ಟ್ರಾಕ್ಟರ್​ಗೆ ಸಿಲುಕಿ ಗಾಯಗೊಂಡಿದ್ದ ನಾಗರ ಹಾವು ರಕ್ಷಣೆ: ಮಾನವೀಯತೆ ಮೆರೆದ ಉರಗ ತಜ್ಞ Photos

ಪಶುವೈದ್ಯ ಡಾ.ಆದರ್ಶ ಅವರು ಹಾವಿಗೆ ಅರವಳಿಕೆ- ಚುಚ್ಚುಮದ್ದು ನೀಡಿ ಸುಮಾರು ಅರ್ಧ ಗಂಟೆ ಕಾಲ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಗರ ಹಾವಿಗೆ ಹೊಲಿಗೆ ಹಾಕಿ, ಔಷಧ ನೀಡಿ ಆರೈಕೆ ಮಾಡಿದ್ದಾರೆ.

ಟ್ರಾಕ್ಟರ್​ಗೆ ಸಿಲುಕಿ ಗಾಯಗೊಂಡಿದ್ದ ನಾಗರ ಹಾವು ರಕ್ಷಣೆ: ಮಾನವೀಯತೆ ಮೆರೆದ ಉರಗ ತಜ್ಞ Photos
ನಾಗರ ಹಾವಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ
Updated By: ಸಾಧು ಶ್ರೀನಾಥ್​

Updated on: Jan 21, 2021 | 5:40 PM

ಕೋಲಾರ: ನಾಗರಹಾವು ನೋಡಿದರೆ ಬೆಚ್ಚಿ ಬಿದ್ದು ಓಡಿಹೋಗುವ ಜನರೇ ಹೆಚ್ಚು. ಹೀಗಿರುವಾಗ ಗಾಯಗೊಂಡ ಹಾವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಎಂದರೆ ನಂಬುವ ವಿಷಯವಾ? ಆದರೆ ನಿಜಕ್ಕೂ ಇದು ನಂಬತಕ್ಕದ್ದೇ. ಇಂತಹದೊಂದು ಅಪರೂಪದ ಘಟನೆಗೆ ಕೋಲಾರ ಸಾಕ್ಷಿಯಾಗಿದೆ.

ಇಂದು ಕೋಲಾರ ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ಕೃಷ್ಣಮೂರ್ತಿ ಎಂಬುವವರು ತೋಟದಲ್ಲಿನ ಟ್ರಾಕ್ಟರ್​ನಲ್ಲಿ ಉಳುಮೆ ಮಾಡುತ್ತಿದ್ದರು. ಈ ವೇಳೆ ನಾಗರಹಾವೊಂದು ಟ್ರಾಕ್ಟರ್​ನ ಉಳುಮೆ ಯಂತ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದೆ. ಇದರಿಂದ ಆತಂಕಗೊಂಡ ಕೃಷ್ಣಮೂರ್ತಿ ಕೂಡಲೇ ಗ್ರಾಮದಲ್ಲಿದ್ದ ಉರಗ ತಜ್ಞ ವೇಣು ಅವರನ್ನು ಕರೆಸಿ ಗಾಯಗೊಂಡ ನಾಗರ ಹಾವನ್ನು ತೋರಿಸಿದ್ದಾರೆ.

ಹಾವಿಗೆ ಚಿಕಿತ್ಸೆ ನೀಡುತ್ತಿರುವ ಉರಗ ತಜ್ಞ

ಉರಗ ತಜ್ಞ ವೇಣು ನಾಗರಹಾವನ್ನು ಕೋಲಾರದ ಪಶು ಆಸ್ಪತ್ರೆಗೆ ಹಿಡಿದು ತಂದು ಚಿಕಿತ್ಸೆ ಕೊಡಿಸಿದ್ದಾರೆ. ಹಾವನ್ನು ಕೈಯಲ್ಲಿ ಹಿಡಿದು ತಂದಾಗ ಅಲ್ಲಿದ್ದ ಜನರು ಭಯಬೀತರಾಗಿ ಓಡಿ‌ಹೋಗಿದ್ದಾರೆ. ನಂತರ ಗಾಯಗೊಂಡ‌ ನಾಗರಹಾವಿಗೆ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ‌ ಮನವಿ ಮಾಡಿದ್ದಾರೆ.

ಹಾವಿನ ಆರೈಕೆಯಲ್ಲಿ ನಿರತರಾದ ದೃಶ್ಯ

ಅಲ್ಲಿಯೇ‌ ಇದ್ದ ಪಶುವೈದ್ಯ ಡಾ.ಆದರ್ಶ ಅವರು ಹಾವಿಗೆ ಅರವಳಿಕೆ- ಚುಚ್ಚುಮದ್ದು ನೀಡಿ ಸುಮಾರು ಅರ್ಧ ಗಂಟೆ ಕಾಲ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಗರ ಹಾವಿಗೆ ಹೊಲಿಗೆ ಹಾಕಿ, ಔಷಧ ನೀಡಿ ಆರೈಕೆ ಮಾಡಿದ್ದಾರೆ. ಚಿಕಿತ್ಸೆ ನಂತರ ಹಾವು ಚೇತರಿಸಿಕೊಂಡಿದ್ದು, ನಂತರದಲ್ಲಿ ಹಾವನ್ನು‌ ಕಾಡಿಗೆ ಬಿಡುವುದಾಗಿ ಉರಗ ತಜ್ಞ ವೇಣು ತಿಳಿಸಿದರು.

ಪಶುವೈದ್ಯ ಡಾ.ಆದರ್ಶ ಹಾವಿನ ಆರೈಕೆ ಮಾಡುತ್ತಿರುವ ಚಿತ್ರಣ

ಹಾವುಗಳನ್ನು ಹಿಡಿದು ಕಾಡಿಗೆ ಬಿಡ್ತಿದ್ದ.. ಆದರೆ ತನಗೆ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ..