AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿಗಳಿಂದ ಲೌಡ್​ಸ್ಪೀಕರ್ ತೆರವುಗೊಳಿಸದ ಸರ್ಕಾರ, ಎಲ್ಲ ದೇಗುಲಗಳಿಂದ ಮೈಕ್​ನಲ್ಲಿ ರಾಮ ನಾಮ: ಪ್ರಮೋದ್ ಮುತಾಲಿಕ್

ಕರ್ನಾಟಕದಲ್ಲಿ ಈವರೆಗೆ ಲೌಡ್​ ಸ್ಪೀಕರ್ ತೆರವುಗೊಳಿಸುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಮಸೀದಿಗಳಿಂದ ಲೌಡ್​ಸ್ಪೀಕರ್ ತೆರವುಗೊಳಿಸದ ಸರ್ಕಾರ, ಎಲ್ಲ ದೇಗುಲಗಳಿಂದ ಮೈಕ್​ನಲ್ಲಿ ರಾಮ ನಾಮ: ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: May 01, 2022 | 9:54 AM

Share

ಬೆಂಗಳೂರು: ಭಾರತದ ವಿವಿಧೆಡೆ ಮಸೀದಿಗಳಲ್ಲಿ ಅಳವಡಿಸಲಾಗಿರುವ ಅನಧಿಕೃತ ಲೌಡ್​ಸ್ಪೀಕರ್​ಗಳನ್ನು ತೆರವುಗೊಳಿಸುವ ಪ್ರಯತ್ನ ಭಾರತದ ವಿವಿಧೆಡೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ, ಇಲ್ಲಿನ ಸರ್ಕಾರವು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಕೇವಲ ನೊಟೀಸ್ ಮಾತ್ರ ಜಾರಿ ಮಾಡಲಾಗಿದೆ. ಆದರೆ ಈವರೆಗೆ ಲೌಡ್​ ಸ್ಪೀಕರ್ ತೆರವುಗೊಳಿಸುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಶ್ರೀರಾಮಸೇನೆಯು ಕಳೆದ ಆರು ತಿಂಗಳುಗಳಿಂದ ಮಸೀದಿ ಮೇಲಿರುವ ಅನಧಿಕೃತ ಲೌಡ್ ಸ್ಪೀಕರ್​ಗಳನ್ನು ತೆರವು ಮಾಡುವ ಬಗ್ಗೆ ಮನವಿ ಮಾಡುತ್ತಿದೆ. ಆದರೆ ಈವರೆಗೆ ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಸರ್ಕಾರವು ಮಸೀದಿ, ಮಂದಿರ, ಚರ್ಚ್​ಗಳಿಗೆ ನೊಟೀಸ್ ಜಾರಿಗಳಿಸುವ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂದು ನೇರ ಆರೋಪ ಮಾಡಿದರು.

ಧ್ವನಿವರ್ಧಕ ವಿವಾದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮಂದಿರ, ಮಸೀದಿ ಅಥವಾ ಚರ್ಚ್​ಗಳಲ್ಲಿ ಆಗುವ ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ. ನಮ್ಮ ವಿರೋಧ ಇರೋದು ಮೈಕ್ ಸಂಬಂಧಪಟ್ಟಂತೆ ಮಾತ್ರ. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಸಾರ್ವಜನಿಕವಾಗಿ ಮೈಕ್ ಬಳಸುವಂತಿಲ್ಲ. ಆದರೆ ಬೆಳಿಗ್ಗೆ ಐದು ಗಂಟೆಗೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಹಾಕುತ್ತಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ. ಸರ್ಕಾರ ಈಗಾಗಲೇ ನಿಶ್ಯಬ್ದ ವಲಯಗಳನ್ನು ಗುರುತಿಸಿ, ಘೋಷಿಸಿದೆ. ಆಸ್ಪತ್ರೆ, ಶಾಲೆ, ಕಾಲೇಜು ಮತ್ತು ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಮೈಕ್ ಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ವಿವರಿಸಿದರು.

ಇಂಥ ಸ್ಥಳಗಳಲ್ಲಿ ಸಾರ್ವಜನಿಕ ಮೈಕ್ ಬಳಕೆಗೆ ಸಂಪೂರ್ಣ ನಿರ್ಬಂಧವಿದೆ. ಇಂತಲ್ಲಿ ಕಡಿಮೆ ಶಬ್ದ ಅಥವಾ ಜಾಸ್ತಿ ಶಬ್ದ ಎಂಬ ವಿವರವನ್ನೇನೂ ಒದಗಿಸಿಲ್ಲ. ಸಾರ್ವಜನಿಕ ಮೈಕ್​ಗೆ ಅನುಮತಿಯೇ ನೀಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ, ಅದನ್ನು ಪಾಲಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಗಮನ ನೀಡುತ್ತಿಲ್ಲ ಎಂದು ದೂರಿದರು.

ಮಸೀದಿಗಳ ಮೇಲಿರುವ ಲೌಡ್ ಸ್ಪೀಕರ್​ಗಳಿಗೆ ಯಾರೂ ಅನುಮತಿ ಪಡೆದಿಲ್ಲ. ಚರ್ಚ್, ಮಂದಿರಗಳ ವಿಚಾರವೂ ಅಷ್ಟೇ. ಅವರೂ ಯಾವುದೇ ಅನುಮತಿ ಪಡೆದಿಲ್ಲ. ಇಷ್ಟು ಡೆಸಿಬಲ್​ನಲ್ಲಿ ಮಾತ್ರ ಆಜಾನ್ ಕೂಗಬೇಕು ಎಂಬ ನಿಯಮವಿದೆ. ಆದರೆ ಊರು ತುಂಬಾ ಕೇಳಿಸುವ ಹಾಗೆ ಶಬ್ದ ಮಾಲಿನ್ಯ ಮಾಡುತ್ತಾರೆ. ಮೇ ಒಂದರೊಳಗೆ ಮಸೀದಿಗಳ ಮೇಲಿರುವ ಅನಧಿಕೃತ ಲೌಡ್ ಸ್ಪೀಕರ್​ಗಳನ್ನು ತೆರವು ಮಾಡಬೇಕು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದ್ದೆವು. ಆದರೆ ಇಂದು ಬೆಳಗಿನ ಜಾವವು ಆಜಾನ್​ನಿಂದ ಶಬ್ದ ಮಾಲಿನ್ಯ ಆಗುತ್ತಿದೆ. ಸರ್ಕಾರ ನಮ್ಮ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಮೇ 9ರಂದು ರಾಜ್ಯದ ಎಲ್ಲ ದೇವಾಲಯಗಳ‌ ಮೇಲೆ ಬೆಳಿಗ್ಗೆ ಐದು ಗಂಟೆಗೆ ಓಂ ನಮಃ ಶಿವಾಯ, ರಾಮ ನಾಮ ಜಪ, ಹನುಮಾನ್ ಚಾಲೀಸಾ ಹಾಕಲು ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಘೋಷಿಸಿದರು.

ರಾಜ್ಯದ ಎಲ್ಲಾ ಮಠಾಧೀಶರು, ಹಿಂದೂಪರ ಸಂಘಟನೆಗಳು ಹಾಗೂ ದೇವಾಲಯಗಳ ಅರ್ಚಕರು ನಮ್ಮೊಡನೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ನಮ್ಮನ್ನು ಸರ್ಕಾರ ತಡೆಯಲು ಮುಂದಾದರೆ ಸಂಘರ್ಷ ಆಗುತ್ತದೆ. ಒಂದು ವೇಳೆ ಇಂಥ ಪರಿಸ್ಥಿತಿ ಉದ್ಭವಿಸಿದರೆ ಅದಕ್ಕೆ ನೀವೇ ಕಾರಣರಾಗ್ತೀರಿ. ನಾವು ಯಾವುದೋ ಒಂದು ಧರ್ಮದ ವಿರುದ್ಧ ಹೋರಾಟಕ್ಕೆ ಮುಂದಾಗಿಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯ ಮನಸ್ಥಿತಿಯ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಮ್ಮನ್ನು ತಡೆಯಲು ಮುಂದಾಗಬೇಡಿ ಎಂದು ವಿನಂತಿಸಿದರು.

ಇದನ್ನೂ ಓದಿ: ಬೇಲೂರು ರಥೋತ್ಸವಕ್ಕೂ ಕುರಾನ್​ಗೂ ಏನು ಸಂಬಂಧ? ಕುರಾನ್ ಪಠಿಸಲು ಅವಕಾಶ ಕೊಟ್ಟರೆ ಪ್ರತಿಭಟಿಸ್ತೇವೆ -ಪ್ರಮೋದ್ ಮುತಾಲಿಕ್

ಇದನ್ನೂ ಓದಿ: ಮಸೀದಿಗಳಲ್ಲಿ ಲೌಡ್​ಸ್ಪೀಕರ್ ವಿವಾದ: ಹೈಕೋರ್ಟ್-ಕಾನೂನು ಹೇಳುವುದೇನು? ಮಸೀದಿಗಳ ವಾದ ಏನಿದೆ?