ರಾಜ್ಯಸಭೆ ಚುನಾವಣೆ: ಎನ್​ಡಿಎಗೆ ಮತ್ತೊಂದು ಶಾಕ್, ಜೆಡಿಎಸ್​ ಪ್ಲ್ಯಾನ್ ಠುಸ್​!

ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಎನ್​ಡಿಎ ಅಭ್ಯರ್ಥಿಯಾಗಿ ನಾಲ್ಕನೇ ಸ್ಥಾನಕ್ಕೆ ಕಣದಲ್ಲಿರುವ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಗೆಲುವಿಗೆ ನಾಲ್ಕೈದು ಮತಗಳ ಕೊರತೆಯಷ್ಟೇ ಇದೆ. ಹೀಗಾಗಿ ಎನ್​​ಡಿಎ ಹಾಗೂ ಕಾಂಗ್ರೆಸ್​ಗೆ ಒಂದೊಂದು ಮತ ಕೂಡ ಅಮೂಲ್ಯವಾಗಿದೆ. ಈ ನಡುವೆ ಎನ್​ಡಿಎ ಕಣ್ಣಿಟ್ಟಿರುವ ಪಕ್ಷೇತರ ಶಾಸಕರು ಒಬ್ಬೊಬ್ಬರು ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಭಾಗಿಯಾಗಿದ್ದಾರೆ.

ರಾಜ್ಯಸಭೆ ಚುನಾವಣೆ: ಎನ್​ಡಿಎಗೆ ಮತ್ತೊಂದು ಶಾಕ್, ಜೆಡಿಎಸ್​ ಪ್ಲ್ಯಾನ್ ಠುಸ್​!
ರಾಜ್ಯಸಭೆ ಚುನಾವಣೆ: ಎನ್​ಡಿಎಗೆ ಮತ್ತೊಂದು ಶಾಕ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಭಾಗಿ
Follow us
| Updated By: Rakesh Nayak Manchi

Updated on: Feb 26, 2024 | 6:37 PM

ಬೆಂಗಳೂರು, ಫೆ.26: ನಾಳೆ ರಾಜ್ಯಸಭೆ ಚುನಾವಣೆ (Rajya Sabha Elections) ನಡೆಯಲಿದ್ದು, ನಾಲ್ಕನೇ ಸ್ಥಾನಕ್ಕೆ ಎನ್​ಡಿಎ (NDA) ಅಭ್ಯರ್ಥಿಯಾಗಿ ಜೆಡಿಎಸ್​ನ ಕುಪೇಂದ್ರ ರೆಡ್ಡಿ (Kupendra Reddy) ಕಣದಲ್ಲಿದ್ದಾರೆ. ಅಲ್ಲದೆ, ಕುಪೇಂದ್ರ ಗೆಲುವಿಗೆ ನಾಲ್ಕೈದು ಮತಗಳು ಕಡಿಮೆ ಇದ್ದು, ಪಕ್ಷೇತರ ಶಾಸಕರ ಮೇಲೆ ಜೆಡಿಎಸ್ (JDS) ಕಣ್ಣಿಟ್ಟಿದೆ. ಇನ್ನೊಂದೆಡೆ, ಅಡ್ಡಮತದಾನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ತಮ್ಮ ಶಾಸಕರನ್ನು ಹಿಡಿದುಕೊಂಡಿದೆ. ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ (CLP Meeting) ನಡೆಸುತ್ತಿದೆ. ಅಚ್ಚರಿಯೆಂದರೆ, ಎನ್​ಡಿಎ ಕಣ್ಣಿರುವು ಪಕ್ಷೇತರ ಶಾಕಸರಲ್ಲಿ ಒಬ್ಬೊಬ್ಬರೇ ಕಾಂಗ್ರೆಸ್ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಲತಾ ಮಲ್ಲಿಕಾರ್ಜುನ್ (Latha Mallikarjun) ಅವರೂ ಸೇರಿದ್ದಾರೆ. ಇದು ಜೆಡಿಎಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೌದು, ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಇಂದು ಬೆಂಗಳೂರಿನ ಖಾಸಗಿ ಹೊಟೇಲ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದ್ದು, ಈ ಸಭೆಗೆ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾಗಿರುವ ಲತಾ ಮಲ್ಲಿಕಾರ್ಜುನ್ ಭಾಗಿಯಾಗಿದ್ದಾರೆ. ನಾಳೆ ಮತದಾನ ಹಿನ್ನೆಲೆ ಲತಾ ಮಲ್ಲಿಕಾರ್ಜುನ್ ಹಾಜರಿ ಮಹತ್ವ ಪಡೆದಿದೆ.

ಇದನ್ನೂ ಓದಿ: ಗೆಲುವಿಗೆ ಅವಶ್ಯವಿರುವ ಮತಗಳು ನನಗೆ ಬರುತ್ತವೆ: ರಾಜ್ಯಸಭೆ ಚುನಾವಣೆ NDA ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿಶ್ವಾಸ

ಲತಾ ಮಲ್ಲಿಕಾರ್ಜುನ್ ಅಲ್ಲದೆ, ಕಾಂಗ್ರೆಸ್ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸಿ.ಪುಟ್ಟರಂಗಶೆಟ್ಟಿ, ಯು.ಬಿ.ಬಣಕಾರ್, ದರ್ಶನ್ ಧ್ರುವನಾರಾಯಣ, ಪ್ರಿಯಕೃಷ್ಣ, ಪ್ರದೀಪ್ ಈಶ್ವರ್ ಆಗಮಿಸಿದ್ದಾರೆ. ಉಳಿದ ಶಾಸಕರು ಒಬ್ಬೊಬ್ಬರಾಗೇ ಆಗಮಿಸುತ್ತಿದ್ದಾರೆ.

ಕಾಂಗ್ರೆಸ್​ನಿಂದ ಅಣಕು ಮತದಾನ‌

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಾಳೆ ಹೇಗೆ ಮತ ಚಲಾಯಿಸಬೇಕು ಎಂದು ಅಣಕು ಮತದಾನ‌ದ ವ್ಯವಸ್ಥೆಯನ್ನೂ ಮಾಡಲಾಗಿದೆ. ಚುನಾವಣೆ ನಡೆಯುವ ಯಥಾವತ್ ಮಾದರಿಯಲ್ಲೇ ಅಣಕು ಮತದಾನ ಮಾಡಿಸಲಾಗುತ್ತಿದೆ. ಆ ಮೂಲಕ ಯಾವುದೇ ಕಾರಣಕ್ಕೂ ಮತ ಅನೂರ್ಜಿತವಾಗದಂತೆ ಕೈ ನಾಯಕರು ಎಚ್ಚರ ವಹಿಸುತ್ತಿದ್ದಾರೆ.

ಪಕ್ಷೇತರ ಶಾಸಕರ ಒಲುವ ಯಾರ ಕಡೆ?

ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಬೆರಳೆಣಿಕೆಯ ಮತಗಳು ಕಡಿಮೆ ಇವೆ. ಹೀಗಾಗಿ ಪಕ್ಷೇತರ ಶಾಸಕರ ಮತಗಳು ಅತ್ಯಮೂಲ್ಯವಾಗಿದೆ. ಇನ್ನೊಂದೆಡೆ, ಅಡ್ಡಮತದಾನದ ವಿಶ್ವಾಸದಲ್ಲೂ ಇದೆ. ಅದಾಗ್ಯೂ, ರಾಜ್ಯದಲ್ಲಿ ಇರುವ ಮೂವರು ಪಕ್ಷೇತರ ಅಭ್ಯರ್ಥಿಗಳು ಬಹುತೇಕ ಕಾಂಗ್ರೆಸ್ ಕಡೆ ಒಲವು ಹೊಂದಿದ್ದಾರೆ. ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಒಲವು ತೋರಿದ್ದಾರೆ.  ಅಷ್ಟೇ ಅಲ್ಲದೆ, ಬಿಜೆಪಿ ತೊರೆದು ಕೆಆರ್​ಪಿಪಿ ಪಕ್ಷ ಸ್ಥಾಪಿಸಿದ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಇವರ ಮತವೂ ಬಹುತೇಕ ಕಾಂಗ್ರೆಸ್​ಗೆ ಎನ್ನಲಾಗುತ್ತಿದೆ. ಅದಾಗ್ಯೂ, ರಾಜಕೀಯ ಲೆಕ್ಕಾಚಾರ ಯಾವ ಕ್ಷಣದಲ್ಲಾದರೂ ತಲೆಕೆಳಗಾಗಬಹುದಾಗಿದ್ದು, ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ