ಮಕ್ಕೆ ಹುಟ್ಟಿಲ್ಲ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ; ಗೌರಿನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ

| Updated By: ಗಣಪತಿ ಶರ್ಮ

Updated on: Sep 05, 2023 | 8:33 PM

ನಾನು ಧರ್ಮದ ವಿರುದ್ಧ ಅಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಅವರು ಸಂಸತ್ ಭವನದ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದರು. ಯಾವುದನ್ನೂ ಸಹ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯಿಂದ ಅದು ಆಗುತ್ತಿದೆ, ಅದಕ್ಕೆ ನನ್ನ ವಿರೋಧವಿದೆ ಎಂದು ಪ್ರಕಾಶ್ ರೈ ಹೇಳಿದರು.

ಸನಾತನ ಧರ್ಮಕ್ಕೆ ಹುಟ್ಟಿಲ್ಲ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ; ಗೌರಿನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ
ಪ್ರಕಾಶ್​ ರೈ
Follow us on

ಬೆಂಗಳೂರು, ಸೆಪ್ಟೆಂಬರ್ 5: ‘ನಾನು ಸನಾತನ ಧರ್ಮಕ್ಕೆ (Sanatan Dharma) ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’ ಎಂಬುದಾಗಿ ಪ್ರಶ್ನಿಸಿದವರಿಗೆ ತಿಳಿಸಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ (Prakash Rai) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಟೌನ್ ಹಾಲ್​ನಲ್ಲಿ ನಡೆದ ಗೌರಿನೆನಪು (Gauri Nenapu) ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ನಾನು ಟ್ವಿಟರ್​ನಲ್ಲಿ ‘ಸನಾತನಿ ಸಂಸತ್’ ಎಂದು ಪೋಸ್ಟ್​ ಮಾಡಿದ್ದೆ. ಅದಕ್ಕೆ, ‘ನೀನು ಸನಾತನ ಧರ್ಮ ಅಲ್ವಾ’ ಎಂದು ಒಬ್ಬ ಪ್ರಶ್ನೆ ಕೇಳಿದ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ ಎಂದು ಪ್ರಕಾಶ್​ ರೈ ಹೇಳಿದ್ದಾರೆ.

ನಾನು ಧರ್ಮದ ವಿರುದ್ಧ ಅಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಅವರು ಸಂಸತ್ ಭವನದ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದರು. ಅದು ನಮ್ಮ ಸಂಸತ್​​ ಭವನ. ಅದರಲ್ಲಿ ಹೋಮ ಹವನ ಮಾಡಬಾರದು. ಯಾವುದನ್ನೂ ಸಹ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯಿಂದ ಅದು ಆಗುತ್ತಿದೆ, ಅದಕ್ಕೆ ನನ್ನ ವಿರೋಧವಿದೆ ಎಂದು ಪ್ರಕಾಶ್ ರೈ ಹೇಳಿದರು.

ಗಾಂಧೀಜಿಯವರನ್ನು ಕೊಂದ ಮನಸ್ಥಿತಿಯವರಿಂದಲೇ ಗೌರಿ ಹತ್ಯೆ; ಸಿದ್ದರಾಮಯ್ಯ

ಗಾಂಧೀಜಿ ಅವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ಅನೇಕ ಬಾರಿ ಭೇಟಿಯಾಗಿದ್ದರು. ಆದ್ರೆ ಗೌರಿ ಲಂಕೇಶ್​​ ಯಾವತ್ತೂ ವೈಯಕ್ತಿಕ ಸಹಾಯ ಕೇಳಲಿಲ್ಲ. ಸಾಮಾಜಿಕ ಸಮಸ್ಯೆಗಳ ಬಗ್ಗೆ ನನ್ನ ಬಳಿ ಚರ್ಚೆ ಮಾಡುತ್ತಿದ್ದರು. ಕೋಮುವಾದಿಗಳೇ ಪತ್ರಕರ್ತೆ ಗೌರಿ ಲಂಕೇಶ್​ರನ್ನು ಹತ್ಯೆ ಮಾಡಿದರು. ಕೋಮುವಾದಿಗಳಿಗೆ ಹಿಂದೂಗಳು ಹಾಗೂ ಮುಸ್ಲಿಂ ಒಟ್ಟಾಗಿ ಇರುವುದು ಇಷ್ಟವಿಲ್ಲ. ಕೋಮುವಾದಿಗಳು ಬೆದರಿಕೆ ಪತ್ರ ಬರೆಯುತ್ತಾರೆ. ಭಯಪಡಬೇಡಿ, ಕೋಮುವಾದ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ; ಸಚಿವ ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ

ಸಾಹಿತಿಗಳು, ಕವಿಗಳು, ಚಿಂತಕರಿಗೆ ಬೆದರಿಕೆ ಪತ್ರ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಬೆದರಿಕೆ ಪತ್ರ, ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ. ಅದೇ ರೀತಿ, ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದೇನೆ. ಮೈಸೂರಿನಲ್ಲಿ ಇದಕ್ಕೆ ಡಿವೈಎಸ್​ಪಿ ನೇತೃತ್ವದಲ್ಲಿ ಒಂದು ಕಚೇರಿಯನ್ನೇ ತೆರೆದಿದ್ದೇವೆ. ಗೌರಿ ಲಂಕೇಶ್ ಹತ್ಯೆ ಕುರಿತಾಗಿ 1 ಸಾವಿರ ಪುಟದ ಚಾರ್ಜ್ ಶೀಟ್ ದಾಖಲಾಗಿದೆ. ಪ್ರಾಮಾಣಿಕ ತನಿಖೆಯಾಗಿದೆ, ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 80 ಜನರ ಸಾಕ್ಷಿಯಾಗಿದೆ, ನಾನು ಖುದ್ದು ಮುತುವರ್ಜಿ ವಹಿಸಿ ಈ ಪ್ರಕರಣವನ್ನು ನೋಡುತ್ತಿದ್ದೇನೆ. ಗೌರಿ ಲಂಕೇಶ್ ಅಭಿಮಾನಿಗಳಿಗೆ ಸಮಾಧಾನ ತರುವ ರೀತಿಯ ಶಿಕ್ಷೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಜನರಿಂದ ದೊಡ್ಡ ಸಂದೇಶ; ರಾಕೇಶ್ ಟಿಕಾಯತ್

ದೇಶಕ್ಕೆ ಕರ್ನಾಟಕದ ಜನರು ಬಹುದೊಡ್ಡ ಸಂದೇಶ ಕೊಟ್ಟಿದ್ದಾರೆ. ಈಗ ಬೇರೆ ರಾಜ್ಯಗಳಲ್ಲೂ ಇದೇ ಪರಿವರ್ತನೆ ಆಗಲಿ ಎಂದು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್​ ಹೇಳಿದರು. ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾಗ 770 ರೈತರು ಮೃತಪಟ್ಟರು. 13 ತಿಂಗಳು ಪ್ರತಿಭಟನಾನಿರತ ರೈತರನ್ನು ಬೀದಿಯಲ್ಲಿ ಇಟ್ಟಿದ್ದರು. ಆಗ ಯಾರ ಸರ್ಕಾರ ಅಧಿಕಾರದಲ್ಲಿ ಇತ್ತು? ಕನಿಷ್ಠ ಬೆಂಬಲ ಬೆಲೆ ಖಾತರಿಗಾಗಿ ನಾವು ಹೋರಾಟ ಶುರು ಮಾಡಬೇಕಿದೆ. ರಾಜ್ಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ಬೆಳೆಯುತ್ತಾರೆ. ಕರ್ನಾಟಕ ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ