ರಾಮನಗರ: ವಿಶ್ವದ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ನೋಡಲು ಹರಿದುಬರುತ್ತಿದೆ ಭಕ್ತಸಾಗರ

| Updated By: ಆಯೇಷಾ ಬಾನು

Updated on: Sep 08, 2021 | 7:04 AM

Ramanagara: ವಿಶ್ವದಲ್ಲಿಯೇ ಅತಿ ಎತ್ತರದ ಸುಮಾರು 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನ ನಿರ್ಮಾಣ ಮಾಡಲಾಗಿದ್ದು, ಆಗಸ್ಟ್ 8ರಂದು ತಾಯಿಯ ವಿಗ್ರಹ ಲೋಕಾರ್ಪಣೆಗೊಂಡಿದೆ.

ರಾಮನಗರ: ವಿಶ್ವದ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ನೋಡಲು ಹರಿದುಬರುತ್ತಿದೆ ಭಕ್ತಸಾಗರ
ಚಾಮುಂಡೇಶ್ವರಿ ವಿಗ್ರಹ
Follow us on

ರಾಮನಗರ: ಮೈಸೂರು ಅಂದ್ರೆ ಸಾಕು, ಮೊದಲು ನಮಗೆ ನೆನಪಾಗೋದೇ ಚಾಮುಂಡಿ ಬೆಟ್ಟ. ಚಾಮುಂಡೇಶ್ವರಿ ದೇವಿ ಅಂದರೆ ಎಲ್ಲರೂ ಭಕ್ತಿ ಭಾವದಿಂದ ಕೈಮುಗಿಯುತ್ತವೆ. ಆದ್ರೆ ಕೇವಲ ಮೈಸೂರು ಮಾತ್ರವಲ್ಲ, ರಾಮನಗರ ಜಿಲ್ಲೆಯಲ್ಲೂ ಕೂಡ ವಿಶ್ವದಲ್ಲಿಯೇ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ತಲೆ ಎತ್ತಿದೆ. ಇದೀಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಡಿಗ್ರಾಮ ಗೌಡಗೆರೆ, ಇದೀಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಗೌಡಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರೋ ವಿಶ್ವದ ಅತಿ ಎತ್ತರದ ಪಂಚಲೋಹದಿಂದ ನಿರ್ಮಿಸಿರುವ, ಹದಿನೆಂಟು ಭುಜಗಳ ಸೌಮ್ಯ ರೂಪದ ತಾಯಿ ಚಾಮುಂಡೇಶ್ವರಿ ವಿಗ್ರಹ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರೋ ತಾಯಿಯ ವಿಗ್ರಹ
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಎಂಬುವವರು ಈ ಪಂಚಲೋಹದ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ವಿಶ್ವದಲ್ಲಿಯೇ ಅತಿ ಎತ್ತರದ ಸುಮಾರು 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನ ನಿರ್ಮಾಣ ಮಾಡಲಾಗಿದ್ದು, ಆಗಸ್ಟ್ 8ರಂದು ತಾಯಿಯ ವಿಗ್ರಹ ಲೋಕಾರ್ಪಣೆಗೊಂಡಿದೆ.

ತಾಯಿಯ ವಿಗ್ರಹ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ದೇವಿಯ ಪಂಚಲೋಹದ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಕಂಚು ಮತ್ತು ಕಬ್ಬಿಣ ಸೇರಿಸಿ ನಿರ್ಮಿಸಲಾಗಿದೆ. 18 ಭುಜದ ಸೌಮ್ಯಮೂರ್ತಿಯನ್ನ 2018ರಿಂದ ನಿರ್ಮಾಣ ಮಾಡಲು ಶುರು ಮಾಡಿ ಮೂರುವರೆ ವರ್ಷಗಳನ್ನ ಸಮಯ ತೆಗೆದುಕೊಳ್ಳಲಾಗಿದೆ. ಸುಮಾರು ಮೂವತ್ತೈದು ಸಾವಿರ ಕೆಜಿ ಇರುವ ಹದಿನೆಂಟು ಭುಜಗಳು ಇರುವ ಸೌಮ್ಯ ರೂಪದ ಅರವತ್ತು ಅಡಿ ಎತ್ತರವಿರುವ ವಿಗ್ರಹ ಇದಾಗಿದೆ.

ಈ ವಿಗ್ರಹದ ಒಂದು ಬೆರಳು ಸರಿಸುಮಾರು ಹದಿನೈದರಿಂದ ಹದಿನಾರು ಕೆಜಿ ಬರುತ್ತದೆ. ತಾಯಿ ಚಾಮುಂಡೇಶ್ವರಿಯ ಕೈಯಲ್ಲಿರುವ ಒಂದು ಕಮಂಡಲ ನೂರು ಕೆಜಿ ಭಾರವಿದೆ. ಇನ್ನು ಚಾಮುಂಡೇಶ್ವರಿಯ ಭಕ್ತಾದಿಗಳು ನೀಡಿರುವ ವಸ್ತುಗಳಿಂದ ಈ ವಿಗ್ರಹವನ್ನು ನಿರ್ಮಿಸಲಾಗಿದೆ. ಈ ವಿಗ್ರಹದಲ್ಲಿನ ಮತ್ತೊಂದು ವೈಶಿಷ್ಟ್ಯತೆಯೆಂದರೆ ಮೈಸೂರು ರಾಜ್ಯ ಲಾಂಛನ ಗಂಡಬೇರುಂಡವನ್ನು ತಾಯಿಯ ಪದಕವನ್ನಾಗಿ ಮಾಡಲಾಗಿದೆ. ಈ ವಿಗ್ರಹದ ಹದಿನೆಂಟು ಕೈಗಳಲ್ಲಿ ಹದಿನೆಂಟು ಆಯುಧಗಳಿವೆ. ಆ ಆಯುಧಗಳು ಹದಿನೆಂಟು ಶಕ್ತಿ ಪೀಠವನ್ನು ಪ್ರತಿನಿಧಿಸುತ್ತವೆ. ಇನ್ನು ಮತ್ತೊಂದು ವಿಶೇಷವೆಂದರೆ ಈ ದೇವಿಯ ವಿಗ್ರಹ ನಿರ್ಮಾಣ ಮಾಡಿರೋದು ಬೆಂಗಳೂರು ಮೂಲದ ಪಠಾಣ್ ಎಂಬ ಮುಸ್ಲಿಂ ಶಿಲ್ಪಿ. ಇದರ ಜೊತೆಗೆ ಸಾಕಷ್ಟು ಕುಶಲಕರ್ಮಿಗಳು ಕೈ ಜೋಡಿಸಿದ್ದಾರೆ.

ವಿಶ್ವದ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ನೋಡಲು ಹರಿದುಬರುತ್ತಿದೆ ಭಕ್ತಸಾಗರ

ದೇವಿಯ ವಿಗ್ರಹ ನಿರ್ಮಾಣದ ಹಿನ್ನೆಲೆ
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ವಿಗ್ರಹ ನಿರ್ಮಾಣ ಮಾಡುವುದಕ್ಕೂ ಕೂಡ ಕಾರಣವಿದೆ. ಕ್ಷೇತ್ರದ ಧರ್ಮದರ್ಶಿಯಾಗಿದ್ದ ಮಲ್ಲೇಶ್ ಎಂಬುವವರು ಈ ಹಿಂದೆ ಕೇದಾರನಾಥಕ್ಕೆ ಹೋದಾಗ ಅಘೋರಿಗಳಿಂದ ಒಂದು ಆಜ್ಞೆಯಾಗಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಚಾಮುಂಡೇಶ್ವರಿಯ ಕಲ್ಲಿನ ವಿಗ್ರಹವನ್ನ ನಿರ್ಮಾಣ ಮಾಡಲು ಮುಂದಾಗಿದ್ದರು. ಆದ್ರೆ ವಿಗ್ರಹ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆಗಳು ಬಂದ ಹಿನ್ನೆಲೆಯಲ್ಲಿ ಪಂಚಲೋಹದ ವಿಗ್ರಹವನ್ನ ನಿರ್ಮಾಣ ಮಾಡಲಾಗಿದೆ. ಇನ್ನು ದೇವಿಯ ವಿಗ್ರಹಕ್ಕೆ ಯಾವುದೇ ಪ್ರಾಕೃತಿಕ ವೈಪರಿತ್ಯಗಳಿಂದ ಧಕ್ಕೆಯಾಗದಂತೆ ತಂತ್ರಜ್ಞಾನವನ್ನು ಬಳಸಲಾಗಿದೆ.

ಹರಿದು ಬರುತ್ತಿರೋ ಭಕ್ತಸಾಗರ
ಆಗಸ್ಟ್ 8ರಂದು ಲೋಕಾರ್ಪಣೆಗೊಂಡ ತಾಯಿಯ ವಿಗ್ರಹವನ್ನ ನೋಡಲು ಜನಸಾಗರವೇ ಹರಿದು ಬರುತ್ತಿದೆ. 60 ಅಡಿಯ ತಾಯಿಯ ವಿಗ್ರಹವನ್ನ ನೋಡಲು ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಇತ್ತಿಚಿಗೆ ಅಷ್ಟೇ ಅಭಿನಯ ಚಕ್ರವರ್ತಿ, ನಟ ಸುದೀಪ್ ಸಹ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ. ತಾಯಿಯ ಕ್ಷೇತ್ರ ಮೂರು ಜಿಲ್ಲೆಗಳ ಮಧ್ಯದಲ್ಲಿ ಇದೆ. ಒಂದು ಕಡೆ ರಾಮನಗರ ಜಿಲ್ಲೆ, ಮತ್ತೊಂದು ಕಡೆ ಮಂಡ್ಯ ಜಿಲ್ಲೆ, ಇನ್ನೊಂದೆಡೆ ತುಮಕೂರು ಜಿಲ್ಲೆಗೂ ಸಹಾ ಹತ್ತಿರದಲ್ಲಿ ಇದೆ. ಹೀಗಾಗಿ ನೀವು ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಿ, ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ತಾಯಿಯ ವಿಗ್ರಹವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ವಿಶೇಷ ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಇದನ್ನೂ ಓದಿ: ರಣಹದ್ದು ಸಂರಕ್ಷಣೆ ಜಾಗೃತಿ ದಿನ: ರಾಮನಗರವು ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನ; ವಿಶೇಷ ವರದಿ ಇಲ್ಲಿದೆ

ಇದನ್ನೂ ಓದಿ: ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ