ರಾಯಚೂರು, ಜ.24: ರಾಜ್ಯ ಸರ್ಕಾರ ಬಾಡಿಗೆ ಹಣ ಬಿಡುಗಡೆ ಮಾಡದ ಪರಿಣಾಮ ಜಿಲ್ಲೆಯಲ್ಲಿ (Raichur) ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳು (Anganwadi centers) ಸಂಕಷ್ಟಕ್ಕೆ ಸಿಲುಕಿವೆ. ಕೆಲವು ಕಾರ್ಯಕರ್ತೆಯರು ಪತಿಯ ಹಣದಲ್ಲಿ ಬಾಡಿಗೆ ಕಟ್ಟುತ್ತಿದ್ದು, ಇನ್ನೂ ಕೆಲವರು ಬಡ್ಡಿಗೆ ಸಾಲು ಪಡೆದು ಕಟ್ಟಡದ ಬಾಡಿಗೆ ಕಟ್ಟುವಂತಾಗಿದೆ. ಹಣ ಬಿಡುಗಡೆಯಾಗದ ಹಿನ್ನೆಲೆ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ.
ಜಿಲ್ಲೆಯ ಅಂಗನವಾಡಿಗಳಿಗೆ ರಾಜ್ಯ ಸರ್ಕಾರ ಕಳೆದ 6-8 ತಿಂಗಳುಗಳಿನಿಂದ ಬಾಡಿಗೆ ಹಣ ಬಿಡುಗಡೆ ಮಾಡದೆ ಬಾಕಿ ಇರಿಸಿಕೊಂಡಿದೆ. ಇದರಿಂದಾಗಿ ಬಾಡಿಗೆ ಕಟ್ಟಲು ಆಗದೆ ಅಂಗನವಾಡಿ ಕಾರ್ಯಕರ್ತೆಯರು ಗೋಳಾಡುತ್ತಿದ್ದಾರೆ. ಕೆಲವರು ಬಡ್ಡಿಗೆ ಸಾಲ ತಂದು ಬಾಡಿಗೆ ಕಟ್ಟುತ್ತಿದ್ದು, ಇನ್ನು ಕೆಲವರು ಪತಿ ದುಡಿದ ಹಣದಿಂದ ಬಾಡಿಗೆ ಪಾವತಿಸಿ ಅಂಗನವಾಡಿ ಕೇಂದ್ರಗಳನ್ನು ತೆರೆಯುತ್ತಿದ್ದಾರೆ.
ನಗರದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ 4000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಟ್ಟಡಕ್ಕೆ 2000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಒಟ್ಟು 2,856 ಅಂಗನವಾಡಿಗಳ ಪೈಕಿ 808 ಬಾಡಿಗೆ ಕಟ್ಟಡಗಳ ಬಾಡಿಗೆ ಹಣ ಬಾಕಿ ಇರಿಸಲಾಗಿದೆ.
ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ಕೋಟ್ಯಂತರ ರೂಪಾಯಿ ಬಾಡಿಗೆ ಬಾಕಿಯಿಂದಾಗಿ ಅಂಗನವಾಡಿ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಬಾಡಿಗೆ ಹಣ ಬಿಡುಗಡೆ ಮಾಡುವಂತೆ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.
ಮಾತನಾಡಿದ ಬಾಡಿಗೆ ಹಣ ಕಟ್ಟಲಾಗದೇ ಟಿವಿ9 ಜೊತೆ ಅಳಲು ತೋಡಿಕೊಂಡ ಅಂಗನವಾಡಿ ಕಾರ್ಯಕರ್ತೆ ಭುವನೇಶ್ವರಿ, ನಂಗೆ ಮನೆಯವರಿಲ್ಲ (ಗಂಡ ಇಲ್ಲ). ಬಹಳ ಕಷ್ಟ ಆಗುತ್ತಿದೆ. ನನಗೆ ಮೂವರು ಮಕ್ಕಳಿದ್ದಾರೆ. ನನ್ನ ಜೀವನ ನಡೆಯುತ್ತಿರುವುದೇ ಅಂಗನವಾಡಿಯಿಂದಾಗಿದೆ. ಕಳೆದ ಐದು ತಿಂಗಳಿನಿಂದ ಬಾಡಿಗೆ ಬಾಕಿ ಇರಿಸಲಾಗಿದ್ದು, ಎಲ್ಲಾ ಖರ್ಚು ಸೇರಿ 25 ಸಾವಿರ ರೂಪಾಯಿ ಬಾಕಿ ಇದೆ ಎಂದು ಹೇಳಿದ್ದಾರೆ.
ಬೇರೆ ಶಿಕ್ಷಕರು ನಮಗೆ ಸಹಾಯ ಮಾಡುತ್ತಿದ್ದಾರೆ. ಸಂಸಾರ ನಡೆಸಲು ಆಗುತ್ತಿಲ್ಲ. ಪದೇ ಪದೇ ಹಣ ಕೇಳಲು ಅಂಜಿಕೆ ಆಗುತ್ತಿದೆ. ಆದರೂ ಬಾಡಿಗೆ ಕಟ್ಟಬೇಕಲ್ವ ಅಂತ ಅಳಲು ತೋಡಿಕೊಂಡಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಪದ್ಮಾ, 8 ತಿಂಗಳ ಬಾಡಿಗೆ ಕೊಟ್ಟಿಲ್ಲ, 8 ತಿಂಗಳಾದರೂ ತರಕಾರಿ ಬಿಲ್ ಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಜೆಟ್ ಬಂದ ಮೇಲೆ ಕೊಡುತ್ತೇವೆ, ನಾವೇನು ಮಾಡೋಣ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಆರು ತಿಂಗಳ ಫೋನ್ ಬಿಲ್ ಕೂಡ ಕೊಟ್ಟಿಲ್ಲ. ಆದರೂ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದರು.
ಬಾಡಿಗೆ ಪಡೆಯಲು ಅಡ್ವಾನ್ಸ್ ಕಟ್ಟಬೇಕು. ಕಳೆದ ಎಂಟು ತಿಂಗಳಿನಿಂದ ಗ್ರಾಮೀಣ ಭಾಗದಲ್ಲಿ, ನಾಲ್ಕು ತಿಂಗಳಿನಿಂದ ನಗರ ಪ್ರದೇಶದಲ್ಲಿ ಬಾಡಿಗೆ ಕೊಟ್ಟಿಲ್ಲ ಅಂತ ಪದ್ಮಾ ಅವರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ