ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ: ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ
ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಹಾಗೆಯೇ 60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಅಸಹಾಯಕ ಭಿಕ್ಷುಕರ ಬಗ್ಗೆ ಎಲ್ಲರಿಗೂ ಕರುಣೆ ಬರುವುದು ಸಾಮಾನ್ಯ. ಆದರೆ ಇತ್ತೀಚೆಗೆ ರಾಜ್ಯಾದ್ಯಂತ ಭಿಕ್ಷಾಟನೆ ದಂಧೆಯಾಗಿ ಮಾರ್ಪಟ್ಟಿದೆ. ಭಿಕ್ಷಾಟನೆ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರ ಮಧ್ಯೆ ರಾಯಚೂರಿನ ಭಿಕ್ಷುಕಿ ದೇವಸ್ಥಾನದ ಅಭಿವೃದ್ಧಿಗೆ ಬರೋಬ್ಬರಿ 1.83 ಲಕ್ಷ ದೇಣಿಗೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ರಾಯಚೂರು, (ಆಗಸ್ಟ್ 08): ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು (beggar) ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಅದರಂತೆ60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾಳೆ. ಹೌದು.. ರಾಯಚೂರು (Raichuru) ತಾಲೂಕಿನ ಬಿಜನಗೇರಾ ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು 1.83 ಲಕ್ಷ ರೂ. ದೇಣಿಗೆ ನೀಡಿ ಗಮನಸೆಳೆದಿದ್ದಾಳೆ. ಬಿಜನಗೇರಾ ಗ್ರಾಮದ 60 ವರ್ಷದ ರಂಗಮ್ಮ ಬಿಕ್ಷೆ ಎತ್ತಿದ್ದ ಬರೋಬ್ಬರಿ 1.83 ಲಕ್ಷ ರೂಪಾಯಿ ಹಣವನ್ನು ಊರಿನ ಆಂಜನೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೀಡಿದ್ದಾಳೆ. ಈ ಮೂಲಕ ಭಿಕ್ಷಾಟನೆ ಹಣದಲ್ಲಿ ಮಜಾ ಉಡಾಯಿಸೋರ ಮಧ್ಯೆ ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ ಎನಿಸಿಕೊಂಡಿದ್ದಾಳೆ.
ಕಳೆದ ಆರು ವರ್ಷಗಳಿಂದ ಬಿಕ್ಷಾಟನೆಯಿಂದ ಬಂದಿದ್ದ ಹಣವನ್ನು ಮೂರು ಗೋಣಿ ಚೀಲದಲ್ಲಿ ಸಂಗ್ರಹಿಸಿಟಿದ್ದ ನೋಟುಗಳು, ಚಿಲ್ಲರೆ ಹಣವನ್ನು 20 ಕ್ಕು ಹೆಚ್ಚು ಜನರು ಬರೋಬ್ಬರಿ 6 ಗಂಟೆಗಳ ಕಾಲ ಎಣಿಕೆ ಮಾಡಿದ್ದಾರೆ. ಈ ವೇಳೆ ಗೋಣಿ ಚೀಲದಲ್ಲಿ ತೇವಗೊಂಡಿದ್ದ 20 ಸಾವಿರ ಮೌಲ್ಯದ ನೋಟುಗಳು ಹಾಳಾಗಿರುವುದು ಕಂಡುಬಂದಿದೆ. ಆಂಧ್ರ ಮೂಲದ ರಂಗಮ್ಮ 40 ವರ್ಷಗಳ ಹಿಂದೆಯೇ ಬಿಜ್ಜನಗೆರಾ ಗ್ರಾಮಕ್ಕೆ ಆಗಮಿಸಿದ್ದು, ಅಂದಿನಿಂದಲೇ ಭಿಕ್ಷಾಟನೆ ಮಾಡುತ್ತಿದ್ದಾಳೆ.
ಇದನ್ನೂ ಓದಿ: Viral Post: ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ
ಬೈಕ್ ಸವಾರರು, ಆಟೋ ಸೇರಿ ವಿವಿಧ ವಾಹನಗಳ ಸವಾರರಿಂದ ಮಾತ್ರ ಭಿಕ್ಷೆ ಬೇಡುತ್ತಿದ್ದಳು. ಈ ಹಿಂದೆ ಆಕೆಯ ಭಿಕ್ಷಾಟನೆ ಹಣದಲ್ಲೇ ಗ್ರಾಮಸ್ಥರು 1 ಲಕ್ಷ ವೆಚ್ಚದಲ್ಲಿ ಆಕೆಗೆ ಸೂರು ನಿರ್ಮಿಸಿ ಕೊಟ್ಟಿದ್ದರು. ಈಗ ಭಿಕ್ಷಾಟನೆ ಹಣದಲ್ಲಿ ಮಜಾ ಉಡಾಯಿಸುವವರ ಮಧ್ಯೆ ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ ರಂಗಮ್ಮ ಎಣಿಸಿಕೊಂಡಿದ್ದಾಳೆ.
ಯಾರ ಬಳಿಯೂ ಮಾತನಾಡದ ವೃದ್ಧೆ ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರೇ ಹಣವನ್ನ ಎಣಿಸಿ, ಈ ಹಣ ಏನು ಮಾಡುತ್ತಿಯಾ ಅಂತ ವೃದ್ಧೆಯನ್ನ ಕೇಳಿದ್ದಾರೆ. ಆಗ ಆಕೆ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾಳೆ. ಇದರೊಂದಿಗೆ ರಂಗಮ್ಮ ಭಿಕ್ಷುಕಿಯಾದ್ರು ಮಹಾದಾನಿಯಾಗಿದ್ದಾಳೆ.
4*5 ಅಡಿ ಸೂರಿನಲ್ಲೇ ಇರುವ ರಂಗಮ್ಮಳಿಗೆ ಜನ ಇದ್ದಲ್ಲಿಗೆ ಬಂದು ಭಿಕ್ಷೆ ಕೊಟ್ಟು ಹೋಗುತ್ತಾರೆ. ಊರಿನವರೇ ಸೀರೆ, ಊಟ ಕೊಡುತ್ತಿದ್ದಾರೆ. ದಾರಿಹೋಕರು, ಆಟೋ ರಿಕ್ಷಾ ಚಾಲಕರು, ಟಂಟಂ ಚಾಲಕರು ವೃದ್ಧೆಗೆ ಹಣ ನೀಡಿದರೆ ತಮ್ಮ ವ್ಯಾಪಾರ ಜೋರಾಗಿ ನಡೆಯುತ್ತದೆ ಎಂದು ನಿತ್ಯ ಹತ್ತು, ಇಪ್ಪತ್ತು, ನೂರು ರೂಪಾಯಿ ಸೇರಿ ತಿಳಿದಷ್ಟು ಕೊಡುತ್ತಾರೆ. ಈ ಭಿಕ್ಷೆಯ ಹಣವನ್ನೇ ವೃದ್ಧೆ ದೇವಸ್ಥಾನದ ನಿರ್ಮಾಣಕ್ಕೆ ತನ್ನ ಸೇವೆಯೂ ಇರಲಿ ಎಂದು ನೀಡಿದ್ದಾರೆ.
ಇತ್ತೀಚಿಗೆ ದೇವಸ್ಥಾನ ಲೋಕಾರ್ಪಣೆಯಾಗಿದ್ದು, ಈ ವೇಳೆ ದಾನ ಮಾಡಿದ್ದ ರಂಗಮ್ಮಳ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಕೆಯನ್ನು ಕರೆದು ಸನ್ಮಾನಿಸಿ ಗೌರವಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Fri, 8 August 25



