ಸಿದ್ದರಾಮಯ್ಯ ಸಂಪುಟದ ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

|

Updated on: Oct 21, 2024 | 3:44 PM

ಮುಡಾ ಹಗರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಸಚಿವರ ವಿರುದ್ಧ ಒಂದೊಂದೇ ಆರೋಪಗಳು ಕೇಳಿಬರುತ್ತಿದ್ದು, ಅವು ರಾಜಭವನ ಮೆಟ್ಟಿಲೇರುತ್ತಿವೆ. ಪ್ರಿಯಾಂಕ್ ಖರ್ಗೆ, ಎಂಪಿ ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಸಚಿವರ ವಿರುದ್ಧ ಆರ್​ಟಿಐ ಕಾರ್ಯಕರ್ತರೊಬ್ಬರು ರಾಜಭವನ ಮೆಟ್ಟಿಲೇರಿದ್ದಾರೆ.

ಸಿದ್ದರಾಮಯ್ಯ ಸಂಪುಟದ ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
ಕರ್ನಾಟಕ ರಾಜಭವನ
Follow us on

ಬೆಂಗಳೂರು,(ಅಕ್ಟೋಬರ್ 21): ಸಿದ್ದರಾಮಯ್ಯ ಸಂಪುಟದ ಸಚಿವರ ವಿರುದ್ಧ ಒಂದೊಂದೇ ಆರೋಪಗಳು ಕೇಳಿಬರುತ್ತಿವೆ. ವಾಲ್ಮೀಕಿ, ಮುಡಾ ಹಗರಣದ ಮಧ್ಯ ಸಚಿವರ ವಿರುದ್ಧ ಅಕ್ರಮವಾಗಿ ಭೂಮಿ ಪಡೆದ ಆರೋಪ ಕೇಳಿಬಂದಿವೆ. ಸಚಿವರಾದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಸಚಿವ ಬೋಸರಾಜು ವಿರುದ್ಧ ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜಭವನ ಮೆಟ್ಟಿಲೇರಿದ್ದಾರೆ. ಹೌದು.. ಸಚಿವ ಎನ್.ಎಸ್.ಬೋಸರಾಜು ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ರಾಯಚೂರಿನಲ್ಲಿ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕುರಿತಂತೆ ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಅದರ ಪ್ರಕಾರ, ಸಿ.ಎಚ್.ಶ್ರೀನಿವಾಸ್, ಎನ್.ಎಸ್.ಕೃಷ್ಣವೇಣಿ, ಮುತ್ಯಾಲ ತಿರುಮಲ, ವಿ.ಶಿವನಾದ ಅವರು ಆರೋಪಿಗಳಾಗಿದ್ದಾರೆ. ಕೃಷ್ಣವೇಣಿಯವರು ಎನ್.ಎಸ್.ಬೋಸರಾಜು ಅವರ ಪತ್ನಿಯಾಗಿದ್ದು, ಅರಣ್ಯ ಒತ್ತುವರಿಯಲ್ಲಿ ಪ್ರಭಾವ ಬಳಕೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಭೂಮಿ ಒತ್ತುವರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೃಜನಪಕ್ಷಪಾತ ಎಸಗಲಾಗಿದೆ. ಗುಂಪು ರಚನೆ ಮಾಡಿಕೊಂಡು ರಕ್ಷಿತಾರಣ್ಯವನ್ನು ಕಬಳಿಸಿದ್ದಾರೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂ. ದರ ಇದೆ. ಒಟ್ಟು ಭೂಮಿಗೆ ನೂರಾರು ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವಿದೆ. ಕೃಷ್ಣವೇಣಿ ಅವರು 17 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂದು ದೂರಿದ್ದಾರೆ. ಅರಣ್ಯ ಒತ್ತುವರಿ ವಿಚಾರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಎನ್.ಎಸ್.ಬೋಸರಾಜು ಅವರನ್ನು ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ