ಸೇಂದಿ ವ್ಯಸನಕ್ಕೆ ದಾರಿ ತಪ್ಪುತ್ತಿರೋ ಅಪ್ರಾಪ್ತರು,ವಯಸ್ಕರರು! ಗಡಿ ಜಿಲ್ಲೆಯಲ್ಲಿ ನಿಲ್ಲದ ಸೇಂದಿ ದಂಧೆ

ರಾಜ್ಯದ ಗಡಿ ಜಿಲ್ಲೆ ರಾಯಚೂರಿನಲ್ಲಿ ಕೂಲಿ ಕಾರ್ಮಿಕ ವರ್ಗದ ಜನರಿಗೆ ಆ ಪದಾರ್ಥ ಅಂದರೆ, ಅಚ್ಚು ಮೆಚ್ಚು. ಅತೀ ಕಡಿಮೆ ಹಣದಲ್ಲಿ ಕಿಕ್ಕೇರಿಸೋ ಆ ಪಾನಿಯಕ್ಕೆ ಜನ ದಾಸರಾಗುತ್ತಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ. ಯಾವುದು ಆ ಪಾನೀಯ ಅಂತೀರಾ? ಈ ಸ್ಟೋರಿ ಓದಿ.

ಸೇಂದಿ ವ್ಯಸನಕ್ಕೆ ದಾರಿ ತಪ್ಪುತ್ತಿರೋ ಅಪ್ರಾಪ್ತರು,ವಯಸ್ಕರರು! ಗಡಿ ಜಿಲ್ಲೆಯಲ್ಲಿ ನಿಲ್ಲದ ಸೇಂದಿ ದಂಧೆ
ಸೇಂದಿ ಮಾರಾಟಗಾರರ ಬಂಧನ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 25, 2023 | 3:20 PM

ರಾಯಚೂರು, ಡಿ.25: ಬಿಸಿಲುನಾಡು ರಾಯಚೂರಿ(Raichuru)ನಲ್ಲಿ ಬೇಸಿಗೆ ತಾಪಕ್ಕೆ ತಕ್ಕಂತೆ ಈ ಭಾಗದಲ್ಲಿ ಸಿಗುವ ಅಕ್ರಮ ಸೇಂದಿ(alchohol)ಗೆ ಇಲ್ಲಿನ ಬಡ ಜನ ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಕೂಲಿ ಕಾರ್ಮಿಕ ವರ್ಗದ ಜನ, ಬಡವರೇ ಹೆಚ್ಚಾಗಿ ಈ ಮಾರಣಾಂತೀಕ ಸೇಂದಿಗೆ ಅಡಿಕ್ಟ್ ಆಗುತ್ತಿದ್ದಾರೆ. ಒಮ್ಮೆ ಕುಡಿದ್ರೆ ಮತ್ತೆ ಮತ್ತೆ ಕುಡಿಬೇಕು ಅನ್ನಿಸುವಂತ ಈ ಸೇಂದಿ ಚಟಕ್ಕೆ ಜನ ದಾಸರಾಗುತ್ತಿದ್ದಾರೆ.

ರಾಯಚೂರು ನಗರದಲ್ಲೇ ಆ್ಯಕ್ಟೀವ್​ ಆಗಿದೆ ಸೇಂದಿ ಜಾಲ

ರಾಯಚೂರು ನಗರದಲ್ಲೇ ಹೆಚ್ಚಾಗಿ ಸೇಂದಿ ದಂಧೆ ಜಾಲ ಆಕ್ಟಿವ್ ಆಗಿದ್ದು, ಪಕ್ಕದ ಆಂಧ್ರ ಮತ್ತು ತೆಲಂಗಾಣದಿಂದ ಸೇಂದಿ ತರುತ್ತಾರೆ. ಅದರಲ್ಲೂ ಹೆಚ್ಚಾಗಿ ತೆಲಂಗಾಣದಿಂದ ಸಿಎಚ್ ಪೌಡರ್ ಎನ್ನುವ ನಿಷೇಧಿತ ಕೆಮಿಕಲ್​​ ತಂದು ದಂಧೆಕೋರರು ಸೇಂದಿ ತಯಾರಿಸುತ್ತಾರೆ. ನಂತರ ತಮ್ಮ ಕಾಂಟ್ಯಾಕ್ಟ್​ನಲ್ಲಿರುವ ವ್ಯಸನಿಗಳಿಗೆ ಇದನ್ನ ಮಾರಾಟ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕಾರ್ಮಿಕ ವರ್ಗ, ಗೂಳೆ ಹೋಗುವ ಜನರೇ ಇದ್ದಾರೆ. ಒಂದು ಲಿಟರ್ ಸೇಂದಿಗೆ ಕೇವಲ 30, 40, 50 ರೂಪಾಯಿ ಮಾತ್ರ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಮಧ್ಯವ್ಯಸನಿಗಳು ಹೆಚ್ಚಿನ ದರ ಕೊಟ್ಟು ಕ್ವಾಲಿಟಿ ಮದ್ಯ ಸೇವನೆ ಮಾಡಲ್ಲ. ಬದಲಾಗಿ ಈ ಕಡಿಮೆ ದರದ ಸೇಂದಿ ಸೇವಿಸುತ್ತಿದ್ದಾರೆ.

ಇದನ್ನೂ ಓದಿ:ರಾಯಚೂರಿನಲ್ಲಿ ಬಾಲ ಬಿಚ್ಚಿದ ಸೇಂದಿ ದಂಧೆಕೋರರು! ಮಾರುವೇಷದಲ್ಲಿ ದಾಳಿ ನಡೆಸಿದ ಅಬಕಾರಿ ಟೀಂ

ಅದರಲ್ಲೂ ದಂಧೆಕೋರರು ತಮ್ಮ ಅಪ್ರಾಪ್ತ ಮಕ್ಕಳು, ವೃದ್ಧ ಪೋಷಕರನ್ನ ಬಳಸಿಕೊಳ್ಳುತ್ತಿದ್ದಾರೆ. ಯಾಕೆಂದರೆ, ಒಂದು ವೇಳೆ ಪೊಲೀಸರಿಗೋ ಇಲ್ಲ, ಅಬಕಾರಿ ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ರೆ ತಮ್ಮನ್ನೇನು ಮಾಡಲ್ಲ ಎಂಬ ಉದ್ದೇಶದಿಂದ, ಇನ್ನು ರಾಯಚೂರಿಗೆ ರೆಲ್ವೆ ಮಾರ್ಗ, ರಸ್ತೆ ಮಾರ್ಗದ ಮೂಲಕವೇ ಹೆಚ್ಚಾಗಿ ಸಿಎಚ್​ ಪೌಡರ್ ಹಾಗೂ ಸೇಂದಿ ಸಪ್ಲೈ ಆಗುತ್ತದೆ. ಒಂದು ಕೆಜಿ ಸಿಎಚ್ ಪೌಡರ್​ನಿಂದ ಸುಮಾರು 3 ಸಾವಿರ ಲಿಟರ್​ಗೂ ಹೆಚ್ಚು ಸೇಂದಿ ತಯಾರಿಸಬಹುದು. ಹೀಗಾಗಿ ನಿಷೇಧಿತ ಸಿಎಚ್ ಪೌಡರ್​​ನಿಂದ ತಯಾರಿಸಲಾಗೋ ಸೇಂದಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ರೈಲು ಮೂಲಕವೇ ಸೇಂದಿ ಸಾಗಾಟ

ಅದರಲ್ಲೂ ರೈಲು ಮೂಲಕವೇ ದಂಧೆಕೋರರು ಹೆಚ್ಚಾಗಿ ಸೇಂದಿ ಸಾಗಾಟ ಮಾಡುತ್ತಾರೆ. ಪ್ರಯಾಣಿಕರ ಸೋಗಿನಲ್ಲಿ ಲಗೇಜ್ ಬ್ಯಾಗ್​ಗಳಲ್ಲಿ ಸೇಂದಿ ಬಾಟಲ್​ಗಳನ್ನ ತರಲಾಗುತ್ತೆ. ಬಳಿಕ ರೈಲ್ವೆ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ನಿರ್ಗತಿಕರ ಸೋಗಿನಲ್ಲಿ ಓಡಾಡುತ್ತಾ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಮೊನ್ನೆಯಷ್ಟೇ ಅಬಕಾರಿ ಟೀಂ, ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ್ದರು.

ಜೈಲಿಗೆ ಹೋಗಿ ಬಂದ್ರು ದಂಧೆ ಬಿಡುತ್ತಿಲ್ಲ

ಇದರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎರಡು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ, ದಂಧೆಕೋರರು ಮಾತ್ರ ಜೈಲಿಗೆ ಹೋಗಿ ಬಂದರೂ ಈ ದಂಧೆ ಬಿಡುತ್ತಿಲ್ಲ. ಹೀಗಾಗಿ ದಂಧೆಯಲ್ಲಿ ಭಾಗಿಯಾಗಿರೋ ಅಪ್ರಾಪ್ತರು, ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ ಈ ದಂಧೆಯನ್ನ ಬುಡ ಸಮೇತ ಕಿತ್ತು ಹಾಕಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Follow Us