ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕಾರವಾರದಲ್ಲಿ ವಿನೂತನ ಪ್ರಯೋಗ; ಕಾಳಿ ನದಿಯಲ್ಲಿ ಸುತ್ತಾಡಲು ಶಿಖರ ಕ್ರೂಸರ್ ಅಳವಡಿಕೆ
ಕಾರವಾರದ ಕಾಳಿ ನದಿಯಲ್ಲಿ ತಿರುಗಾಡುತ್ತಾ ಅದ್ಭುತ ಸಮಯಗಳನ್ನು ಕಳೆಯಲು ಶಿಖರ ಕ್ರೂಸ್ ತಯಾರಾಗಿದೆ. ಈ ಹಿಂದೆ ಕಾಳಿ ನದಿಯ ಮಧ್ಯದಲ್ಲಿರುವ ಐಲ್ಯಾಂಡ್ನಲ್ಲಿ ಅರಣ್ಯ ಇಲಾಖೆ ಬೋರ್ಡ್ ವಾಕ್ ನಿರ್ಮಿಸಿತ್ತು. ಆದರೆ, ಇದೀಗ ಕಾಳಿ ರಿವರ್ ಗಾರ್ಡನ್ ಬಳಿ ಶಿಖರ ಕ್ರೂಸ್ ಪ್ರಾರಂಭಿಸಲಾಗಿದೆ.

ಉತ್ತರ ಕನ್ನಡ: ನೈಸರ್ಗಿಕ ಸೌಂದರ್ಯವನ್ನೊಳಗೊಂಡು ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿರುವ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ ಜಿಲ್ಲೆ. ಇಲ್ಲಿನ ಕಾಡು, ದ್ವೀಪ, ಕರಾವಳಿ ಭಾಗಗಳಲ್ಲಿ ಸಮಯ ಕಳೆಯಲೆಂದೇ ದೇಶ- ವಿದೇಶದ ಜನರು ಕೂಡ ಜಿಲ್ಲೆಗೆ ಭೇಟಿ ನೀಡಿ ಖುಷಿಯಿಂದ ಸಮಯವನ್ನು ಕಳೆಯುತ್ತಾರೆ. ಆದರೆ, ಇದೀಗ ಜಿಲ್ಲೆಯ ಸುಂದರತೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದ್ದು, ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಸುಂದರ ದಿನಗಳನ್ನು ನದಿ ಹಾಗೂ ಐಲ್ಯಾಂಡ್ ಮಧ್ಯೆ ಕಳೆಯಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದ್ದು, ದೇಶ- ವಿದೇಶದ ಜನರು ಇಲ್ಲಿನ ಗೋಕರ್ಣ, ಮುರುಡೇಶ್ವರ, ಕಾರವಾರ, ಜೊಯಿಡಾ, ದಾಂಡೇಲಿ ಮುಂತಾದೆಡೆಗೆ ಭೇಟಿ ನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಜಿಲ್ಲಾಡಳಿತ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಇದೀಗ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಜಿಲ್ಲೆಯ ಕಾರವಾರದಲ್ಲಿ ಕ್ರೂಸ್ ತಯಾರಾಗಿದೆ.
ಕಾರವಾರದ ಕಾಳಿ ನದಿಯಲ್ಲಿ ತಿರುಗಾಡುತ್ತಾ ಅದ್ಭುತ ಸಮಯಗಳನ್ನು ಕಳೆಯಲು ಶಿಖರ ಕ್ರೂಸ್ ತಯಾರಾಗಿದೆ. ಈ ಹಿಂದೆ ಕಾಳಿ ನದಿಯ ಮಧ್ಯದಲ್ಲಿರುವ ಐಲ್ಯಾಂಡ್ನಲ್ಲಿ ಅರಣ್ಯ ಇಲಾಖೆ ಬೋರ್ಡ್ ವಾಕ್ ನಿರ್ಮಿಸಿತ್ತು. ಆದರೆ, ಇದೀಗ ಕಾಳಿ ರಿವರ್ ಗಾರ್ಡನ್ ಬಳಿ ಶಿಖರ ಕ್ರೂಸ್ ಪ್ರಾರಂಭಿಸಲಾಗಿದ್ದು, ಈ ಕ್ರೂಸ್ ಮೂಲಕ ಕಾಳಿ ನದಿಯಲ್ಲಿ ಓಡಾಡುವ ಅನುಭವ ನೀಡುವುದರೊಂದಿಗೆ ಐಲ್ಯಾಂಡ್ನಲ್ಲಿರುವ ಬೋರ್ಡ್ ವಾಕ್ ಹಾಗೂ ಕಾಳಿ ಮಾತಾ ದೇವಸ್ಥಾನಕ್ಕೂ ಇಲ್ಲಿಂದಲೇ ಹೋಗಿ ದೇವಿಯ ಆಶೀರ್ವಾದ ಪಡೆಯಬಹುದಾಗಿದೆ.
ಈ ಶಿಖರ ಕ್ರೂಸ್ನಲ್ಲಿ ತಿರುಗಾಡುವುದು ಮಾತ್ರವಲ್ಲದೇ, ಪಾರ್ಟಿ ಮಾಡುವುದಕ್ಕೂ ಅವಕಾಶವಿದೆ. ಕುಟುಂಬ ಸದ್ಯರು ಇಲ್ಲಿಗೆ ಬಂದು ತಮ್ಮ ಹುಟ್ಟಿನ ದಿನ ಅಥವಾ ಇತರ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳನ್ನು ಈ ಕ್ರೂಸ್ನಲ್ಲಿ ಆರಾಮವಾಗಿ ನಡೆಸಬಹುದಾಗಿದೆ. ಗಂಟೆಗಳ ಮೇಲೆ, ಅರ್ಧ ದಿನ ಅಥವಾ ದಿನ-ರಾತ್ರಿ ಇದರಲ್ಲಿ ಪಾರ್ಟಿ ನಡೆಸಲು ಅವಕಾಶ ನೀಡಲಾಗಿದ್ದು, ಆರ್ಡರ್ ನಡೆಸಿದಲ್ಲಿ ಬೇಕಾದ ಆಹಾರವೂ ಪ್ರವಾಸಿಗರಿಗೆ ಇಲ್ಲಿ ಪೂರೈಕೆಯಾಗುತ್ತದೆ. ನದಿ ಮಧ್ಯೆ ತಂಗಾಳಿಯೊಂದಿಗೆ ಯಾವುದೇ ಕಿರಿ-ಕಿರಿಯಿಲ್ಲದೇ ಸಮಯ ಕಳೆಯಲು ಇದೊಂದು ಅದ್ಭುತ ಅವಕಾಶವಾಗಿದ್ದು, ಗೋವಾ- ಕೇರಳ ಹೊರತುಪಡಿಸಿದರೆ ಮಂಗಳೂರಿನಿಂದ ಕಾರವಾರದವರೆಗಿನ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕ್ರೂಸ್ ಸೇವೆ ಆಯೋಜಕರಾದ ಸ್ಟೆಫಿ ಹೇಳಿದ್ದಾರೆ.

ಕಾಳಿ ನದಿಯ ಚಿತ್ರಣ
ಒಟ್ಟಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪೂರಕವಾಗಿ ಶಿಖರ ಕ್ರೂಸ್ ಕಾರವಾರದಲ್ಲಿ ಪ್ರಾರಂಭಗೊಂಡಿದ್ದು, ಅದ್ಭುತ ಕ್ಷಣಗಳನ್ನು ಈ ಬೋಟ್ನಲ್ಲಿ ಕಳೆಯಲು ಪ್ರವಾಸಿಗರು ಕೂಡ ಸನ್ನದ್ಧಗೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಇನ್ನು ಹೆಚ್ಚಿನ ಬೆಂಬಲ ದೊರೆತಲ್ಲಿ ಜಿಲ್ಲೆಯು ಕೂಡಾ ಗೋವಾದಷ್ಟೇ ಖ್ಯಾತಿ ಪಡೆಯುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:
ಕಾರವಾರದ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ; ಇಂಧನ ಉಳಿಸುವಲ್ಲಿ ಸಹಕಾರಿ
ಕರಾವಳಿ ಸಮುದ್ರಗಳಿಗೆ ಕಾಯಕಲ್ಪ; ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಮುಂದಾದ ಮಂಗಳೂರು ಜಿಲ್ಲಾಡಳಿತ
( Shikhara Cruiser is installed in Kali River to promote Tourism in Karwar)



