ರಾಜ್ಯದಲ್ಲಿ ಬರಗಾಲ..ಇತ್ತ ಮಂತ್ರಾಲಯಕ್ಕೂ ತಟ್ಟಿದ ಬಿಸಿ! ತುಂಗಭದ್ರಾ ನದಿ ಖಾಲಿ, ಪುಣ್ಯ ಸ್ನಾನವಿಲ್ಲದೇ ಭಕ್ತರು ಬೇಸರ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 2:49 PM

ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಇಡೀ ರಾಜ್ಯದಲ್ಲೇ ಬರಗಾಲದ ಛಾಯೆ ಮೂಡಿದೆ. ಮಳೆಯಾಗದ ಹಿನ್ನೆಲೆ ರೈತರು ಆತಂಕಕ್ಕೊಳಗಾಗಿದ್ದಾರೆ. ಇತ್ತ ಬರಗಾಲದ ಎಫೆಕ್ಟ್ ಮಂತ್ರಾಲಯದ ಭಕ್ತರಿಗೂ ತಟ್ಟಿದ್ದು, ಪುಣ್ಯ ಸ್ನಾನವಿಲ್ಲದೇ ಭಕ್ತರು ಪರದಾಡುತ್ತಿದ್ದಾರೆ.

ರಾಜ್ಯದಲ್ಲಿ ಬರಗಾಲ..ಇತ್ತ ಮಂತ್ರಾಲಯಕ್ಕೂ ತಟ್ಟಿದ ಬಿಸಿ! ತುಂಗಭದ್ರಾ ನದಿ ಖಾಲಿ, ಪುಣ್ಯ ಸ್ನಾನವಿಲ್ಲದೇ ಭಕ್ತರು ಬೇಸರ!
ಮಂತ್ರಾಲಯ
Follow us on

ರಾಯಚೂರು, ಸೆ.03: ತುಂಗಭದ್ರಾ ನದಿ (Tunga River) ತೀರದಲ್ಲಿರುವ ಮಂತ್ರಾಲಯದ (Mantralaya) ರಾಯರ ಸನ್ನಿಧಿಯಲ್ಲಿ ರಾಯರ 352 ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ರಾಯರ ಆರಾಧನಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಭಕ್ತರ ದಂಡೇ ಹರಿದು ಬರುತ್ತಿದೆ. ವಿವಿಧ ಕಲಾ ತಂಡಗಳ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಭಕ್ತರು ಹಾತೊರೆಯುತ್ತಿದ್ದಾರೆ. ವಿವಿಧ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ಆಚರಣೆಗಳಂತು ಮನಸೂರೆಗೊಳ್ಳುತ್ತಿವೆ.

ಇನ್ನು ಮಕ್ಕಳು, ವಯಸ್ಕರು, ವೃದ್ಧರೆನ್ನದೇ ಎಲ್ಲ ವರ್ಗದ ಭಕ್ತರು ರಾಯರ ಆರಾಧನೆಯನ್ನು ಕಣ್ತುಂಬಿಕೊಳ್ತಿದ್ದಾರೆ.ಕುಟುಂಬ ಸಮೇತವಾಗಿ ಬಂದು ರಾಯರ ಪುಣ್ಯ ಕ್ಷೇತ್ರದಲ್ಲಿ ಧ್ಯಾನ,ಆರಾಧನೆ ಮಾಡ್ತಿದ್ದಾರೆ. ಆದ್ರೆ, ಹೀಗೆ ಬಂದು ಎಲ್ಲ ವೈಶಿಷ್ಟ್ಯಗಳನ್ನು ಸವಿಯುತ್ತಿರುವ ಭಕ್ತರಿಗೆ ಆ ಒಂದು ಕೊರತೆ ಎದುರಾಗಿದೆ. ಹೌದು, ಬರಗಾಲದ ಛಾಯೆಯಿಂದ ರಾಯರ ಭಕ್ತರಿಗೆ ಪುಣ್ಯ ಸ್ನಾನವಿಲ್ಲದ ಕೊರಗು ಕಾಡುತ್ತಿದೆ.

ಇದನ್ನೂ ಓದಿ:ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಶುರು, ಮಠದಲ್ಲಿ ಮನೆಮಾಡಿದ ಸಂಭ್ರಮ

ಖಾಲಿಯಾದ ತುಂಗಾಭದ್ರಾ ನದಿ

ಹೌದು, ರಾಯರ ದರ್ಶನಕ್ಕೆ ಬರುವ ಅದೆಷ್ಟೋ ಸಂಖ್ಯಾತ ಭಕ್ತರು ಮೊದಲು ಮಂತ್ರಾಲಯದ ಪಕ್ಕದ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ತುಂಗಾ ಸ್ನಾನ ಎನ್ನುವ ಗಾದೆಯಂತೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ರಾಯರ ದರ್ಶನ ಪಡೆಯೋದು ವಾಡಿಕೆ ಹಾಗೂ ಪ್ರತೀತಿ. ಆದ್ರೆ, ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಬರಗಾಲದ ಛಾಯೆ ಎದುರಾಗಿದೆ. ಹೀಗಾಗಿ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಬರಿದಾಗಿದೆ.

ನೀರಿಗಾಗಿ ನದಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಓಡಾಟ

ಬರಗಾಲದಿಂದ ಬರಿದಾಗಿರುವ ನದಿಯಲ್ಲಿ ಪುಣ್ಯಸ್ನಾನ ಮಾಡಲಾಗದೇ ಭಕ್ತರು ಬೇಸರಗೊಳ್ತಿದ್ದಾರೆ. ಪಾಪಗಳು ಕಳೆದು ಒಳ್ಳೆಯದಾಗಲಿ ಎಂದು ಬೇಡಿಕೊಂಡು ತುಂಗೆಯ ಒಡಲಲ್ಲಿ ಮಿಂದೇಳುತ್ತಿದ್ದ ಭಕ್ತರಿಗೂ ಬರಗಾಲದ ಬಿಸಿ ತಟ್ಟಿದೆ. ಕೆಲ ಭಕ್ತರು ಹೇಗಾದ್ರೂ ಮಾಡಿ ತುಂಗೆಯ ಸ್ಪರ್ಷ ಮಾಡಿಕೊಳ್ಳಲೇ ಬೇಕು ಎಂದು ನದಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಓಡಾಡಿ ಅಲ್ಪ ಸ್ವಲ್ಪ ನೀರಿನಲ್ಲಿ ಮುಖ ತೊಳೆದುಕೊಂಡು, ತಲೆ ಮೇಲೆ ನೀರನ್ನ ಹಾಕಿಕೊಂಡು ಶಾಸ್ತ್ರ ಪೂರೈಸಿಕೊಳ್ತಿದ್ದಾರೆ.

ಇದನ್ನೂ ಓದಿ:ಕೇವಲ 22 ದಿನಗಳಲ್ಲಿ ಮಂತ್ರಾಲಯ ರಾಯರ ಮಠಕ್ಕೆ ಭಕ್ತರಿಂದ ಹರಿದು ಬಂದ ಕಾಣಿಕೆಯ ಮೊತ್ತ ರೂ. 2.35 ಕೋಟಿ!

ಪರ್ಯಾಯ ವ್ಯವಸ್ಥೆ ಮಾಡಿದ ಮಂತ್ರಾಲಯದ ಮಠ

ಹೀಗೆ ಭಕ್ತರ ಸಂಕಷ್ಟಕ್ಕೆ ಮಂತ್ರಾಲಯದ ಮಠ ಮಿಡಿದಿದೆ. ಪುಣ್ಯಸ್ನಾನವಿಲ್ಲದೇ ಪರದಾಡುತ್ತಿರೊ ಭಕ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದು, ತುಂಗಭದ್ರಾ ನದಿ ತೀರದಲ್ಲಿ ಸ್ನಾನ ಘಟ್ಟಗಳ ವ್ಯವಸ್ಥೆ ಮಾಡಿದೆ. ಭಕ್ತರಷ್ಟೇ ಅಲ್ಲ ಮೂಕ ಪ್ರಾಣಿಗಳು ಕೂಡ ಕುಡಿಯಲು ನೀರಿಲ್ಲದೇ ತುಂಗೆಯ ಒಡಲಲ್ಲಿ ಅಲೆದಾಟ ನಡೆಸುತ್ತಿರುವ ದೃಶ್ಯ ಮನಕಲಕುವಂತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ