ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ: ಗೋಹತ್ಯೆ ಬಗ್ಗೆ ವಿಧಾನಸಭೆಯಲ್ಲಿ ರಮೇಶ್​ ಕುಮಾರ್​ ಮಾತು

ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ? ಕ್ರಾಸ್ ಬ್ರೀಡ್ ದನದಲ್ಲಿ ಹೋರಿ ಹುಟ್ಟಿದಾಗ ಏನ್ಮಾಡೋದು? ಹಸಿವಿನ‌ ರಾಜಕಾರಣ ಮಾಡೋಣ, ಹಸು ರಾಜಕಾರಣ ಬೇಡ ಎಂದು ಸಲಹೆ ಮಾಡಿದರು.

ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ: ಗೋಹತ್ಯೆ ಬಗ್ಗೆ ವಿಧಾನಸಭೆಯಲ್ಲಿ ರಮೇಶ್​ ಕುಮಾರ್​ ಮಾತು
ರಮೇಶ್ ​ಕುಮಾರ್
Edited By:

Updated on: Mar 18, 2021 | 7:41 PM

ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ರಮೇಶ್ ಕುಮಾರ್ ಗೋಹತ್ಯೆ ತಡೆ ಕಾಯ್ದೆ ಬಗ್ಗೆ ಟೀಕಿಸಿದರು. ಹಸು ಹೆಣ್ಣು ಕರು ಹಾಕಿದ್ರೆ ಒಂದೂವರೆ ವರ್ಷದಲ್ಲಿ ಆ ಹೆಣ್ಣು ಕರು ಲಾಭ ತರುತ್ತೆ. ಆದ್ರೆ ಹೋರಿ ಹುಟ್ಟಿದ್ರೆ ಖರ್ಚು ಯಾರು ಕೊಡ್ತಾರೆ‌ ನನಗೆ. ನೀವು ಪೂಜೆ ಮಾಡಿಕೊಳ್ಳಲು ನನ್ನ ಆಕ್ಷೇಪ ಇಲ್ಲ. ಆದರೆ ಇದು ಹಸುವಿನ‌ ರಾಜಕಾರಣ ಅಷ್ಟೇ. ಒಂದೊಂದು ಸಮುದಾಯದ ಆಹಾರ ಪದ್ಧತಿ ಒಂದೊಂದು ರೀತಿ ಇರುತ್ತೆ. ಊರುಗಳಲ್ಲಿ ದನ ಸತ್ತರೆ ಎತ್ತೋಕೆ ಯಾರು ಬರ್ತಾರೆ? ದನ ಸತ್ತರೆ ತೆರವುಗೊಳಿಸಲು ರಾಮ ಭಟ್ ಬರ್ತಾರಾ? ಯಾರನ್ನ ಊರಿಂದ ಹೊರಗೆ ಇಟ್ಟಿದ್ದೀರಿ ಅವರೇ ಬರಬೇಕು. ಪೂಜೆ ಮಾಡಲು ನೀವು, ಸತ್ತ ದನ ಎತ್ತಲು ಅವರಾ? ಇದ್ಯಾವ ನ್ಯಾಯ, ಯೋಚನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದಾದ್ರೂ ಊರಲ್ಲಿ ಬೇರೆಯವರು ಮಲ ಹೊರ್ತಾರಾ? ಮಲ ಹೊರಲು ದಲಿತರು ಬಿಟ್ಟು ಬೇರೆಯವರು ಬರ್ತಾರಾ? ಅನುಪಯುಕ್ತ ಗಂಡು ಕರುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಇಸ್ಲಾಮಿಕ್ ಜಗತ್ತಿನಲ್ಲಿ ಹಂದಿ ತಿನ್ನಲ್ಲ, ಕ್ರಿಶ್ಚಿಯನ್ ಜಗತ್ತಿನಲ್ಲಿ ಹಂದಿ ತಿಂತಾರೆ, ಬೀಫ್ ತಿಂತಾರೆ. ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ? ಕ್ರಾಸ್ ಬ್ರೀಡ್ ದನದಲ್ಲಿ ಹೋರಿ ಹುಟ್ಟಿದಾಗ ಏನ್ಮಾಡೋದು? ಹಸಿವಿನ‌ ರಾಜಕಾರಣ ಮಾಡೋಣ, ಹಸು ರಾಜಕಾರಣ ಬೇಡ ಎಂದು ಸಲಹೆ ಮಾಡಿದರು.

ರೈತರು ಹುತಾತ್ಮರಾಗಿದ್ದಾರೆ..
ರೈತರು ದೆಹಲಿ ಗಡಿ ಭಾಗದಲ್ಲಿ ಹೋರಾಟ ಮಾಡುತ್ತಿದ್ದಾರೆ. ಈವರೆಗೆ ಅಲ್ಲಿ 200 ಮಂದಿ ಮೃತಪಟ್ಟಿದ್ದಾರೆ, ಅವರನ್ನ ಹುತಾತ್ಮರು ಅನ್ನುತ್ತೇನೆ. ಇಷ್ಟಾದರೂ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನ ಆಗಿಲ್ಲ. ಕೃಷಿ ಉತ್ಪನ್ನ ಬಿಟ್ಟು ಬೇರೇನನ್ನೂ ಕೊಳ್ಳಲು ರೈತರಿಗೆ ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೂ ಬಜೆಟ್​​ನ ಮೊದಲ ಪುಟದಲ್ಲಿ ರೈತರಿಗೆ ನೆಮ್ಮದಿ ಕೊಡ್ತೇವೆ ಅನ್ನುತ್ತಾರೆ. ಬಜೆಟ್​ನಲ್ಲಿ ಹೇಳಿದ್ದನ್ನ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ಕೊಡುವ ಹಣ ಬಾಕಿ ಇಟ್ರೆ ಚಟುವಟಿಕೆ ಸ್ಥಗಿತಗೊಳ್ಳುತ್ತವೆ. ಕೇಂದ್ರದಿಂದ ರೈತರಿಗೆ ಸಂಬಂಧಿಸಿದಂತೆ ಬರಬೇಕಾದ ₹ 55 ಕೋಟಿ ಹಣ ಪಾವತಿಸಲಿ. ಸಹಕಾರಿ ಬ್ಯಾಂಕ್​ಗಳ ಬಾಕಿ ಹಣವನ್ನು ಶೀಘ್ರ ಪಾವತಿ ಮಾಡಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಆಗ್ರಹಿಸಿದರು.

ಎತ್ತಿನಹೊಳೆ ಗೊಂದಲ ನಿವಾರಿಸಿ
ಎತ್ತಿನಹೊಳೆ ಯೋಜನೆಯಿಂದ ತರುವ ನೀರನ್ನು ಸಂಗ್ರಹಿಸಲು ರೂಪಿಸಿರುವ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ವಿಚಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಗೊಂದಲವಿದೆ. ಭೂಮಿ ನೀಡುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವೊಲಿಸ್ತೀರಾ ಅಥವಾ ಬೇರೆ ಜಾಗ ಕೊಡ್ತೀರಾ? ಆದಷ್ಟು ಬೇಗ ಏನಾದಾದರೂ ಮಾಡ್ಬೇಕಲ್ವಾ? ಈ ಭಾಗದ ಜನರು ನೀರಿನ ಸಮಸ್ಯೆಯನ್ನ ಎದುರಿಸ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಬೆಂಗಳೂರಿನ ತೊಳ್ಕೊಂಡಿರೋ ನೀರನ್ನಾದರೂ ಕೊಡಿ ಎಂದು ಹಿಂದೆ ಕಣ್ಣೀರು ಹಾಕಿದ್ದೆ. ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸುವ ಕೆಲಸ ಆರಂಭವಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ಹಂತದ ಯೋಜನೆ ಒಂದೇ ವರ್ಷದಲ್ಲಿ ಪ್ರಾರಂಭ ಆಗಿತ್ತು. ಆದ್ರೆ ಈ ವರ್ಷದ ಬಜೆಟ್​ನಲ್ಲಿ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನಾವು ಈ ರಾಜ್ಯದ ಜನರೇ, ನಮಗೂ ನೀವೇ ಮುಖ್ಯಮಂತ್ರಿ ಎಂದು ವ್ಯಂಗ್ಯದ ಬಾಣಬಿಟ್ಟರು.

ಮನು ಸಂಸ್ಕೃತಿಯೆಂಬ ಅಣುಬಾಂಬ್
ಮನು ಸಂಸ್ಕೃತಿ ಎಂಬುದು ಅಣುಬಾಂಬ್​​ನ ರಾಸಾಯನಿಕ ಪರಿಣಾಮದಂತೆ. ಬಾಂಬ್​ನಿಂದ ಶುರುವಾಗುವ ಅಣುವಿಕಿರಣ 25 ಸಾವಿರ ವರ್ಷದವರೆಗೆ ಇರುತ್ತೆ. ಅದೇ ತರಹ ಮನು ಸಂಸ್ಕೃತಿಯ ಪರಿಣಾಮವೂ ಕೂಡ ಸಮಾಜದಲ್ಲಿದೆ. ಜನರಿಗೆ ಅನುಕೂಲವಾಗುವಂತೆ ಮಾಡೋದು ಜನ ಸಂಸ್ಕೃತಿ, ಅಣುಬಾಂಬ್​ನ ರಾಸಾಯನಿಕ ಪರಿಣಾಮದಂತಿರುವುದು ಮನು ಸಂಸ್ಕೃತಿ ಎಂದು ರಮೇಶ್​ ಕುಮಾರ್ ಕಟುವಾಗಿ ಟೀಕಿಸಿದರು.

ಇದನ್ನೂ ಓದಿ: ಎತ್ತಿನಹೊಳೆಗೆ ಭೂಮಿ ಕೊಟ್ಟು ಪರಿಹಾರದ ಭರವಸೆಯಲ್ಲೇ ಕಂಗೆಟ್ಟ ಅನ್ನದಾತರು, ಇತ್ತ ಯೋಜನೆ ಇಲ್ಲ.. ಪರಿಹಾರನೂ ಇಲ್ಲ..!

ಇದನ್ನೂ ಓದಿ: ಬೇಸಿಗೆ ಆರಂಭದಲ್ಲೇ ಹಾಹಾಕಾರ: ಒಂದು ಬಿಂದಿಗೆಗೆ 8 ರೂ. ಕೊಟ್ಟು ನೀರನ್ನು ಖರೀದಿಸುತ್ತಿರುವ ಕೋಲಾರ ಮಂದಿ

Published On - 7:37 pm, Thu, 18 March 21

Ghanashyam D M | ಡಿ.ಎಂ.ಘನಶ್ಯಾಮ
Follow Us