ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ದುರ್ಮರಣ: ಪತಿ ಸಾವು, ಪತ್ನಿಗೆ ಶಾಕ್
ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಭಯ್(16), ಮಾಲತೇಶ್(27) ಮೃತ ದುರ್ದೈವಿಗಳು. ಬಾಲಕ ಅಭಯ್ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಮಾಲತೇಶ್ ಸಹ ಮೃತಪಟ್ಟಿದ್ದಾನೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿವಮೊಗ್ಗ, ಮೇ 23: ಕಳೆದ ಎರಡು ಮೂರು ದಿನಗಳಿಂದ ಪೂರ್ವ ಮುಂಗಾರು ಮಲೆನಾಡಿನಲ್ಲಿ ಮಳೆ (Rain) ಧಾರಕಾರವಾಗಿ ಸುರಿದಿದೆ. ಮಳೆ ಬೀಳುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿಯ ಕೆಲಸ ಮಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ (Death) ಹೊಂದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ನಡೆದಿದೆ. ಅಭಯ್(16), ಮಾಲತೇಶ್(27) ಮೃತ ದುರ್ದೈವಿಗಳು. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದವು. ಈ ವೇಳೆ ಬಾಲಕ ಅಭಯ ಕೂಡ ಇಂದು ಪೋಷಕರ ಹೊಲದಲ್ಲಿ ಕೃಷಿ ಕೆಲಸಕ್ಕೆ ಸಹಾಯ ಮಾಡಲು ತೆರಳಿದ್ದನು. ಈ ವೇಳೆ ಭೂಮಿಯನ್ನು ಬಿತ್ತನೆ ಹದಗೊಳಿಸುತ್ತಿದ್ದರು. ಅಭಯಗೆ ಬಾಯಾರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಆತ ಕೃಷಿ ಹೊಂಡದಲ್ಲಿರುವ ನೀರು ಕುಡಿಯಲು ಮುಂದಾಗಿದ್ದಾನೆ. ಅಭಯ ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದಾನೆ. ಇದನ್ನೂ ದೂರದಲ್ಲಿ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಹದಗೊಳಿಸುತ್ತಿದ್ದ ಮಾಲತೇಶ್ ಯುವಕನು ನೋಡಿದ್ದಾನೆ.
ಇದನ್ನೂ ಓದಿ: ಚಾಕೊಲೇಟ್ ಗ್ಯಾಂಗ್ ಬೆನ್ನಲ್ಲೇ ಆ್ಯಕ್ಟೀವ್ ಆಯ್ತು ಜ್ಯೂಸ್ ಗ್ಯಾಂಗ್: ಕೆಎಸ್ಆರ್ಟಿಸಿ ಬಸ್ನಲ್ಲೇ ನಗನಾಣ್ಯ ದರೋಡೆ
ಆತ ಕೂಡಲೇ ಕೃಷಿ ಹೊಂಡದ ಬಳಿ ದೌಡಾಯಿಸಿದ್ದಾನೆ. ಆತನ ಬಚಾವ್ ಮಾಡಲು ಹೋಗಿದ್ದ ಮಾಲತೇಶ್ ಕೂಡ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ. ಇಬ್ಬರು ನೀರು ಪಾಲಾಗಿದ್ದಾರೆ. ಇದನ್ನು ನೋಡಿದ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ ಪ್ರಯೊಜನವಾಗಿಲ್ಲ. ಇಬ್ಬರ ಜೀವ ಆಗ್ಲೇ ಹೋಗಿಬಿಟ್ಟಿತ್ತು.
ನೀರು ಪಾಲಾಗಿದ್ದ ಇಬ್ಬರ ಶವವನ್ನು ಗ್ರಾಮಸ್ಥರೇ ಮೇಲೆಯೆತ್ತಿದ್ದಾರೆ. ಇಬ್ಬರ ಸಾವು ನೋಡಿದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರು ಇಬ್ಬರು ಪತ್ಯೇಕ ಕುಟುಂಬ. ಆದರೆ ಇಬ್ಬರು ಚನ್ನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಟುಂಬಸ್ಥರೆಲ್ಲರೂ ತುಂಬಾ ಉತ್ಸಾಹದಿಂದ ಕೃಷಿ ಚಟುವಟಕೆಯಲ್ಲಿ ತೊಡಗಿದ್ದರು. ಕಳೆದ ವರ್ಷ ಭೀಕರ ಬರಗಾಲ ಮಲೆನಾಡಿನಲ್ಲಿ ಬಿದ್ದಿತ್ತು. ಈ ವರ್ಷ ಮುಂಗಾರು ಆರಂಭದ ಮೊದಲೇ ಉತ್ತಮ ಮಳೆ ಆಗಿರುವ ಖುಷಿ ರೈತರಲ್ಲಿತ್ತು. ಹೀಗಾಗಿ ಮಳೆ ಬಿದ್ದ ಕೂಡಲೇ ಬಿತ್ತನೆಗಾಗಿ ರೈತರು ತಮ್ಮ ತಮ್ಮ ಭೂಮಿಯತ್ತ ಮುಖ ಮಾಡಿದ್ದರು. ಆದರೆ ಕೃಷಿ ಚಟುವಟಕೆಯ ಖುಷಿಯಲ್ಲಿದ್ದ ರೈತರಿಗೆ ದೊಡ್ಡ ಆಘಾತ ಎದುರಾಗುತ್ತದೆ ಎನ್ನುವುದು ಕನಸು ಮನಸಿನಲ್ಲಿ ಅಂದುಕೊಂಡಿರಲಿಲ್ಲ.
ಮದುವೆಯಾಗಿ ಕೇವಲ 1 ವರ್ಷದಲ್ಲೇ ಪತಿ ಸಾವು: ಪತ್ನಿಗೆ ಶಾಕ್
ಮೃತ ಪಟ್ಟ ಬಾಲಕ ಅಭಯ ಇನ್ನೂ ಪ್ರಪಂಚವನ್ನೇ ನೋಡಿರಲಿಲ್ಲ. ಬಾಲಕನ ಸಾವು ಕುಟುಂಬಸ್ಥರಿಗೆ ದೊಡ್ಡ ಆಘಾತ ತಂದಿದೆ. ಹೆತ್ತವರು ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಇನ್ನೂ ಬಾಲಕನ ಬಚಾವ್ ಮಾಡಲು ತೆರಳಿದ್ದ ಮಾಲತೇಶ್ನ ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ಅಭಯನ ಜೀವ ಉಳಿಸಲು ಹೋಗಿ ಮಾಲತೇಶ್ ತನ್ನ ಜೀವ ಕಳೆದುಕೊಂಡಿದ್ದಾನೆ. ಮಾಲತೇಶ್ ಪತ್ನಿಗೆ ಪತಿ ಸಾವು ದೊಡ್ಡ ಶಾಕ್ ನೀಡಿದೆ.
ಇದನ್ನೂ ಓದಿ: ಅಪರಿಚಿತರ ಜೊತೆ ವಿಡಿಯೋ ಕಾಲ್ ಶಂಕೆ; ಪತ್ನಿ ಕೊಂದು ಪತಿ ಪರಾರಿ ಆರೋಪ
ಮದುವೆಯಾಗಿ ಒಂದೇ ವರ್ಷಕ್ಕೆ ಪತಿಯನ್ನು ಕಳೆದಕೊಂಡ ಪತ್ನಿ ಹಾಗೂ ಮಾಲತೇಶ್ ಕುಟುಂಬಸ್ಥರು ಕಣ್ನೀರಿನಲ್ಲಿ ಕೈತೊಳೆಯುವಂತಾಗಿದೆ. ಈ ಇಬ್ಬರ ಸಾವಿನ ದುರ್ಘಟನೆ ನೋಡಿದ ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ. ಸದ್ಯ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಕೃಷಿ ಹೊಂಡದಲ್ಲಿ ದೊಡ್ಡ ದುರಂತ ನಡೆದು ಹೋಗಿದೆ. ಇಬ್ಬರನ್ನು ಕೃಷಿ ಹೊಂಡವು ಬಲಿ ಪಡೆದುಕೊಂಡಿದೆ. ಮಳೆ ಬಂದ ಖುಷಿಯಲ್ಲಿದ್ದ ರೈತಾಪಿ ಕುಟುಂಬಕ್ಕೆ ದೊಡ್ಡ ಆಘಾತ. ಇಬ್ಬರ ಸಾವಿನ ಸುದ್ದಿಯು ಎಲ್ಲ ರೈತರ ಕೃಷಿ ಚಟುಟಕೆಗಳಿಗೆ ಬ್ರೇಕ್ ಹಾಕಿದೆ. ಈ ಇಬ್ಬರ ಸಾವು ನ್ಯಾಯವೇ ಅಂತಾ ಹೆತ್ತವರು ಕಣ್ಣೀರು ಹಾಕುವಂತಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Thu, 23 May 24



