ಸರ್ಕಾರಿ ಶಾಲಾ ಶಿಕ್ಷಕರಿಗೆ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ: ಸರ್ಕಾರ ನೀಡುವ ಹಣ ಹೆಚ್ಚಳಕ್ಕೆ ಮನವಿ

ಕರ್ನಾಟಕದಲ್ಲಿ ಮೊಟ್ಟೆ ದರ ಏರಿಕೆಯಿಂದ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ತೊಂದರೆಯಾಗಿದೆ. ಸರ್ಕಾರ ಮೊಟ್ಟೆಗೆ 6 ರೂ ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ರಷ್ಟಿದೆ. ಇದರಿಂದ ಮುಖ್ಯ ಶಿಕ್ಷಕರು ಸ್ವಂತ ಹಣದಿಂದ ಮೊಟ್ಟೆ ನೀಡುವಂತಾಗಿದೆ. ಹೀಗಾಗಿ, ಶಿಕ್ಷಕರು ಮೊಟ್ಟೆ ದರ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರಿಗೆ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ: ಸರ್ಕಾರ ನೀಡುವ ಹಣ ಹೆಚ್ಚಳಕ್ಕೆ ಮನವಿ
ಮೊಟ್ಟೆ ದರ ಹೆಚ್ಚಳ
Image Credit source: tv9 kannada
Edited By:

Updated on: Jul 23, 2026 | 7:14 PM

ಮುಖ್ಯಾಂಶಗಳು

  • ಬಡ ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ
  • ಸರ್ಕಾರ ನೀಡ್ತಿರೋದು 6 ರೂ, ಮಾರುಕಟ್ಟೆಯಲ್ಲಿ 8–10 ರೂ ದರ
  • ಮೊಟ್ಟೆ ದರ ಹೆಚ್ಚಿಸುವಂತೆ ಶಿಕ್ಷಕರ ಮನವಿ

ರಾಯಚೂರು, ಜುಲೈ 23: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ (Govt School) ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಅಂತ ಮೊಟ್ಟೆ (Egg) ಕೊಡುತ್ತಿದೆ. ಒಂದು ಮೊಟ್ಟೆಗೆ ಸರ್ಕಾರ ನೀಡುತ್ತಿರುವುದು ಕೇವಲ 6 ರೂ. ಆದರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 8,9,10 ರೂ ಇದೆ. ಹೀಗಾಗಿ ಮೊಟ್ಟೆ ತಗುಲುವ ಹೆಚ್ಚಿನ ದರವನ್ನು ಮುಖ್ಯ ಶಿಕ್ಷಕರೇ ತಮ್ಮ ಕೈಯಿಂದ ಕೊಡುವ ದುಸ್ಥಿತಿ ಎದುರಾಗಿದ್ದು, ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ಹಣ ನೀಡಬೇಕಾದ ಸಮಸ್ಯೆ ಎದುರಾಗಿದೆ.

ಒಂದು ಮೊಟ್ಟೆಯ ಬೆಲೆ 8 ರಿಂದ 10 ರೂ ಏರಿಕೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೊಟ್ಟೆ ದರ ಏರಿಕೆಯಾಗುತ್ತಿದ್ದು, ಅದರ ಬಿಸಿ ಈಗ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೂ ತಟ್ಟಿದೆ. ರಾಜ್ಯ ಸರ್ಕಾರ ಪ್ರತಿ ಮೊಟ್ಟೆಗೆ ಕೇವಲ 6 ರೂ ನೀಡುತ್ತಿದ್ದರೆ, ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 8 ರಿಂದ 10 ರೂ. ವರೆಗೆ ಏರಿಕೆ ಆಗಿದೆ. ಈ ಕಾರಣದಿಂದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಂತ ಹಣದಲ್ಲಿ ಮೊಟ್ಟೆ ನೀಡುತ್ತಿರುವ ಶಿಕ್ಷಕರು

ಸರ್ಕಾರದ ಆದೇಶದಂತೆ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ವಿತರಿಸಬೇಕಿದ್ದು, ಹೆಚ್ಚಿದ ದರದಿಂದ ಶಿಕ್ಷಕರಿಗೆ ಪ್ರತಿ ತಿಂಗಳು 8ರಿಂದ 10 ಸಾವಿರ ರೂ. ವರೆಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಪರಿಣಾಮವಾಗಿ ಕೆಲವು ಶಾಲೆಗಳು ಮೊಟ್ಟೆ ವಿತರಣೆಯನ್ನು ಸ್ಥಗಿತಗೊಳಿಸಿ ಬದಲಾಗಿ ಬಾಳೆಹಣ್ಣು ನೀಡುತ್ತಿವೆ.

ಇದನ್ನೂ ಓದಿ: ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ: ದಾಖಲೆ ಬರೆದ ದರ

ಇನ್ನೂ ಕೆಲವು ಶಾಲೆಗಳಲ್ಲಿ ಕೆಲ ಮಕ್ಕಳಿಗೆ ಮೊಟ್ಟೆ, ಉಳಿದವರಿಗೆ ಬಾಳೆಹಣ್ಣು ನೀಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಮೊಟ್ಟೆ ದರ ಹೆಚ್ಚಿಸಿ ಮುಖ್ಯ ಶಿಕ್ಷಕರಿಗೆ ಸಮಸ್ಯೆ ಪರಿಹರಿಸಿ ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸರ್ಕಾರ ತಕ್ಷಣವೇ ಮೊಟ್ಟೆ ದರ ಹೆಚ್ಚಿಸಬೇಕು: ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮನವಿ

ಇತ್ತ ಮೊಟ್ಟೆಯ ದರಕ್ಕೆ ಅನುಗುಣವಾಗಿ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸಬೇಕೆಂದು ಶಿಕ್ಷಕರ ಸಂಘವು ರಾಯಚೂರು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ‘ಸರ್ಕಾರ ಒಂದು ಮೊಟ್ಟೆಗೆ 6 ರೂ ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ 8ರಿಂದ 9 ರೂ.ಗೆ ಸಿಗುತ್ತಿದೆ. ಇದರಿಂದ ಶಾಲೆಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದು, ಸರ್ಕಾರ ತಕ್ಷಣವೇ ಮೊಟ್ಟೆ ದರವನ್ನು ಹೆಚ್ಚಿಸಿ ಅನುದಾನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:36 pm, Thu, 23 July 26

Follow Us