ಹಳೆಯ ಪ್ರಕರಣ ಇಟ್ಟುಕೊಂಡು ಸುಮಲತಾಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ; ಕುಮಾರಸ್ವಾಮಿ ಪರ ಬ್ಯಾಟಿಂಗ್

ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ, ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳಬೇಕು. ರಾಜಕೀಯವಾಗಿ ಯಾರೇ ಏನು ಬೇಕಾದರೂ ಹೇಳಿಕೆ ಕೊಡಬಹುದು. ಆದರೆ, ಯಾರೂ ಎಲ್ಲಿಯೂ ಅಡ್ಡಿಪಡಿಸಿಲ್ಲ ಎನ್ನುವುದು ಸತ್ಯ. ಇದೊಂದು ರಾಜಕೀಯ ಅಷ್ಟೇ: ಪ್ರತಾಪ್​ ಸಿಂಹ

ಹಳೆಯ ಪ್ರಕರಣ ಇಟ್ಟುಕೊಂಡು ಸುಮಲತಾಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ; ಕುಮಾರಸ್ವಾಮಿ ಪರ ಬ್ಯಾಟಿಂಗ್
ಪ್ರತಾಪ್​ ಸಿಂಹ, ಸುಮಲತಾ ಅಂಬರೀಶ್
Follow us
| Updated By: Skanda

Updated on: Jul 08, 2021 | 12:21 PM

ಮೈಸೂರು: ಕೆಆರ್​ಎಸ್​ ಡ್ಯಾಂ ಬಿರುಕು ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಪರೋಕ್ಷವಾಗಿ ಮಾತನಾಡಿದ್ದಾರೆ. ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿಲ್ಲವೆಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂತಹದ್ದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದಿರುವ ಪ್ರತಾಪ್​ ಸಿಂಹ ಪರೋಕ್ಷವಾಗಿ ಸುಮಲತಾಗೆ ತಿರುಗೇಟು ಕೂಡಾ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸುಮಲತಾಗೆ ಅಡ್ಡಿಪಡಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸದ ಅವರು ಯಾರು ಕೂಡ ಎಲ್ಲಿಯೂ ಸುಮಲತಾರಿಗೆ ಅಡ್ಡಿಪಡಿಸಿಲ್ಲ. ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ, ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳಬೇಕು. ರಾಜಕೀಯವಾಗಿ ಯಾರೇ ಏನು ಬೇಕಾದರೂ ಹೇಳಿಕೆ ಕೊಡಬಹುದು. ಆದರೆ, ಯಾರೂ ಎಲ್ಲಿಯೂ ಅಡ್ಡಿಪಡಿಸಿಲ್ಲ ಎನ್ನುವುದು ಸತ್ಯ. ಇದೊಂದು ರಾಜಕೀಯ ಅಷ್ಟೇ ಎಂದು ಸುಮಲತಾಗೆ ಲೇವಡಿ ಮಾಡಿದ್ದಾರೆ.

ಕೆಆರ್​ಎಸ್ ಅಧಿಕಾರಿಗಳ ಜತೆಗೂ ನಾನು ಮಾತನಾಡಿದ್ದೇನೆ. ಅಲ್ಲಿಯೂ ಯಾವುದೇ ಸಮಸ್ಯೆ ಇಲ್ಲ ಎಂದು ನನಗೆ ಹೇಳಿದ್ದಾರೆ. ಈ ಹಿಂದೆಯೂ ದಶಪಥ ರಸ್ತೆ ಮಾಡಲು ಬಿಡಲಿಲ್ಲ. ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡಲು ಅಡ್ಡಿಪಡಿಸಿದರು. ಸುಳ್ಳು ನೆಪಗಳನ್ನ ಹೇಳಿ ಕೆಲಸಕ್ಕೆ ತೊಂದರೆ ಮಾಡಿದರು ಎಂದಿರುವ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಪರೋಕ್ಷವಾಗಿ ಸುಮಲತಾ ಅವರ ಹೇಳಿಕೆಗಳಿಗೆ ತಿರುಗೇಟು ನೀಡುವ ಮೂಲಕ, ಕುಮಾರಸ್ವಾಮಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕೊರೊನಾ ಬಗ್ಗೆ ಎಚ್ಚರವಿರಲಿ ಕೊರೊನಾ ಲಾಕ್​ಡೌನ್​ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯ ಬಗ್ಗೆ ಮಾತನಾಡಿರುವ ಪ್ರತಾಪ್ ಸಿಂಹ, ಜುಲೈ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ಭೀತಿ ಇದೆ. ಮತ್ತೆ ಲಾಕ್​ಡೌನ್ ಎಚ್ಚರಿಕೆ ನೀಡಿರುವ ಸಿಎಂ ಯಡಿಯೂರಪ್ಪ ಅವರ ಮಾತನ್ನು ಮೈಸೂರಿನ ಜನ ಗಂಭೀರವಾಗಿ ಪರಿಗಣಿಸಬೇಕು. ಪಕ್ಕದ ಕೇರಳದಲ್ಲಿ ಪ್ರತಿನಿತ್ಯ 15 ಸಾವಿರ ಪ್ರಕರಣಗಳು ಬರುತ್ತಿವೆ. ಮೈಸೂರಿನಿಂದ ಕೇರಳಕ್ಕೂ, ಕೇರಳದಿಂದ ಮೈಸೂರಿಗೂ ಜನ ಓಡಾಡುತ್ತಿದ್ದಾರೆ. ಆದರೆ, ಜನರು ಬಹಳ ಎಚ್ಚರಿಕೆಯಿಂದ ಓಡಾಡಬೇಕು. ಎಲ್ಲರೂ ಯಾಮಾರಿದರೆ ಕೊರೊನಾ ಮತ್ತೆ ಜಾಸ್ತಿಯಾಗುತ್ತದೆ. ಸರ್ಕಾರಕ್ಕೆ ಜನರ ಸಹಕಾರ ಬಹಳ ಮುಖ್ಯ ಎಂದು ಮೈಸೂರಿನ ಜನರಿಗೆ‌ ಸಂಸದ ಪ್ರತಾಪ್ ಸಿಂಹ ಕಿವಿಮಾತು ಹೇಳಿದ್ದಾರೆ.

ದಕ್ಷರು ಎಂದು ತೋರಿಸಿಕೊಳ್ಳಲು ಸಾವಿನ ವರದಿ ಮುಚ್ಚಿಟ್ಟಿದ್ದಾರೆ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿರುವ ಸಂಸದ ಪ್ರತಾಪ್​ ಸಿಂಹ, ಸಾವೇ ಮೋಸ, ಆದರೆ ಸತ್ತ ಮೇಲೂ ಮೋಸ ಮಾಡಲಾಗುತ್ತಾ? ಮೈಸೂರು ಜಿಲ್ಲೆಯಲ್ಲಿ 350 ಸಾವಿನ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಹಿಂದಿನ ಅಧಿಕಾರಿಗಳು ಸಾವಿನ ವರದಿ ಮುಚ್ಚಿಟ್ಟಿದ್ದಾರೆ. ಇದು ಸತ್ತ ಮೇಲೂ ಮೋಸ ಮಾಡಿದ ಹಾಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಾದ ಕೊವಿಡ್ ಸಾವಿನ ವರದಿ ಬಗ್ಗೆ ಪ್ರಸ್ತಾಪಿಸುವ ವೇಳೆ ಹೆಸರು ಹೇಳದೇ ಕಿಡಿಕಾರಿದ ಪ್ರತಾಪ್ ಸಿಂಹ, ದಕ್ಷರು ಎಂದು ತೋರಿಸಿಕೊಳ್ಳಲು ಸಾವಿನ ವರದಿ ಮುಚ್ಚಿ ಹಾಕಿದ್ದಾರೆ ಎಂದು ಪರೋಕ್ಷವಾಗಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಬಿರುಕು ವಿವಾದ: ಸಿಬಿಐ ತನಿಖೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಸುಮಲತಾ ಒತ್ತಾಯ 

ಕೆಆರ್​ಎಸ್​ನಲ್ಲಿ ಬಿರುಕಿಲ್ಲ ಎಂದು ಇಂಜಿನಿಯರ್​ಗಳೇ ಹೇಳಿದರೂ ಜಗ್ಗದ ಸುಮಲತಾ; ಅಂದು ಟೀಕಿಸಿದ್ದ ಜೆಡಿಎಸ್​ ನಾಯಕರ ವಿರುದ್ಧ ತನಿಖೆ ಅಸ್ತ್ರ?