ಸೋಲಿನ ಭೀತಿಯಿಂದ ಹೆಸರಿಗೆ ಮತ್ತೊಂದು ಎಂ ಸೇರಿಸಿದ ಪ್ರತಾಪ್ ಸಿಂಹ: ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸೋಲಿನ ಭೀತಿಯಿಂದ ತನ್ನ ಹೆಸರಿಗೆ ಇನ್ನೊಂದು ಎಂ ಸೇರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸೋಲಿನ ಭೀತಿಯಿಂದ ಹೆಸರಿಗೆ ಮತ್ತೊಂದು ಎಂ ಸೇರಿಸಿದ ಪ್ರತಾಪ್ ಸಿಂಹ: ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಎಂ ಲಕ್ಷ್ಮಣ್ ಮತ್ತು ಪ್ರತಾಪ್ ಸಿಂಹ
Edited By: Rakesh Nayak Manchi

Updated on: Nov 29, 2023 | 2:55 PM

ಮೈಸೂರು, ನ.29: ಸಂಸದ ಪ್ರತಾಪ್ ಸಿಂಹ (Pratap Simha) ತಮ್ಮ ಹೆಸರನ್ನು ಇತ್ತೀಚಿಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕೆ ಇನ್ನೊಂದು ‘M’ ಸೇರಿಸಿಕೊಂಡಿದ್ದಾರೆ. ‘M’ ಅಂದರೆ mockery (ಅಪಹಾಸ್ಯ) ಪ್ರತಾಪ್ ಸಿಂಹ ಅಂತ ಹೇಳಬಹುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ (M.Lakshman) ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತಾನು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್, 2 ಲಕ್ಷ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅದು ಉಲ್ಟಾ ಆಗುತ್ತದೆ. ಅವರು 2 ಲಕ್ಷ ಅಂತರದಲ್ಲಿ ಸೋಲುತ್ತಾರೆ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ತಂದ ಯೋಜನೆಗಳ ನಾನು ತಂದೆ ಅಂತ ಹೇಳಿಕೊಳ್ಳುತ್ತಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರದಿಂದ ನೀವು ಏನು ತಂದಿದ್ದೀರಿ ಅಂತ ಹೇಳಿ. ರಾಜ್ಯದಲ್ಲಿ ಉಡಾನ್ ಯೋಜನೆಯಡಿ ಪ್ರತಿ ಜಿಲ್ಲೆಗೂ ವಾಯು ಸಾರಿಗೆ ಸಂಪರ್ಕ ಕೊಡುತ್ತೇವೆ ಎಂದಿದ್ದರು. ಎಲ್ಲಿ ಮಾಡಿದ್ದೀರಿ ಅಂತ ಹೇಳಿ ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ಮೈಸೂರು ಕುಶಾಲನಗರ ಹೈವೇ ಕಾಮಗಾರಿ ಎಲ್ಲಿ ಉಂಟು? ನಾಗನಹಳ್ಳಿ ರೈಲ್ವೆ ಸ್ಟೇಷನ್ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳಿದ್ದೀರಿ. ಅದು ಇನ್ನೂ ಹಾಗೇ ನಿಂತಿದೆ. ಸೆಮಿ ಕಂಡಕ್ಟರ್ ಉತ್ಪಾದನೆ ಘಟಕ ಮಾಡುತ್ತೇವೆ ಅಂತ ಹೇಳಿದ್ದಿರಿ. ಅದು ಎಲ್ಲೋಯ್ತು? ನೀವು ರಾಜ್ಯಕ್ಕೆ ಯಾವ ಯೋಜನೆ ತಂದಿದ್ದೀವಿ ಅಂತ ಒಂದು ಪಟ್ಟಿ ಬಿಡುಗಡೆ ಮಾಡಿ ಎಂದು ಪ್ರತಾಪ್ ಸಿಂಹಗೆ ಲಕ್ಷ್ಮಣ್ ಸವಾಲು ಹಾಕಿದರು. ಅಲ್ಲದೆ, ಮಡಿಕೇರಿಯಲ್ಲಿ ಪೋಲಿಸರಿಗೆ ಧಮ್ಕಿ ಹಾಕುವ ಕೆಲಸ ಮಾಡಿದ್ದಾರೆ. ಇವರ ಮೇಲೆ ಪೋಲಿಸರು ಸಮೋಟೋ ಕೇಸ್ ದಾಖಲಿಸಬೇಕಿತ್ತು ಎಂದರು.

ಇದನ್ನೂ ಓದಿ: ಸಿಟಿ ರವಿ ಕತೆಯನ್ನು ಬಿಜೆಪಿ ನಾಯಕರು ಹೆಚ್ಚುಕಡಿಮೆ ಮುಗಿಸಿಬಿಟ್ಟಿದ್ದಾರೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಹೋಗಿದೆ, ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎನ್ನುತ್ತಾರೆ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ 75 ಸಾವಿರ ಕೋಟಿ ಸಾಲ ಮಾಡಿದ್ದರು. 2018 ರಿಂದ 2023 ಮಾರ್ಜ್ ವರಗೆ ಮಾಡಿದ ಸಾಲ 2.18 ಲಕ್ಷ ಕೋಟಿ ಆಗಿದೆ. ಐದು ವರ್ಷದ ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಬ್ಬರ ತಲೆ ಮೇಲೆ 1 ಲಕ್ಷದ 40 ಸಾವಿರ ಸಾಲ ಹೊರಿಸಿದ್ದಾರೆ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಲು 46 ಕೋಟಿ ಹಣ ರಾಜ್ಯ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. 2023 ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ ಟೆಂಡರ್​​ನಲ್ಲಿ ಲಕ್ಷಾಂತರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಇದು ಬಿಜೆಪಿ ಅವಧಿಯ ಶ್ವೇತ ಪತ್ರ. ಸಿಎಂ ಸಿದ್ದರಾಮಯ್ಯ ಅವರು ಆರು ತಿಂಗಳ ಅವಧಿಯ ಶ್ವೇತ ಪತ್ರ ಕೊಡುತ್ತಾರೆ. ನೀವು ಕಳೆದ ಸರ್ಕಾರದ ಅವಧಿಯ ಶ್ವೇತ ಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರನ್ನು ಹಣಕಾಸು ವಿಚಾರದಲ್ಲಿ ಎದುರಿಸಲು ನಿಮ್ಮಿಂದ ಆಗಲ್ಲ. ಅಂಕಿ ಅಂಶಗಳು ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿ. ಮಾತನಾಡುವಾಗ ನಾಲಿಗೆ ಮೇಲೆ ನಿಗಾ ಇಟ್ಟು ಮಾತನಾಡಿ ಎಂದು ಅಶೋಕ್ ವಿರುದ್ದ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us