ರೈತ ಹೋರಾಟಕ್ಕೆ ಮಣಿದ ಮಾಗಡಿ ಶಾಸಕ, 800 ಎಕರೆ ಭೂಸ್ವಾದೀನ ಕೈ ಬಿಡುವಂತೆ ಕೆಐಎಡಿಬಿ -ಸರ್ಕಾರಕ್ಕೆ ಪತ್ರ ಬರೆದರು: ಏನಿದರ ಒಳಸುಳಿ?

| Updated By: ಸಾಧು ಶ್ರೀನಾಥ್​

Updated on: Feb 16, 2023 | 4:26 PM

KIADB: ಒಟ್ಟಾರೆ ಚುನಾವಣೆ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಮಣಿದಿರೋ ಸ್ಥಳೀಯ ಶಾಸಕ ಮಂಜುನಾಥ್, ಕೊನೆಗೂ ತಮ್ಮ ಪಟ್ಟು ಸಡಿಲಿಸಿದ್ದಾರೆ. ಇದರಿಂದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ರೈತ ಹೋರಾಟಕ್ಕೆ ಮಣಿದ ಮಾಗಡಿ ಶಾಸಕ, 800 ಎಕರೆ ಭೂಸ್ವಾದೀನ ಕೈ ಬಿಡುವಂತೆ ಕೆಐಎಡಿಬಿ -ಸರ್ಕಾರಕ್ಕೆ ಪತ್ರ ಬರೆದರು: ಏನಿದರ ಒಳಸುಳಿ?
800 ಎಕರೆ ಭೂಸ್ವಾದೀನ ಕೈ ಬಿಡುವಂತೆ ಕೆಐಎಡಿಬಿ -ಸರ್ಕಾರಕ್ಕೆ ಪತ್ರ
Follow us on

ಆ ತಾಲೂಕಿನ ರೈತರೆಲ್ಲ (Farmers) ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರು. ತಮ್ಮ ಬದುಕಿಗೆ ಆಧಾರವಾಗಿದ್ದ ಜಮೀನನ್ನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಸ್ಥಳೀಯ ಶಾಸಕನ (Magadi MLA) ವಿರುದ್ದವೇ ಆಕ್ರೋಶವನ್ನ ವ್ಯಕ್ತಪಡಿಸಿದ್ರು. ಇದೀಗ ರೈತರ ಹೋರಾಟಕ್ಕೆ ಮಣಿದಿರೋ ಶಾಸಕ, ಆ ಯೋಜನೆಯನ್ನ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೌದು ಹತ್ತಾರು ಹಳ್ಳಿಯ ಸಾವಿರಾರು ರೈತರ ಹೋರಾಟಕ್ಕೆ ಮಣಿದಿರೋ ಮಾಗಡಿ ಶಾಸಕ, ಕೆಐಎಡಿಬಿ ವತಿಯಿಂದ ಭೂಸ್ವಾದೀನ ಪ್ರಕ್ರಿಯೆ (Land Acquisition) ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಂದಹಾಗೆ ರಾಮನಗರ (Ramanagara) ಮಾಗಡಿ ತಾಲೂಕಿನಲ್ಲಿ ಕಸಬಾ ಹೋಬಳಿಯ ಕಾಳಾರಿ, ತಾಳೆಕೆರೆ, ತಿಪ್ಪಸಂದ್ರ ಹೋಬಳಿಯ ಶಿವನಸಂದ್ರ, ದಂಡೇನಹಳ್ಳಿ ಹಾಗೂ ಕುದೂರು ಹೋಬಳಿಯ ನಾರಸಂದ್ರ ಗ್ರಾಮಗಳಲ್ಲಿನ ಒಟ್ಟು 3,324 ಎಕರೆ ಜಮೀನಿನನ್ನ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ ಜಾಗವನ್ನು ಕೂಡ ಗುರುತಿಸಿತ್ತು. ಇನ್ನು ಸ್ವಾಧಿನಪಡಿಸಿಕೊಳ್ಳಲು ಮುಂದಾಗಿರುವ ಜಾಗ ಕೃಷಿ ಪ್ರದೇಶವಾಗಿದ್ದು ರೈತರು ತೆಂಗು, ಅಡಿಕೆ, ಮಾವು, ಸಫೋಟಾ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದರು. ರೈತರಿಗೆ ಯಾವುದೇ ರೀತಿಯ ಮಾಹಿತಿಯನ್ನ ಕೂಡ ನೀಡದೇ, ರೈತರಿಂದ ಅನುಮತಿಯನ್ನ ಪಡೆಯದೇ ಏಕಾಏಕಿ ಭೂಮಿಯನ್ನ ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ನಿರ್ಣಯ ಮಾಡಿತ್ತು. ಇನ್ನು ಜಮೀನುಗಳನ್ನ ಸ್ವಾಧಿನಪಡಿಸಿಕೊಂಡರೇ ಸಾವಿರಾರು ರೈತರು ತಮ್ಮ ಜಮೀನನ್ನ ಕಳೆದುಕೊಳ್ಳುತ್ತಾರೆ. ಬಹುತೇಕ ರೈತರು ಇದೇ ಕೃಷಿ ಜಮೀನನನ್ನ ನಂಬಿಕೊಂಡು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಕೂಡ ಮಾಡುತ್ತಿದ್ದರು. ಹೀಗಾಗಿ ಹತ್ತಾರು ಹಳ್ಳಿಯ ರೈತರು ಸಾಕಷ್ಟು ಹೋರಾಟ ಮಾಡುತ್ತಲೆ ಬಂದಿದ್ದರು. ಅಲ್ಲದೆ ಸ್ಥಳೀಯ ಎಂ. ಮಂಜುನಾಥ್ ವಿರುದ್ದ ಆಕ್ರೋಶ ಕೂಡ ಹೊರ ಹಾಕಿದ್ದರು. ಕೊನೆಗೂ ರೈತರ ಹೋರಾಟ ಮಣಿದ ಶಾಸಕ ಮಂಜುನಾಥ್, ಸರ್ಕಾರಕ್ಕೆ ಪತ್ರ ಪಡೆದು ಭೂಸ್ವಾಧಿನ ಪ್ರಕ್ರಿಯೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಅಂದಹಾಗೆ ಮಾಗಡಿ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶವನ್ನ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಮಾಗಡಿ ಶಾಸಕ ಎ ಮಂಜುನಾಥ್ ಮನವಿ ಮಾಡಿಕೊಂಡಿದ್ದರು. 2021 ರ ಫೆಬ್ರವರಿ 8ನೇ ತಾರೀಕಿನಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಿಗೆ ಪತ್ರ ಬರೆದು, ಮಾಗಡಿ ತಾಲೂಕು ಹಿಂದುಳಿದ ತಾಲೂಕಾಗಿದ್ದು, ಬೆಂಗಳೂರಿಗೆ ಹತ್ತಿರವಿದೆ. ಪ್ರತಿನಿತ್ಯ ಮಾಗಡಿ ತಾಲೂಕಿನ ಯುವಕ-ಯುವತಿಯರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಪ್ರದೇಶವನ್ನ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ 2021ರ ಜೂನ್ 17ರಂದು ಬೆಂಗಳೂರಿನ ಖನಿಜ ಭವನದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ 373ನೇ ಸಭೆಯಲ್ಲಿ ಚರ್ಚೆ ಕೂಡ ನಡೆಸಿ, ನಿರ್ಣಯವನ್ನು ಕೂಡ ತೆಗೆದುಕೊಳ್ಳಲಾಗಿದೆ. ಅಲ್ಲದೆ ಮೊದಲ ಹಂತದಲ್ಲಿ 800 ಎಕರೆಯನ್ನ ಸ್ವಾಧಿನಪಡಿಸಿಕೊಳ್ಳಲು ಕೂಡ ನಿರ್ಣಯ ಮಾಡಲಾಗಿತ್ತು. ಆದ್ರೆ ಜಮೀನುಗಳನ್ನ ಸ್ವಾಧಿನಪಡಿಸಿಕೊಳ್ಳುವ ವಿಚಾರವಾಗಿ ಯಾವೊಬ್ಬ ರೈತರಿಗೂ ಮಾಹಿತಿ ನೀಡಿರಲಿಲ್ಲ. ಹೀಗಾಗಿ ತಮ್ಮ ಜಮೀನು ಉಳಿಸಿಕೊಳ್ಳಲು ರೈತರು ಹೋರಾಟದ ಹಾದಿಯನ್ನ ತುಳಿದಿದ್ರು. ರೈತರ ನಡೆಯನ್ನ ಸ್ವಾಗತಿಸಿರೋ ರೈತರು ಸಂಪೂರ್ಣವಾಗಿ ಎಲ್ಲ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು. ಈ ಬಗ್ಗೆ ಸದನದಲ್ಲೂ ಚರ್ಚೆ ಮಾಡಬೇಕು ಎಂದಿದ್ದಾರೆ.

ಒಟ್ಟಾರೆ ಚುನಾವಣೆ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಮಣಿದಿರೋ ಸ್ಥಳೀಯ ಶಾಸಕ ಮಂಜುನಾಥ್, ಕೊನೆಗೂ ತಮ್ಮ ಪಟ್ಟು ಸಡಿಲಿಸಿದ್ದಾರೆ. ಇದರಿಂದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ