ಹಿಮಾಚಲದತ್ತ ಡಿಕೆ ಶಿವಕುಮಾರ್: ಪಕ್ಷದ ಹಿತವೇ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ, ಅಶೋಕ್ ಆಗ್ರಹ

|

Updated on: Feb 28, 2024 | 9:41 AM

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ರಾಜ್ಯದ ಜನತೆಗೆ ನೀರು ಸಿಗದಂತೆ ಮಾಡಿದ್ದು ಸಾಲದೆ ಈಗ ಕಾಂಗ್ರೆಸ್ ಬಿಕ್ಕಟ್ಟು ಬಗೆಹರಿಸಲು ಹಿಮಾಚಲ ಪ್ರದೇಶಕ್ಕೆ ಹೋಗುವುದಾದರೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ಬೆಂಗಳೂರಿನ ಜನ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವಾಗ ಕನ್ನಡಿಗರ ಹಿತಕಿಂತಲೂ ಪಕ್ಷದ ಹಿತವೇ ನಿಮಗೆ ಮುಖ್ಯವಾದರೆ ಆಡಳಿತ ಬಿಟ್ಟು ಪೂರ್ಣವಾಗಿ ಪಕ್ಷದ ಜವಾಬ್ದಾರಿಯನ್ನೇ ವಹಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.

ಹಿಮಾಚಲದತ್ತ ಡಿಕೆ ಶಿವಕುಮಾರ್: ಪಕ್ಷದ ಹಿತವೇ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ, ಅಶೋಕ್ ಆಗ್ರಹ
ಆರ್ ಅಶೋಕ & ಡಿಕೆ ಶಿವಕುಮಾರ್
Follow us on

ಬೆಂಗಳೂರು, ಫೆಬ್ರವರಿ 28: ಹಿಮಾಚಲ ಪ್ರದೇಶ (Himachal Pradesh) ಕಾಂಗ್ರೆಸ್​​ನಲ್ಲಿ (Congress) ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅಲ್ಲಿಗೆ ತೆರಳುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ಕಿಡಿಕಾರಿದ್ದಾರೆ. ನೀರಿನ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳನ್ನು ರಾಜ್ಯದ ಜನತೆ ಎದುರಿಸುತ್ತಿರುವಾಗ, ಅವುಗಳಿಗಿಂತಲೂ ಪಕ್ಷದ ಸಮಸ್ಯೆಯೇ ನಿಮಗೆ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿ. ಪೂರ್ಣಾವಧಿಗೆ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯಿರಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ತೆಲಂಗಾಣ ಚುನಾವಣೆಗಾಗಿ ರಾಜ್ಯವನ್ನು ಮೈಮರೆತು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ರಾಜ್ಯದ ಜಲಾಶಯಗಳನ್ನ ಬರಿದು ಮಾಡಿದ್ದಾಯ್ತು. ಈಗ ಹಿಮಾಚಲ ಪ್ರದೇಶದ ರಾಜಕೀಯ ಉಸಾಬರಿಗಾಗಿ ರಾಜ್ಯ ಬಿಟ್ಟು ಹೋದರೆ ನೀರಿಲ್ಲದೆ ಪರದಾಡುತ್ತಿರುವ ಬೆಂಗಳೂರಿನ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಯಾರು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ್ದಾರೆ.

ತಮ್ಮ ‘ಆತ್ಮಸಾಕ್ಷಿ’ಗೆ ಕನ್ನಡಿಗರ ಹಿತಕ್ಕಿಂತ ಪಕ್ಷದ ಹಿತವೇ ಮುಖ್ಯವಾದರೆ ರಾಜೀನಾಮೆ ಕೊಟ್ಟು ಪೂರ್ಣಾವಧಿ ಅಧ್ಯಕ್ಷರಾಗಿ ಪಕ್ಷದ ಕೆಲಸ ಮಾಡಿ. ಅದು ಬಿಟ್ಟು ಕೇವಲ ಅಧಿಕಾರಕ್ಕಾಗಿ ಬೆಂಗಳೂರು ಅಭಿವೃದ್ಧಿ, ನೀರಾವರಿ ಅಂತಹ ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡು ಕರ್ತವ್ಯ ವಂಚನೆ ಮಾಡಿ ಪದೇ ಪದೇ ಕನ್ನಡಿಗರಿಗೆ ದ್ರೋಹ ಮಾಡಬೇಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ ಆರೋಪ, ರಾತ್ರಿ ಬಿಜೆಪಿ ಭಾರಿ ಪ್ರತಿಭಟನೆ: ಕಮಲ ನಾಯಕರು ಪೊಲೀಸ್ ವಶಕ್ಕೆ, ಸಿಎಆರ್​ ಮೈದಾನದಲ್ಲಿ ಹೈಡ್ರಾಮಾ!

ಮಂಗಳವಾರ ರಾಜ್ಯಸಭೆ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಆರ್ ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪರ ಮತ ಚಲಾಯಿಸಿದ್ದರು. ಇದು ಹಿಮಾಚಲ ಪ್ರದೇಶ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ಸಮಸ್ಯೆ ಬಗ್ಗೆ ಹರಿಸುವ ಜವಾಬ್ದಾರಿಯನ್ನು ಭೂಪಿಂದರ್ ಸಿಂಗ್ ಹೂಡಾ ಮತ್ತು ಡಿಕೆ ಶಿವಕುಮಾರ್​ಗೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಶಿಮ್ಲಾಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ್

ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂದು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದೇವೆ. ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ