ಕೃಷಿ ಇಲಾಖೆ ಜಂಟಿ ನಿರ್ದೇಶಕ ನಿವಾಸದಲ್ಲಿ ಭಾರಿ ಪ್ರಮಾಣದ ಚಿನ್ನದ ಗಟ್ಟಿ ಪತ್ತೆ; ರುದ್ರೇಶಪ್ಪ ಎಸಿಬಿ ವಶಕ್ಕೆ

ಶಿವಮೊಗ್ಗದ ಚಾಲುಕ್ಯನಗರ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಗಟ್ಟಿ ಬಂಗಾರ ಪತ್ತೆ ಆಗಿದೆ. ಗಟ್ಟಿ ಬಂಗಾರ ಸಂಗ್ರಹಿಸಿಡುವುದು ಕಾನೂನು ಬಾಹಿರ. ಈ ಕಾರಣದಿಂದ ಎಸಿಬಿ ಎಸ್​ಪಿ ಜಯಪ್ರಕಾಶ್ ನೇತೃತ್ವದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ನಿವಾಸದಲ್ಲಿ ಭಾರಿ ಪ್ರಮಾಣದ ಚಿನ್ನದ ಗಟ್ಟಿ ಪತ್ತೆ; ರುದ್ರೇಶಪ್ಪ ಎಸಿಬಿ ವಶಕ್ಕೆ
ಭಾರಿ ಪ್ರಮಾಣದ ಚಿನ್ನದ ಗಟ್ಟಿ ಪತ್ತೆ
Follow us
| Updated By: ganapathi bhat

Updated on:Nov 24, 2021 | 9:47 PM

ಶಿವಮೊಗ್ಗ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ​​ ಅವರನ್ನು ಎಸಿಬಿ ವಶಕ್ಕೆ ಪಡೆದುಕೊಂಡಿದೆ. ಶಿವಮೊಗ್ಗದ ಚಾಲುಕ್ಯನಗರ ನಿವಾಸದಲ್ಲಿ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪರನ್ನು ವಶಕ್ಕೆ ಪಡೆಯಲಾಗಿದೆ. ರುದ್ರೇಶಪ್ಪ​ಗೆ ಸೇರಿದ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಿನ್ನೆಲೆ ಹಾಗೂ ನಾಳೆ ಬೆಳಗ್ಗೆ ಒಂದು ಲಾಕರ್ ಓಪನ್ ಮಾಡಬೇಕಿದೆ. ಅಲ್ಲದೆ, ಶಿವಮೊಗ್ಗದ ಚಾಲುಕ್ಯನಗರ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಗಟ್ಟಿ ಬಂಗಾರ ಪತ್ತೆ ಆಗಿದೆ. ಗಟ್ಟಿ ಬಂಗಾರ ಸಂಗ್ರಹಿಸಿಡುವುದು ಕಾನೂನು ಬಾಹಿರ. ಈ ಕಾರಣದಿಂದ ಎಸಿಬಿ ಎಸ್​ಪಿ ಜಯಪ್ರಕಾಶ್ ನೇತೃತ್ವದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ರಾಜ್ಯದಲ್ಲಿ ನಡೆದ ಎಸಿಬಿ ದಾಳಿಯ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ರುದ್ರೇಶಪ್ಪ ಮನೆಯಲ್ಲಿ 15 ಲಕ್ಷ 94 ಸಾವಿರ ನಗದು ಪತ್ತೆ ಆಗಿದೆ. ಶಿವಮೊಗ್ಗ ನಗರದಲ್ಲಿ 2 ವಾಸದ ಮನೆ, ವಿವಿಧೆಡೆ 4 ನಿವೇಶನ ಇರುವುದು ತಿಳಿದುಬಂದಿದೆ. 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೆಟ್, ಆಭರಣಗಳು ಪತ್ತೆಯಾಗಿದೆ. 3 ಕೆಜಿ ಬೆಳ್ಳಿ ವಸ್ತುಗಳು, 2 ವಿವಿಧ ಕಂಪನಿಗಳ ಕಾರುಗಳು, 3 ದ್ವಿಚಕ್ರ ವಾಹನ, 8 ಎಕರೆ ಕೃಷಿ ಜಮೀನು, 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ ಆಗಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ಇಲ್ಲಿನ ಹಿರಿಯ ಮೋಟಾರು ನಿರೀಕ್ಷಕ ಮರಲಿಂಗಣ್ಣನವರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಸದಾಶಿವ ಮನೆಯಲ್ಲಿ 8 ಲಕ್ಷ 22 ಸಾವಿರ ರೂಪಾಯಿ ಪತ್ತೆ ಆಗಿದೆ. 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ ಆಗಿದೆ. 1 ಕೆಜಿ 135 ಗ್ರಾಂ ಚಿನ್ನಾಭರಣ, ಬೆಳಗಾವಿಯಲ್ಲಿ 1 ಮನೆ, 22 ಎಕರೆ ಜಮೀನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಬೈಲಹೊಂಗಲ ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಆಸ್ತಿ ವಿವರ ಹೀಗಿದೆ. 1 ಲಕ್ಷ 10 ಸಾವಿರ ನಗದು, 263 ಗ್ರಾಂ ಚಿನ್ನಾಭರಣ, 945 ಬೆಳ್ಳಿ ವಸ್ತುಗಳು, ಬೈಲಹೊಂಗಲದಲ್ಲಿ 2 ಮನೆಗಳು, 4 ನಿವೇಶನಗಳು, 4 ಕಾರು, 6 ಬೈಕ್‌ಗಳು ಪತ್ತೆ ಆಗಿದೆ. 5 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು, 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಷೇರು ಪತ್ತೆ ಮಾಡಲಾಗಿದೆ.

ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಪೀರಾಜಿ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಮಾಡಲಾಗಿದೆ. ಈ ವೇಳೆ, 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 38 ಸಾವಿರ ನಗದು, 239 ಗ್ರಾಂ ಚಿನ್ನಾಭರಣ, 1 ಕೆಜಿ 803 ಗ್ರಾಂ ಬೆಳ್ಳಿ, ಬೆಳಗಾವಿಯಲ್ಲಿ 1 ಮನೆ, 2 ನಿವೇಶನ, 1 ಕಾರು, 2 ಬೈಕ್ ಹೊಂದಿರುವ ಬಗ್ಗೆ ತಿಳಿದುಬಂದಿದೆ.

ನಂದಿನಿ ಹಾಲು ಉತ್ಪನ್ನಗಳು ಪ್ರಧಾನ ವ್ಯವಸ್ಥಾಪಕ ಬಿ.ಕೃಷ್ಣಾರೆಡ್ಡಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಕೇಸ್ ಸಂಬಂಧಿಸಿ ಎಸಿಬಿ ಅಧಿಕಾರಿಗಳ ದಾಳಿಯ ವೇಳೆ ಪತ್ತೆಯಾದ ಆಸ್ತಿ ವಿವರ ಲಭ್ಯವಾಗಿದೆ. 3 ಲಕ್ಷ ನಗದು, 383 ಗ್ರಾಂ ಚಿನ್ನಾಭರಣ, 3395 ಗ್ರಾಂ ಬೆಳ್ಳಿ ವಸ್ತು, ಹೊಸಕೋಟೆ ತಾಲೂಕಿನಲ್ಲಿ ಒಂದು ಪೆಟ್ರೋಲ್ ಬಂಕ್, ವಿವಿಧ ನಗರಗಳಲ್ಲಿ 3 ವಾಸದ ಮನೆ, ವಿವಿಧೆಡೆ 9 ನಿವೇಶನ, ಚಿಂತಾಮಣಿ ತಾಲೂಕಿನಲ್ಲಿ 5 ಎಕರೆ 30 ಗುಂಟೆ ಜಮೀನು ಪತ್ತೆ ಆಗಿದೆ.

ಬಳ್ಳಾರಿ ರಿಟೈರ್ಡ್ ಸಬ್‌ ರಿಜಿಸ್ಟ್ರಾರ್ ಶಿವಾನಂದ್ ಎಸಿಬಿ ದಾಳಿ ವೇಳೆ ಸಿಕ್ಕಿರುವ ಆಸ್ತಿ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಮಂಡ್ಯ ಸಿಟಿಯಲ್ಲಿ ಶಿವಾನಂದ್‌ಗೆ ಸೇರಿದ 1 ವಾಸದ ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, ಬಳ್ಳಾರಿ ಜಿಲ್ಲೆ ಮೋಕಾ ಗ್ರಾಮದಲ್ಲಿ 7 ಎಕರೆ ಕೃಷಿ ಜಮೀನು, 8 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಹೊಂದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಇದನ್ನೂ ಓದಿ: ಕರ್ನಾಟಕದ 68 ಕಡೆ ಎಸಿಬಿ ದಾಳಿ ಬಹುತೇಕ ಅಂತ್ಯ; ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ, ಹಣ ಪತ್ತೆ- ವಿವರ ಇಲ್ಲಿದೆ

ಇದನ್ನೂ ಓದಿ: ಎಸಿಬಿ ದಾಳಿ ವೇಳೆ ಸೀರೆಯಲ್ಲಿ ಬಚ್ಚಿಟ್ಟ ಹಣ ಪತ್ತೆ; ನೋಟು ಎಣಿಸಲು ಮಷೀನ್ ತಂದ ಅಧಿಕಾರಿಗಳು

Published On - 9:40 pm, Wed, 24 November 21