ರಾಮನಗರ: ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ; ಸ್ಥಳದಲ್ಲೇ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 17, 2023 | 8:39 PM

ರಾಜ್ಯ ಸರಕಾರದ ಅವೈಜ್ಞಾನಿಕ ವಿದ್ಯುತ್ ನೀತಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾನೆ. ಬೆಳಗಿನ ಜಾವ ತೋಟಕ್ಕೆ ನೀರು ಬಿಡಲು ಹೋದಾಗ ಕಾಡಾನೆಯೊಂದು ರೈತನನ್ನು ಎಳೆದು ತುಳಿದು ಹಾಕಿದೆ. ಡಿಸಿಎಂ ಡಿಕೆ ಶಿವಕುಮಾರ್​ ತವರು ಕ್ಷೇತ್ರದಲ್ಲೇ ರೈತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇಡೀ ಗ್ರಾಮಸ್ಥರೆಲ್ಲ ರಾಜ್ಯ ಸರಕಾರ ಸೇರಿದಂತೆ ಅರಣ್ಯ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ.

ರಾಮನಗರ: ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ; ಸ್ಥಳದಲ್ಲೇ ಸಾವು
ಮೃತ ರೈತ
Follow us on

ರಾಮನಗರ, ಡಿ.17: ಆತ ತನ್ನ ಕುಟಂಬಕ್ಕೆ ಯಜಮಾನ ಸ್ಥಾನದಲ್ಲಿದ್ದ. ಬೆಳಗಿನ ಜಾವ ನೀರು ಬಿಡುವುದಕ್ಕೆ ಎಂದು ಮನೆ ಮುಂದಿನ ತೋಟಕ್ಕೆ ತೆರಳಿದ್ದ, ಅಷ್ಟರಲ್ಲೇ ತೋಟಕ್ಕೆ ಬಂದ ಒಂಟಿ ಸಲಗ(Elephant) ರೈತನನ್ನು ತುಳಿದು ಬಲಿ ಪಡೆದುಕೊಂಡಿರುವ ಘಟನೆ ರಾಮನಗರ(Ramanagara) ಜಿಲ್ಲೆಯ ಹಾರೋಹಳ್ಳಿ(Harohalli) ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ. ಅರವತ್ನಾಲ್ಕು ವರ್ಷದ ತಿಮ್ಮಯ್ಯ, ಉರ್ಫ್ ತಿಮ್ಮಪ್ಪ ಆನೆ ತುಳಿತದಿಂದ ಬರ್ಬರವಾಗಿ ಸಾವಾಗೀಡಾಗಿದ್ದಾನೆ. ತಲೆಯ ಮೇಲೆಯೇ ಕಾಲಿನಿಂದ ತುಳಿದ ಪರಿಣಾಮ ತಲೆ ಬುರೆಡೆ ಒಡೆದುಹೋಗಿ ಮುಖವೂ ಗುರುತು ಸಿಗಲಾರದ ರೀತಿ ಮರಣಹೊಂದಿದ್ದಾನೆ.

ಇನ್ನು ಐದು ಗಂಟೆ ಸುಮಾರಿಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ನೋಡಲು ಹೋದಾಗ ತೋಟದಲ್ಲೇ ತಂದೆ ಶವ ಬಿದ್ದಿದ್ದು ಕಂಡು ಮಗನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹಲವು ದಿನಗಳಿಂದಲೂ ಆನೆಗಳ ಗುಂಪು ಊರಿನ ಸಮೀಪ ಬರುತ್ತಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಓಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೆನ್ನಲಾಗಿದೆ. ಅಲ್ಲದೆ ಕಾಡಾನೆಗಳ ಗುಂಪು ಹಗಲಿನಲ್ಲಿಯೂ ಊರು ಪ್ರವೇಶ ಮಾಡುತ್ತಿದ್ದು, ಸೂಕ್ತ ಭದ್ರತೆ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ; ಒಂಟಿ ಸಲಗ ದಾಳಿಗೊಳಗಾಗಿ ರಾತ್ರಿಯಿಡೀ ನರಳಿದ್ದ ಯುವಕ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಥಳೀಯರ ಆಕ್ರೋಶ

ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದ ಗ್ರಾಮಸ್ಥರು, ಸೂಕ್ತ ಪರಿಹಾರಕ್ಕೆ ಡಿಸಿಎಂ ಆಗ್ರಹ

ತಿಮ್ಮಯ್ಯನವರ ಮೃತದೇಹ ಪರಿಶೀಲನೆ ಮಾಡಲು ಬಂದ ಅರಣ್ಯಾಧಿಕಾರಿಗಳ ವಿರುದ್ಧ ಕಿಡಿ ಕಾರಿದ ಗ್ರಾಮಸ್ಥರು, ‌‘ಸತ್ತ ಮೇಲೆ ಬಂದು ಮಾತಾನಾಡುವುದು ಬೇಡ, ಮೊದಲೇ ಆನೆ ಓಡಿಸುವ ಕೆಲಸ‌ ಮಾಡಿದ್ರೆ ತಿಮ್ಮಯ್ಯ ಬದುಕುತ್ತಿದ್ದರು ಎಂದು ನೊಂದಿರುವ ನುಡಿ ನುಡಿದಿದ್ದಾರೆ. ಅಲ್ಲದೆ ಡಿ ಸಿ ಎಂ ಡಿ ಕೆ ಶಿವಕುಮಾರ್ ಕೂಡ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸತತ ಪವರ್ ನೀಡುವ ಬಗ್ಗೆ ಮಾತಾನಾಡಿದ್ದ ಸಿ ಎಂ ಸಿದ್ದರಾಮಯ್ಯ, ‘ಸತತ ಐದು ಗಂಟೆ ಥ್ರೀ ಫೇಸ್ ಕರೆಂಟ್ ನೀಡೋದಾಗಿ ಹೇಳಿದ್ದರು. ಆದರೆ, ಗ್ರೌಂಡ್ ಝೀರೊ ದಲ್ಲಿ ಅಂತಹ ಕೆಲಸ ಸಮರ್ಪಕವಾಗಿ ಅಗದೇ, ರೈತರು ತಮ್ಮ ತೋಟಕ್ಕೆ ನೀರು ಹರಿಸಲು ಜೀವದ ಹಂಗು ತೊರೆದು ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ದೇಶಕ್ಕೆ ರೈತನೇ ಬೆನ್ನೇಲುಬು ಎನ್ನುವ ಸರಕಾರಗಳು, ರೈತನ ಎಲುಬುಗಳನ್ನು ಆನೆಗಳು ಮುರಿದು ಹಾಕುತ್ತಿದ್ರೂ ಏನೂ ಕ್ರಮ ಕೈಗೊಳ್ಳದೇ ರೈತರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ವಿಪರ್ಯಾಸ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ