ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುವರೆ? ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ ರಾಜಣ್ಣ

ತಮ್ಮ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಮಾಡಿದ್ದ ಮತಗಳ್ಳತನ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆಎನ್ ರಾಜಣ್ಣ ಸ್ವಪಕ್ಷಕ್ಕೆ ಇರಿಸು ಮುರಿಸು ಉಂಟುಮಾಡಿದ್ದು, ಈ ಸಂಬಂಧ ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಚಿವ ಸ್ಥಾನದಿಂದ ರಾಜಣ್ಣ ಅವರನ್ನ ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಜಣ್ಣ ಒಂದಲ್ಲ ಒಂದು ಹೇಳಿಕೆ ಮೂಲಕ ಪಕ್ಷಕ್ಕೆ ಮುಜುಗರ ಉಂಟಾಗುವಂತ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಆರ್​ ಎಸ್​ಎಸ್​ ವಿಚಾರವಾಗಿ ತಮ್ಮದೇ ಸರ್ಕಾರದ ನಡೆಯನ್ನು ಪ್ರಶ್ನಿಸಿ ಮತ್ತೆ ಸುದ್ದಿಯಾಗಿದ್ದಾರೆ.

ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುವರೆ? ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ ರಾಜಣ್ಣ
Kn Rajanna

Updated on: Oct 18, 2025 | 7:43 PM

ತುಮಕೂರು, (ಅಕ್ಟೋಬರ್ 18): ಪಕ್ಷಕ್ಕೆ ಇರುಸು ಮುರುಸು ಮಾಡಿದ ಸಂಬಂಧ ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ನಾಯಕ ಕೆಎನ್ ರಾಜಣ್ಣ (KN Rajanna) ಇದೀಗ ಸರ್ಕಾರಕ್ಕೆ ಮುಜುಗರವಾಗುಂತ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹೌದು…ಆರ್​ ಎಸ್​​ಎಸ್ (RSS)​ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲೆಂದೇ ಸರ್ಕಾರಿ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೆ ತರಲು ಮುಂದಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ಹಿಡಿದು ರಾಜ್ಯ ಮಟ್ಟದ ನಾಯಕರೂ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ. ಆದ್ರೆ ಕೈ ಹಿರಿಯ ನಾಯಕ ಕೆಎನ್ ರಾಜಣ್ಣ ಮಾತ್ರ ಪರೋಕ್ಷವಾಗಿ ಆರ್​ ಎಸ್​ಎಸ್ ಪರ ಬ್ಯಾಟಿಂಗ್ ಮಾಡಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜಣ್ಣ ಮತ್ತೊಮ್ಮೆ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್​ ಗೆ ಮುಜುಗರು ಉಂಟು ಮಾಡುವಂತ ಹೇಳಿಕೆ ಕೊಟ್ಟಿದ್ದಾರೆ.

ಸರ್ಕಾರಿ ಜಾಗದಲ್ಲಿ RSS ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ​​ಪರ್ಮಿಷನ್ ತಗೊಂಡು ಮಾಡಿ ಅಂತಾ ಹೇಳಿದ್ದಾರೆ ಹೊರತು ಆರ್​ ಎಸ್​ಎಸ್ ಬ್ಯಾನ್ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಲ್ಲ. ಸರ್ಕಾರಿ ಜಾಗದಲ್ಲಿ RSS ಆಗಲಿ ಬೇರೆ ಯಾವುದೇ ಸಂಘಟನೆ ಆಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಎಂದು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗುತ್ತೆ ಎನ್ನುವುದನ್ನು ನೋಡೋಣ. ಈದ್ಗಾ ಮೈದಾನದಲ್ಲಿ ರಸ್ತೆಯಲ್ಲೇ ನಮಾಜ್ ಮಾಡುತ್ತಾರೆ. ಅವರು (ಮುಸ್ಲಿಂ) ಪರ್ಮಿಷನ್ ತೆಗೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅನುಮತಿ ಇಲ್ಲದೆ ನಡೆಯುವ ನಮಾಜ್​ ನಿಷೇಧಿಸಿ: ಸಿಎಂಗೆ ಶಾಸಕ ಯತ್ನಾಳ್​ ಪತ್ರ

ರಸ್ತೆಯಲ್ಲಿ ನಮಾಜ್ ಮಾಡಲು ಪರ್ಮಿಷನ್ ಕೊಡಿ ಎಂದು ಅವರು ಬರ್ತಾರಾ? ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಎಂದು ಹೇಳುತ್ತೀವಾ? ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ ಎಂದು ಆರ್​ ಎಸ್​ಎಸ್​ ನಿರ್ಬಂಧ ಹಾಕುವ ಸರ್ಕಾರದ ಧೋರಣೆಗೆ ರಾಜಣ್ಣ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳಲ್ಲಿ ಆರ್​​ಎಸ್​ಎಸ್​ ಕಾರ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅನುಮತಿ ಪಡೆಯಬೇಕೆಂದು ನಿಯಮ ಜಾರಿಗೆ ತರಲು ಮುಂದಾಗಿದೆ.  ಇದಕ್ಕೆ ಹಿಂದೂ ಸಂಘಟನೆ ಹಾಗೂ ಬಿಜೆಪಿ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ತಿರುಗೇಟು ನೀಡಿತ್ತಿದ್ದಾರೆ. ಆದ್ರೆ, ಕಾಂಗ್ರೆಸ್ ಹಿರಿಯ ನಾಯಕ ರಾಜಣ್ಣ ಮಾತ್ರ ಪರೋಕ್ಷವಾಗಿ ಆರ್​ಎಸ್​ಎಸ್​ ಪರ ಬ್ಯಾಟಿಂಗ್ ಮಾಡಿದ್ದು, ಸ್ವಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Published On - 7:31 pm, Sat, 18 October 25

Follow Us