AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಬಾಲ ಬಿಚ್ಚಿದ ಸೇಂದಿ ದಂಧೆಕೋರರು! ಮಾರುವೇಷದಲ್ಲಿ ದಾಳಿ ನಡೆಸಿದ ಅಬಕಾರಿ ಟೀಂ

ಈ ಸೇಂದಿ ದಂಧೆಕೋರರು ಪ್ರಯಾಣಿಕರ ಸೋಗಿನಲ್ಲಿ ರೈಲಿನ ಮೂಲಕ ಇಂದು(ಅ.17) ರಾಯಚೂರಿಗೆ ಬರುತ್ತಿದ್ದರು. ಅಪಾರ ಪ್ರಮಾಣದ ಸೇಂದಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದಿದ್ದ ಅಬಕಾರಿ ಪೊಲೀಸರು ಕೂಡ ಪ್ರಯಾಣಿಕರ ಸೋಗಿನಲ್ಲಿಯೇ ಹೋಗಿ ದಾಳಿ ಮಾಡಿ, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರಿನಲ್ಲಿ ಬಾಲ ಬಿಚ್ಚಿದ ಸೇಂದಿ ದಂಧೆಕೋರರು! ಮಾರುವೇಷದಲ್ಲಿ ದಾಳಿ ನಡೆಸಿದ ಅಬಕಾರಿ ಟೀಂ
ಬಂಧಿತ ಆರೋಪಿಗಳು, ಅಬಕಾರಿ ಡಿಸಿ
ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 17, 2023 | 9:37 PM

Share

ರಾಯಚೂರು, ಅ.17: ಬಿಸಿಲುನಾಡು ರಾಯಚೂರಿನಲ್ಲಿ ಸೇಂದಿ ದಂಧೆ(Toddy Scam)ಈಗಲೂ ಜೀವಂತವಾಗಿದೆ. ಆಂಧ್ರ, ತೆಲಂಗಾಣ ಗಡಿಯಲ್ಲಿರುವ ಕೆಲ ಗ್ರಾಮಗಳು ಸೇರಿದಂತೆ ರಾಯಚೂರು(Raichur)ನಗರದಲ್ಲಿಯೇ ದಂಧೆ ಫುಲ್​ ಆಕ್ಟಿವ್ ಆಗಿದೆ. ಸಿಎಚ್ ಪೌಡರ್ ಹೆಸರಿನ ನಿಷೇಧಿತ ಕೆಮಿಕಲ್​ನಿಂದ ಈ ಸೇಂದಿ ತಯಾರಿಸಲಾಗುತ್ತೆ. ಈ ದಂಧೆಕೋರರು ಬಡವರು, ಕೂಲಿ ಕಾರ್ಮಿಕ ವರ್ಗದ ಜನರನ್ನೇ ಟಾರ್ಗೆಟ್ ಮಾಡುತ್ತಾರೆ. ಸರ್ಕಾರದ ಪರವಾನಿಗೆ ಹೊಂದಿರುವ ಮದ್ಯಕ್ಕೆ ಹೋಲಿಸಿದ್ರೆ, ಈ ಸೇಂದಿಗೆ ಅತೀ ಕಡಿಮೆ ದರ ಇದ್ದು, ಈ ದಂಧೆಕೋರರು ರಸ್ತೆ ಮಾರ್ಗ ಹಾಗೂ ರೈಲು ಮಾರ್ಗದ ಮೂಲಕ ಸೇಂದಿ, ಸಿಎಚ್ ಪೌಡರ್ ಸರಬರಾಜು ಮಾಡುತ್ತಾರೆ. ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ , ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಬಕಾರಿ ಪೊಲೀಸರು ಪ್ರಯಾಣಿಕರ ಸೋಗಿನಲ್ಲಿಯೇ ಹೋಗಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಹೌದು, ಈ ಸೇಂದಿ ದಂಧೆಕೋರರು ಪ್ರಯಾಣಿಕರ ಸೋಗಿನಲ್ಲಿ ರೈಲಿನ ಮೂಲಕ ಇಂದು(ಅ.17) ರಾಯಚೂರಿಗೆ ಬರುತ್ತಿದ್ದರು. ಅಪಾರ ಪ್ರಮಾಣದ ಸೇಂದಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದಿದ್ದ ಅಬಕಾರಿ ಪೊಲೀಸರು ಕೂಡ ಪ್ರಯಾಣಿಕರ ಸೋಗಿನಲ್ಲಿ ರಾಯಚೂರು ನಗರದ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಇನ್ನೇನು ತೆಲಂಗಾಣದ ಕೃಷ್ಣಾ ಕಡೆಯಿಂದ ಬಂದ ಟ್ರೈನ್​ನಲ್ಲಿ ಸೇಂದಿ ದಂಧೆಕೋರರು ಮಾಲು ಸಮೇತ ಕೆಳಗಿಳಿದಿದ್ದೆ ತಡ, ಅಬಕಾರಿ ಟೀಂ ಆ ದಂಧೆಕೋರರನ್ನು ಲಾಕ್ ಮಾಡಿದರು.

ಇದನ್ನೂ ಓದಿ:ಜನರ ಕಣ್ಣಿಗೆ ಹೈಪೈ ಲೈಫ್, ಮಾಡೋದು ಮಣ್ಣು ತಿನ್ನುವ ಕೆಲಸ: ಸೇಂದಿ ಮಾಫಿಯಾದ ಕಿಲಾಡಿ ದಂಪತಿ ಅರೆಸ್ಟ್

ಆರು ಜನ ಆರೋಪಿಗಳು ವಶಕ್ಕೆ

ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ತಡ ಸುಳ್ಳು ಹೇಳುವುದಕ್ಕೆ ಯತ್ನಿಸಿದ್ದ ಆರೋಪಿಗಳು, ತಮ್ಮ ಮಾಲು ಸಮೇತ ಸೆರೆ ಸಿಕ್ಕಿದ್ದಾರೆ. ಸುಬ್ಬಲಮ್ಮ, ರಾಮಾಂಜಿನೆಯ, ಲಕ್ಷ್ಮಿ, ನರಸಮ್ಮ, ಚಿನ್ನಿಕುಮಾರ್ ಸೇರಿದಂತೆ 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆರೋಪಿಗಳು ಸಾಗಾಟ ಮಾಡುತ್ತಿದ್ದ 120 ಕ್ಕೂ ಹೆಚ್ಚು ಲೀಟರ್ ಸೇಂದಿಯನ್ನು ಜಪ್ತಿ ಮಾಡಿದ್ದಾರೆ. ಬಂಧಿತರೆಲ್ಲರೂ ರಾಯಚೂರು ನಗರದ ನಿವಾಸಿಗಳಾಗಿದ್ದು, ತೆಲಂಗಾಣ, ಆಂಧ್ರದಿಂದ ಸೇಂದಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಒಂದು ಲೀಟರ್ ಸೇಂದಿಗೆ ಬರೀ 10 ರಿಂದ 20 ರೂಪಾಯಿ ಅಷ್ಟೆ. ಹೀಗಾಗಿ ಕಾರ್ಮಿಕ ವರ್ಗದ ಜನ ಹೆಚ್ಚಾಗಿ ಇದೇ ಸೇಂದಿಗೆ ದಾಸರಾಗಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿಟ್ಟುಕೊಂಡು ತಮ್ಮ ಖಾಯಂ ಗಿರಾಕಿಗಳಿಗೆ ಮಾತ್ರ ಸೇಂದಿ ಮಾರಾಟ ಮಾಡಲಾಗುತ್ತೆ.

ಸದ್ಯ ಘಟನೆ ಸಂಬಂಧ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ತೆಲಂಗಾಣದಿಂದ ಸಪ್ಲೈ ಯಾರು ಮಾಡುತ್ತಾರೆ. ಅವರ ನೆಟ್​ವರ್ಕ್ ಹೇಗೆಲ್ಲಾ? ಆಪರೇಟ್​ ಆಗುತ್ತಿದೆ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ