ಹಿಜಾಬ್, ವ್ಯಾಪಾರ ನಿಷೇಧ ಬೆನ್ನಲ್ಲೇ ಈಗ ಟಿಪ್ಪು ಪಠ್ಯ ಸರದಿ; ಶಿಕ್ಷಣ ಇಲಾಖೆಗೆ ಶುರುವಾಯ್ತು ಮತ್ತೊಂದು ಟೆನ್ಷನ್

| Updated By: shivaprasad.hs

Updated on: Mar 26, 2022 | 10:04 AM

Tipu Sultan: ಹಿಜಾಬ್ ಗಲಾಟೆ ಬಳಿಕ ಟಿಪ್ಪು ಪಠ್ಯ ಪರಿಷ್ಕರಣೆ ಫೈಟ್ ಆರಂಭವಾಗಿದ್ದು, ಈಗಾಗಲೇ ಇದರ ಪರ- ವಿರೋಧ ಚರ್ಚೆ ಜೋರಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಟಿಪ್ಪುವಿನ ಪಠ್ಯದಲ್ಲಿ ಕಡಿತ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ರಾಜಕೀಯ ನಾಯಕರು ಹೇಳಿದ್ದೇನು?

ಹಿಜಾಬ್, ವ್ಯಾಪಾರ ನಿಷೇಧ ಬೆನ್ನಲ್ಲೇ ಈಗ ಟಿಪ್ಪು ಪಠ್ಯ ಸರದಿ; ಶಿಕ್ಷಣ ಇಲಾಖೆಗೆ ಶುರುವಾಯ್ತು ಮತ್ತೊಂದು ಟೆನ್ಷನ್
ಟ್ಯಾಬ್ಲೋದಲ್ಲಿ ಟಿಪು ಸುಲ್ತಾನ್ ಚಿತ್ರ (ಸಂಗ್ರಹ: Credits: PIB India/ Twitter)
Follow us on

ಹಿಜಾಬ್, ವ್ಯಾಪಾರ ನಿಷೇಧ ಬೆನ್ನಲ್ಲೇ ಈಗ ಟಿಪ್ಪು (Tipu Sultan) ಪಠ್ಯದ ಕುರಿತ ಸುದ್ದಿ ರಾಜ್ಯದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಶಿಕ್ಷಣ ಇಲಾಖೆಗೆ ಇದರಿಂದ ಮತ್ತಷ್ಟು ಆತಂಕ ಹೆಚ್ಚುತ್ತಿದೆ. ಹಿಜಾಬ್ ಗಲಾಟೆ ಬಳಿಕ ಟಿಪ್ಪು ಪಠ್ಯ ಪರಿಷ್ಕರಣೆ ಫೈಟ್ ಆರಂಭವಾಗಿದ್ದು, ಈಗಾಗಲೇ ಇದರ ಪರ- ವಿರೋಧ ಚರ್ಚೆ ಜೋರಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಟಿಪ್ಪುವಿನ ಪಠ್ಯದಲ್ಲಿ ಕಡಿತ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಪ್ರಸ್ತುತ ವರ್ಷ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆ ಪಠ್ಯ ಕಡಿತ ಸಾಧ್ಯವಿಲ್ಲ. ಆದರೆ 2022-23ನೇ ಸಾಲಿನಿಂದ ಪರಿಷ್ಕರಣೆಗೊಂಡ ಪಠ್ಯ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ತಡೆ ನೀಡಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಶಿಕ್ಷಣ ಇಲಾಖೆ ನಡೆಗೆ ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಗರಂ ಆಗಿದ್ದು, ಹಿಂದಿನಿಂದಲೂ ಇತಿಹಾಸ ಹೇಗಿದೆಯೋ ಹಾಗೇ ಇರಲಿ. ಇತಿಹಾಸ ಬದಲಿಸುವ ಕೆಲಸ ಮಾಡಬೇಡಿ ಎಂದು ಪಟ್ಟು ಹಿಡಿದಿವೆ.

ಟಿಪ್ಪು ಪಠ್ಯ ಕಡಿತಕ್ಕೆ ಕಾಂಗ್ರೆಸ್ ನಾಯಕರ ಅಸಮಾಧಾನ:

ಕಾಂಗ್ರೆಸ್ ನಾಯಕರೂ ಕೂಡ ಪಠ್ಯ ಕಡಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಪ್ಪು ಪಠ್ಯ ಕಡಿತಕ್ಕೆ ವಿರೋಧ ಯಾಕೆ? ಟಿಪ್ಪು ಪಠ್ಯ ಸಾರ್ವಜನಿಕವಾಗಿ ಮಹತ್ವದ್ದು. ದೂರದೃಷ್ಟಿಯ ಸರ್ವ ಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ ಪ್ರಗತಿ ಪರ ಆಡಳಿತಗಾರರಾಗಿ, ಸ್ವಾತಂತ್ರ್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ ಟಿಪ್ಪು. ಅವರ ಇತಿಹಾಸ ಸಂಪೂರ್ಣವಾಗಿ ನಮ್ಮ ನಾಡಿನ ಮಕ್ಕಳಿಗೆ ತಿಳಿಸುವುದು ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ನಿರ್ದಿಷ್ಟ ಸಮಾಜವನ್ನು ಗುರಿಯಾಗಿಸಿಕೊಂಡು ತಯಾರು ಮಾಡಿರುವ ಈ ವರದಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ಸರ್ಕಾರ ಬದಲಿಸಬೇಕು ಎಂದು ಸಲೀಂ ಅಹಮದ್ ಸಹ ಇತ್ತೀಚೆಗೆ ಈ ವಿಚಾರವಾಗಿ ಮಾತನಾಡಿದ್ದರು.

ಟಿಪ್ಪು ಪಠ್ಯದ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು?

ಟಿಪ್ಪು ಪಠ್ಯ ಕಡಿತದ ಬಗ್ಗೆ ಶಿಕ್ಷಣ ಸಚಿವರು ಮಾತನಾಡಿದ್ದಾರೆ. ಒಂದಷ್ಟು ಇತಿಹಾಸದಲ್ಲಿನ ವಿಚಾರಗಳು ಪಠ್ಯ ಪುಸ್ತಕದಿಂದ ಕಡಗಣನೆಯಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅದನ್ನು ಇಂಟ್ರಡ್ಯುಸ್ ಮಾಡಲು ಪ್ರಯತ್ನ ಮಾಡಿದ್ದೇವೆ. ಏನೇನು ದೋಷಗಳು ಆಗಿದ್ದವು ಅವನ್ನ ಸರಿಪಡಿಸಿದ್ದೇವೆ. ತಾಂತ್ರಿಕ ತಪ್ಪುಗಳು ಆಗಿದ್ದವು ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಇತಿಹಾಸವನ್ನು ತಿರುಚುವ ಪ್ರಯತ್ನ ಆಗಿತ್ತು. ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಮಕ್ಕಳು ಓದಲೇ ಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

ಇದನ್ನೂ ಓದಿ:

ಉಡುಪಿ: ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು

ಘಟಿಕೋತ್ಸವ ಹಿನ್ನೆಲೆ; ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪರೀಕ್ಷೆಗಳು ಮುಂದೂಡಿಕೆ