
ರಾಮನಗರ, ಬೆಂಗಳೂರು, ಆಗಸ್ಟ್ 19: ರಾಮನಗರದ (Ramanagara) ದೊಡ್ಡೇರಿ ಗ್ರಾಮದ ಬಳಿ ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ದಂಧೆ ಪ್ರಕರಣದ ತನಿಖೆ ಮುಂದುವರಿದಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಸದ್ಯ ವಿದೇಶದಲ್ಲಿದ್ದಾನೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಅಲ್ಲದೆ, ಇದೀ ಜಾಲದ ಸುಳಿವು ಸಿಕ್ಕಿದ್ದು ಹೇಗೆ? ನಕಲಿ ಔಷಧಿ ಜಾಲವನ್ನು ಬೇಧಿಸಿದ್ದು ಹೇಗೆ ಎಂಬ ಕುರಿತು ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.
ಫಾರ್ಮ್ಹೌಸ್ನಲ್ಲಿ ಅನುಮಾನಾಸ್ಪದವಾಗಿ ವಾಹನಗಳು ಬಂದು ಹೋಗುತ್ತಿರುವುದು ಹಾಗೂ ಬಾಕ್ಸ್ಗಳನ್ನು ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಬೀಟ್ ಸಿಬ್ಬಂದಿಗಳಾದ ಶಿವರಾಜು ಮತ್ತು ರಘು ನೀಡಿದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು ಎಂದು ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ದೊಡ್ಡೇರಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ನಕಲಿ ಔಷಧಗಳು ಪತ್ತೆಯಾಗಿದ್ದವು. ನಂತರ ಈ ಬಗ್ಗೆ ಡ್ರಗ್ ಕಂಟ್ರೋಲರ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಮತ್ತು ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಜಂಟಿಯಾಗಿ ಫಾರ್ಮ್ಹೌಸ್ನಲ್ಲಿ ಪರಿಶೀಲನೆ ನಡೆಸಿದ್ದು, ನಕಲಿ ಔಷಧಗಳಿರುವುದು ದೃಢಪಟ್ಟಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಫಾರ್ಮ್ಹೌಸ್ನಲ್ಲಿ ಐಸಿಯುನಲ್ಲಿ ಬಳಸುವ ಹೈ ಎಂಡ್ ಔಷಧಗಳನ್ನು ನಕಲಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸಿ, ವಿದೇಶಿ ಔಷಧ ಕಂಪನಿಗಳ ಹೆಸರಿನ ಲೇಬಲ್ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ದುಬಾರಿ ಔಷಧಗಳಿಗೆ ನಕಲಿ ಲೇಬಲ್ಗಳನ್ನು ಹಾಕಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡ್ರಗ್ ಕಂಟ್ರೋಲರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ನಕಲಿ ಔಷಧ ದಂಧೆಯ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ, ಔಷಧಗಳನ್ನು ಎಲ್ಲೆಲ್ಲಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಸದ್ಯ ವಿದೇಶದಲ್ಲಿದ್ದು, ಆತನನ್ನು ಅತಿಶೀಘ್ರದಲ್ಲಿ ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ನಕಲಿ ಔಷಧ ತಯಾರಿಕೆ ನಡೆಯುತ್ತಿದ್ದ ಎನ್ನಲಾದ ಫಾರ್ಮ್ಹೌಸ್ ಸುಮಾರು 10 ಎಕರೆ ವಿಸ್ತೀರ್ಣದಲ್ಲಿದೆ. ಪ್ರಮುಖ ಆರೋಪಿ ಪ್ರಶಾಂತ್ ಈ ಫಾರ್ಮ್ಹೌಸ್ ಅನ್ನು ವರ್ಷಕ್ಕೆ ಸುಮಾರು ₹10 ಲಕ್ಷ ಬಾಡಿಗೆಗೆ ಕೃಷಿ ಉದ್ದೇಶಕ್ಕಾಗಿ ಲೀಸ್ಗೆ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ಔಷಧ ಜಾಲದ ಬಗ್ಗೆ ಮತ್ತಷ್ಟು ಶಾಕಿಂಗ್ ವಿಚಾರ ಬಹಿರಂಗ: ಎಸ್ಐಟಿ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ
ಕೃಷಿ ಚಟುವಟಿಕೆ ನಡೆಯುವ ಸ್ಥಳದಂತೆ ತೋರಿಸಿಕೊಂಡು ಅದರೊಳಗೆ ನಕಲಿ ಔಷಧ ತಯಾರಿಕೆ ಮತ್ತು ಪ್ಯಾಕಿಂಗ್ ನಡೆಸಲಾಗುತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ನಕಲಿ ಔಷಧ ಪತ್ತೆಗೆ ಜನರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜತೆಗೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಸಲಿ-ನಕಲಿ ಪತ್ತೆಗೆ ಸಲಹೆ ನೀಡಿದೆ. ಔಷಧದ ಕ್ಯೂಆರ್ ಕೋಡ್, ಬ್ಯಾಚ್ ನಂಬರ್ ಪರಿಶೀಲಿಸಿ ಪತ್ತೆ ಮಾಡುವಂತೆ ಜನರಿಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯಿಂದ ಸಿದ್ಧತೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Wed, 19 August 26