9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು: ಬಳಿಕ ಆಗಿದ್ದೇನು?

ಸಾಮಾನ್ಯವಾಗಿ ಅಲ್ಲಿ ಕಳ್ಳತನವಾಯಿತು, ಬೈಕ್​ನಲ್ಲಿ ಬಂದು ಆ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋದರು, ಅನ್ನೊದನ್ನ ಕೇಳಿರುತ್ತೇವೆ, ಕಣ್ಣಾರೆ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಯ 50ಗ್ರಾಂ ಮಾಂಗಲ್ಯ ಸರವನ್ನ ಕದ್ದು ಪರಾರಿಯಾಗಿದ್ದಳು. ಇದೀಗ ಆಕೆಯನ್ನ ಪೊಲೀಸರು ಬಂಧಿಸಿದ್ದಾರೆ.

9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು: ಬಳಿಕ ಆಗಿದ್ದೇನು?
ತಾಯಿಯ ಮಾಂಗಲ್ಯ ಸರವನ್ನೇ ಕದ್ದ ಮಗಳು
Follow us
|

Updated on:Mar 10, 2023 | 8:02 AM

ರಾಮನಗರ: ಈಕೆಯನ್ನ ಒಮ್ಮೆ ನೋಡಿ, ಈಕೇಗೆ ಯಾವುದೇ ಪಶ್ಚಾತಾಪವಿಲ್ಲ. ತಾನು ತಪ್ಪು ಮಾಡಿದ್ದೇನೆ ಎಂಬ ನೋವು ಕೂಡ ಇಲ್ಲ. ಇಕೆ ಮಾಡಿರುವ ಅಂತಿಂತಾ ತಪ್ಪಲ್ಲ. ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಅಂದಹಾಗೆ ಈಕೆಯ ಹೆಸರು ಶಶಿಕಲಾ(20), ತನ್ನ ತಾಯಿ ಶಾಂತಮ್ಮ ಅವರ 50 ಗ್ರಾಂ ಮಾಂಗಲ್ಯ ಸರವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಳು. ಇದೀಗ ಮಾಡಿದ ತಪ್ಪಿಗೆ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಅಂದಹಾಗೆ ಶಶಿಕಲಾಗೆ ಈಗಾಗಲೇ 20 ವರ್ಷದ ಕೆಳಗೆ ಮದುವೆಯಾಗಿದೆ. ಎದೆ ಉದ್ದ ಮಕ್ಕಳು ಕೂಡ ಇದ್ದಾರೆ. ಏಳು ವರ್ಷದ ಕೆಳಗೆ ಗಂಡ ತೀರಿ ಹೋಗಿದ್ದಾನೆ. ಕಳೆದ ಹಲವು ವರ್ಷಗಳಿಂದ ಕುಟುಂಬಸ್ಥರಿಂದ ದೂರ ಆಗಿ ಬೆಂಗಳೂರಿನಲ್ಲಿ ವಾಸವಿದ್ದಳು. ಇತ್ತೀಚಿಗೆ ಮತ್ತೆ ವಾಪಾಸ್ ರಾಮನಗರಕ್ಕೆ ಬಂದಿದ್ದಳು.

ಬರಿಗೈಯಲ್ಲಿ ಬಂದ ಶಶಿಕಲಾ, ರಾಮನಗರದಲ್ಲಿ ಬಾಡಿಗೆ ಮನೆ ಮಾಡಲು ಹಣವಿಲ್ಲವೆಂದು ಮೊನ್ನೆ ಮಧ್ಯಾಹ್ನ ಏಕಾಏಕಿ ತನ್ನ ತಾಯಿ ಮನೆ ರಾಮನಗರದ ಕೆಂಪೇಗೌಡನದೊಡ್ಡಿ ಗ್ರಾಮಕ್ಕೆ ಹೋಗಿದ್ದಾಳೆ. ಅಲ್ಲಿ ಅಕ್ಕಪಕ್ಕದ ಮನೆಯವರನ್ನ ಮಾತನಾಡಿಸಿ, ನಂತರ ತನ್ನ ತಾಯಿ ಮನೆಯಲ್ಲಿ ಯಾರು ಇಲ್ಲದಿರುವ ಬಗ್ಗೆ ತಿಳಿದುಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಯೊಳಗೆ ಹೋಗಿ, ಮನೆಯಲ್ಲಿ ಮಲಗಿದ್ದ ತಾಯಿ ಶಾಂತಮ್ಮ ಅವರ 50 ಗ್ರಾಂ ಮಾಂಗಲ್ಯ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾಳೆ.

ಇದನ್ನೂ ಓದಿ:ನಿಲ್ದಾಣದಿಂದ ಕಳ್ಳತನವಾಗಿದ್ದ ಸರ್ಕಾರಿ ಬಸ್: 13 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು

ಅಂದಹಾಗೆ ಮಾಂಗಲ್ಯ ಸರವನ್ನ ಕಿತ್ತುಕೊಂಡು ಬಂದು ಮನೆಯ ಬಳಿಯೇ ಇದ್ದು, ಬೇರೆ ಯಾರೋ ಕಳ್ಳ ಮನೆಗೆ ನುಗ್ಗಿ ಮಾಂಗಲ್ಯ ಸರ ಕಸಿದು ಪರಾರಿ ಆಗಿದ್ದಾನೆ ಎಂದು ಬಿಂಬಿಸುವ ನಾಟಕವನ್ನು ಕೂಡ ಆಡಿದ್ದಾಳೆ. ಆದರೆ ಈಕೆಯ ಬಗ್ಗೆ ಕುಟುಂಬಸ್ಥರಿಗೆ ಗೊತ್ತಿತ್ತು, ಈಕೆಯ ಹಿನ್ನೆಲೆಯೂ ಗೊತ್ತಿತ್ತು. ಮತ್ತೊಂದೆಡೆ ಪೊಲೀಸರು ಕೂಡ ಬೇರೆ ಬೇರೆ ಆ್ಯಂಗಲ್​ನಲ್ಲಿ ತನಿಖೆ ಮಾಡುತ್ತಿದ್ದರು. ಆದರೆ ಕುಟುಂಬಸ್ಥರೇ ಶಶಿಕಲಾ ಮೇಲೆ ಅನುಮಾನ ವ್ಯಕ್ತಪಡಿಸಿ, ಒಮ್ಮೆ ಆಕೆಯನ್ನ ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಶಶಿಕಲಾಳನ್ನ ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ಅಸಲಿಯತ್ತು ಗೊತ್ತಾಗಿದೆ. ಇನ್ನು ಈಕೆ ಕುಟುಂಬದಿಂದ ದೂರವಾಗಿ ಅಡ್ಡದಾರಿ ಕೂಡ ಹಿಡಿದಿದ್ದಳು. ಹೀಗಾಗಿಯೇ ಈಕೇಯ ಮೇಲೆ ಈ ಹಿಂದೆ ರಾಮನಗರ, ಚನ್ನಪಟ್ಟಣ, ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಾಣಿಕೆ ಪ್ರಕರಣ ಕೂಡ ದಾಖಲಾಗಿತ್ತು. ಒಟ್ಟಾರೆ ಹಣದಾಸೆಗೆ ತಾಯಿಯ ಮಾಂಗಲ್ಯಸರವನ್ನೇ ಅಬೇಸ್ ಮಾಡಿ, ಪೊಲೀಸರ ಅತಿಥಿಯಾಗಿ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Fri, 10 March 23