15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ದುರಂತ ಸಾವು, ಫೋಟೋ ಶೂಟ್​ಗೆ​ ಹೋಗಬೇಕಿದ್ದವಳು ಮಸಣಕ್ಕೆ

ಇದೇ ತಿಂಗಳು ಈ ಯುವತಿ ಮದುವೆ ಫಿಕ್ಸ್ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ, ಇಂದು ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಇಂದೇ ತನ್ನ ಭಾವಿ ಪತಿಯೊಂದಿಗೆ ಫೋಟೋ ಶೂಟ್ ಗೆ ತೆರಳಬೇಕಿತ್ತು. ಆದ್ರೆ ವಿಧಿ ಆಟವೇ ಬೇರೆಯಾಗಿದೆ. ಇನ್ನೇನು ಹಲವು ಕನಸಗೊಂದಿಗೆ ಹಸೆಮಣೆ ಏರಬೇಕಿದ್ದ ಯುವತಿ ದುರಂತ ಅಂತ್ಯಕಂಡಿದ್ದಾಳೆ.

15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ದುರಂತ ಸಾವು, ಫೋಟೋ ಶೂಟ್​ಗೆ​ ಹೋಗಬೇಕಿದ್ದವಳು ಮಸಣಕ್ಕೆ
Kavitha
Edited By:

Updated on: Sep 08, 2025 | 8:13 PM

ಶಿವಮೊಗ್ಗ, (ಸೆಪ್ಟೆಂಬರ್ 08): ಇನ್ನೇನು 15 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ರಸ್ತೆ ಅಪಘಾತದಲ್ಲಿ (Road Accident) ದುರಂತ ಸಾವು ಕಂಡಿದ್ದಾಳೆ. ಮದುವೆ (Marriage)  ಹಿನ್ನೆಲೆಯಲ್ಲಿ ಇವತ್ತು ಲಾಸ್ಟ್ ಡೇ ಎಂದು ಆಫೀಸ್​ ನಲ್ಲಿ ಹೇಳಿ ತನ್ನ ಸಹೋದರನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶಿವಮೊಗ್ಗ (Shivamogga) ಹೊರವಲಯದ ದುಮ್ಮಳ್ಳಿ ಕ್ರಾಸ್ ನ ಸಕ್ಕರೆ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಕವಿತಾ (26) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್‌ನಲ್ಲಿ ಮಿತಿಮೀರಿದ ಲಗೇಜ್‌ ತುಂಬಿಕೊಂಡ ವ್ಯಕ್ತಿ ಇವರು ಹೋಗುತ್ತಿದ್ದ ಬೈಕ್‌ಗೆ ತಾಕಿಸಿದ್ದಾನೆ. ಈ ವೇಳೆ ಯುವತಿಯ ಸಹೋದರ ಫುಟ್‌ಪಾತ್‌ ಮೇಲೆ ಬಿದ್ದರೆ, ಆಕೆ ರಸ್ತೆಗೆ ಬಿದ್ದಿದ್ದಳು. ಈ ವೇಳೆ ಹಿಂದೆ ಇದ್ದ ಸಿಟಿ ಬಸ್‌ ಆಕೆಯ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಇದೇ ಸೆಪ್ಟೆಂಬರ್ 24ರಂದು ಮದುವೆಯಾಗಬೇಕಿದ್ದ ಕವಿತಾ ರೆಡಿಯಾಲಜಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ಸರ್ಜಿ ಆಸ್ಪತ್ರೆಯಲ್ಲಿ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಫೋಟೋ ಶೂಟ್ ಗೆ ತೆರಳಬೇಕಿತ್ತು. ಆದ್ರೆ, ಅಷ್ಟರಲ್ಲಿ ಈ ದುರಂತ ನಡೆದಿದೆ.

ಇದನ್ನೂ ಓದಿ: ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ

ಸಹೋದರ ಸಂತೋಷನ ಜೊತೆ ಪಲ್ಸರ್ ಬೈಕ್ ನಲ್ಲಿ ಕವಿತಾ ಹೊರಟಿದ್ದಳು. ಆ ವೇಳೆ ಟಿವಿಎಸ್ ಬಂದು ಕವಿತಾ ಇದ್ದ ಬೈಕ್​​ ಗೆ ಟಚ್ ಆಗಿದೆ. ಇದರಿಂದ ಬ್ಯಾಲೆನ್ಸ್ ತಪ್ಪಿ ಸಂತೋಷ್ ಹೋಗಿ ಫುಟ್​ ಬಾತ್​ ಮೇಲೆ ಬಿದ್ದಿದ್ದರೆ, ಕವಿತಾ ರಸ್ತೆ ಮೇಲೆ ಬಿದ್ದಿದ್ದು, ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಖಾಸಗಿ ಬಸ್ ಕವಿತಾಳ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾಳೆ. ಬೈಕ್ ಓಡಿಸುತ್ತಿದ್ದ ಸಹೋದರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಶವಾಗಾರಕ್ಕೆ ಬಿಜೆಪಿ ಎಂ.ಎಲ್.ಸಿ. ಹಾಗೂ ಆಸ್ಪತ್ರೆ ಮಾಲಿಕರಾದ ಡಾ. ಧನಂಜಯ ಸರ್ಜಿ ಭೇಟಿ ನೀಡಿ, ಮೃತ ಯುವತಿ ಕವಿತಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇತ್ತ ಶಿವಮೊಗ್ಗ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಕುಟುಂಬಕ್ಕೆ ಬಿಜೆಪಿ ಎಂಎಲ್ ಸಿ ಒಂದಿಷ್ಟು ಆರ್ಥಿಕ ಸಹಾಯದ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Follow Us