ಹಿಂದೂ ಧರ್ಮದ ಮೇಲೆ ನಡೆದಷ್ಟು ದಾಳಿ ಬೇರೆ ಧರ್ಮದ ಮೇಲೆ ನಡೆದಿಲ್ಲ: ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2023 | 9:15 PM

ಹಿಂದೂ ಧರ್ಮದ ಮೇಲೆ ನಡೆದ ದಾಳಿ ಬೇರೆ ಯಾವ ಧರ್ಮದ ಮೇಲೂ ನಡೆದಿಲ್ಲ. ಅದನ್ನ ಮೆಟ್ಟಿ ನಿಂತಿದ್ದೇವೆ ಅಂದರೆ ಅದಕ್ಕೆ ನಮ್ಮ ಪರಂಪರೆ, ಆಚರಣೆ ಸಾಕ್ಷಿ ಎಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಹಿಂದೂ ಧರ್ಮದ ಮೇಲೆ ನಡೆದಷ್ಟು ದಾಳಿ ಬೇರೆ ಧರ್ಮದ ಮೇಲೆ ನಡೆದಿಲ್ಲ: ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ
Follow us on

ರಾಯಚೂರು, ಅಕ್ಟೋಬರ್​​​​ 15: ಹಿಂದೂ ಧರ್ಮದ ಮೇಲೆ ನಡೆದ ದಾಳಿ ಬೇರೆ ಯಾವ ಧರ್ಮದ ಮೇಲೂ ನಡೆದಿಲ್ಲ. ಅದನ್ನ ಮೆಟ್ಟಿ ನಿಂತಿದ್ದೇವೆ ಅಂದರೆ ಅದಕ್ಕೆ ನಮ್ಮ ಪರಂಪರೆ, ಆಚರಣೆ ಸಾಕ್ಷಿ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠ ಮಾನ್ಯಗಳಿಲ್ಲದೇ ಇದ್ದರೆ ಭಾರತ ನಾಶವಾಗಿ ಹೋಗುತ್ತಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗೆ ರಾಜಕಾರಣದಲ್ಲಿ ಧರ್ಮ ಸೇರಿಕೊಂಡಿದೆ. ಓರ್ವ ಸಂತ ರಾಜ್ಯವನ್ನ ಮುನ್ನಡೆಸುತ್ತಿದ್ದಾರೆ. ಸಾತ್ವಿಕ ತಪ್ಪಸ್ವಿಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮುನ್ನ ನಡೆಸುತ್ತಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಮಠ ಮಾನ್ಯಗಳಿಗೆ ಅನುದಾನ ನೀಡುವ ಸಂಸ್ಕೃತಿ ಹುಟ್ಟುಹಾಕಿದ್ದು ನಾನೇ. ಯಾವುದೇ ಧರ್ಮದ ಬಗ್ಗೆ ತುಷ್ಟೀಕರಣ, ಓಲೈಕೆ ಮಾಡದೇ ಎಲ್ಲರಿಗೂ ಸಮಾನ ಅನುದಾನ ಹಂಚಿಕೆ ಮಾಡಿ. ಬಸವಣ್ಣನವರ ಆಶಯ ಪಾಲಿಸಿರಿ ಎಂದು ರಾಜಕಾರಣಿಗಳಿಗೆ ಸಲಹೆ ನೀಡಿದ್ದಾರೆ.

ಸರ್ಕಾರ ದಿವಾಳಿಯಾಗಿದೆ ಅಂತಾ ಅವರೇ ಒಪ್ಪಿಕೊಂಡಿದ್ದಾರೆ

ಗ್ಯಾರಂಟಿ ಕೊಡುತ್ತೇನೆ ಅಂತಾ ಹೇಳಿ ಖಜಾನೆ ಖಾಲಿ ಮಾಡಿದ್ದಾರೆ‌. ರಸ್ತೆ ಕಾಮಗಾರಿ, ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ ಅಂತಾ ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಇದ್ದಾಗ ಗುತ್ತಿಗೆದಾರರು ಆರೋಪ ಮಾಡಿದ್ದರು. ಈಗಲೂ ಗುತ್ತಿಗೆದಾರರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಕೆಲಸ ಕಾರ್ಯ ನಿಲ್ಲಿಸುತ್ತೇವೆ ಅಂತಾ ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ: ಕುಮಾರಸ್ವಾಮಿ ಈ ಮಾತು ಹೇಳಿದ್ಯಾರಿಗೆ?

ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿದ ಅವರು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಹಿತವನ್ನು ಸಂಪೂರ್ಣ ಮರೆತಿದೆ. ಬೇರೆ ಕಡೆ ವಿದ್ಯುತ್ ಖರೀದಿ ಮಾಡಿ ಸಮಸ್ಯೆ ಬಗೆಹರಿಸಬೇಕು. ನಮ್ಮ ಅವಧಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿದ್ದೆವು. ರಾಜ್ಯ ಕಾಂಗ್ರೆಸ್​ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ.

ಶೀಘ್ರದಲ್ಲಿ ರಾಜ್ಯ ಬಿಜೆಪಿ ಘಟಕಕ್ಕೆ ಅಧ್ಯಕ್ಷರ ನೇಮಕ

ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ತಕರಾರಿಲ್ಲ. ಸರ್ಕಾರ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿ. ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಲೋಕಸಭೆ‌ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಗುರಿಯಿದೆ. ಶೀಘ್ರದಲ್ಲಿ ರಾಜ್ಯ ಬಿಜೆಪಿ ಘಟಕಕ್ಕೆ ಅಧ್ಯಕ್ಷರ ನೇಮಕವಾಗಲಿದೆ ಎಂದರು.

ಇದನ್ನೂ ಓದಿ: ಇದೊಂದು ಬೇಸ್​ಲೆಸ್ ಆರೋಪ: ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಹಗರಣ ಬಯಲಿಗೆ ಬರುತ್ತಿವೆ. ಸಿಎಂ, ಡಿಸಿಎಂ ಈ ಬಗ್ಗೆ ಕ್ರಮಕೈಗೊಳ್ಳದೆ ಇರುವುದು ದುರ್ದೈವ. ಐಟಿ ಅಧಿಕಾರಿಗಳ ದಾಳಿ ವೇಳೆ ಕೋಟಿ ಕೋಟಿ ರೂ. ಹಣ ಸಿಕ್ಕಿದೆ. ಕಲಾವಿದರಿಂದಲೂ ಲಂಚ ಕೇಳುವ ಕೀಳುಮಟ್ಟಕ್ಕೆ ಸರ್ಕಾರ ಬಂದಿದೆ. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಮಾಡಬೇಕು. ಮುಂದಿನ ಚುನಾವಣೆಗೆ ಇಟ್ಟ ಹಣ ಅನ್ನೋ ಆರೋಪ ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:13 pm, Sun, 15 October 23