AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row: ಶಿವಮೊಗ್ಗದಲ್ಲಿ ತಾರಕಕ್ಕೇರಿದ ಕೇಸರಿ ಶಾಲು- ಹಿಜಾಬ್ ಗಲಾಟೆ; ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿ

Shivamogga Hijab Row: ಕರ್ನಾಟಕ ಹಿಜಾಬ್ ನಿಷೇಧದ ಕುರಿತು ತೀವ್ರ ವಿವಾದದ ನಡುವೆ ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಧ್ವಜಸ್ತಂಭವನ್ನು ಹತ್ತಿ ಕೇಸರಿ ಧ್ವಜವನ್ನು ಹಾರಿಸುತ್ತಿರುವ ವಿಡಿಯೋ ಎಲ್ಲೆಡೆ ಇನ್ನಷ್ಟು ಆಕ್ರೋಶ ಮೂಡಿಸಿದೆ.

Hijab Row: ಶಿವಮೊಗ್ಗದಲ್ಲಿ ತಾರಕಕ್ಕೇರಿದ ಕೇಸರಿ ಶಾಲು- ಹಿಜಾಬ್ ಗಲಾಟೆ; ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿ
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 08, 2022 | 3:56 PM

ಶಿವಮೊಗ್ಗ: ಕರ್ನಾಟಕದಲ್ಲಿ ಹಿಜಾಬ್ (Hijab)- ಕೇಸರಿ ಶಾಲಿನ ವಿವಾದ ಮತ್ತಷ್ಟು ಭುಗಿಲೆದ್ದಿದೆ. ಉಡುಪಿಯ ಕಾಲೇಜಿನಲ್ಲಿ ಶುರುವಾದ ಹಿಜಾಬ್ ಗಲಾಟೆ ಇದೀಗ ರಾಜ್ಯಾದ್ಯಂತ ವ್ಯಾಪಿಸಿ, ಇಡೀ ದೇಶಾದ್ಯಂತ ಸುದ್ದಿಯಾಗುತ್ತಿದೆ. ಇಂದು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಧ್ವಜಸ್ತಂಭದಲ್ಲಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಕೇಸರಿ ಧ್ವಜ (Saffron Flag) ಹಾರಿಸಿರುವ ಘಟನೆ ನಡೆದಿದೆ. ಇದರಿಂದ ಶಿವಮೊಗ್ಗದಲ್ಲಿ ಕೇಸರಿ ಶಾಲು- ಹಿಜಾಬ್ ವಿವಾದ ಇನ್ನಷ್ಟು ತಾರಕಕ್ಕೇರಿದ್ದು, ಪೊಲೀಸರು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಘಟನೆಯೂ ನಡೆಯಿತು. ಅಲ್ಲದೆ, ಶಿವಮೊಗ್ಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆಯನ್ನು ಕೂಡ ಜಾರಿಗೊಳಿಸಲಾಗಿದೆ.

ಶಿವಮೊಗ್ಗದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಸರ್ಕಾರಿ ಪಿಯು ಕಾಲೇಜಿನ ರಾಷ್ಟ್ರಧ್ವಜವನ್ನು ಹಾರಿಸುವ ಧ್ವಜಕಂಬಕ್ಕೆ ಹತ್ತಿದ ಓರ್ವ ವಿದ್ಯಾರ್ಥಿ ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಕರ್ನಾಟಕ ಹಿಜಾಬ್ ನಿಷೇಧದ ಕುರಿತು ತೀವ್ರ ವಿವಾದದ ನಡುವೆ ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಧ್ವಜಸ್ತಂಭವನ್ನು ಹತ್ತಿ ಕೇಸರಿ ಧ್ವಜವನ್ನು ಹಾರಿಸುತ್ತಿರುವ ವಿಡಿಯೋ ಎಲ್ಲೆಡೆ ಇನ್ನಷ್ಟು ಆಕ್ರೋಶ ಮೂಡಿಸಿದೆ. ಧ್ವಜಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಆ ವಿದ್ಯಾರ್ಥಿ ಕೇಸರಿ ಧ್ವಜಾರೋಹಣ ಮಾಡುವಾಗ ವಿದ್ಯಾರ್ಥಿಗಳು ಕೆಳಗೆ ಹರ್ಷೋದ್ಗಾರ ಮಾಡುವುದನ್ನು ವೀಡಿಯೊದಲ್ಲಿ ನೋಡಬಹುದು. ಅಲ್ಲಿ ನೆರೆದಿದ್ದ ಬಹುತೇಕ ವಿದ್ಯಾರ್ಥಿಗಳು ಕೂಡ ಕೇಸರಿ ಧ್ವಜ ಅಥವಾ ಶಾಲುಗಳನ್ನು ಬೀಸುತ್ತಿದ್ದರು. ಇಂದು ಬೆಳಗ್ಗೆ ಕಲ್ಲು ತೂರಾಟದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ.

ಇನ್ನು, ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾರಿಸಿರುವ ವಿವಾದದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಕಾಲೇಜೊಂದರಲ್ಲಿ ರಾಷ್ಟ್ರಧ್ವಜದ ಬದಲಾಗಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಒಂದು ವಾರ ಆನ್​ಲೈನ್​ನಲ್ಲಿ ಪಾಠ ಮುಂದುವರೆಸುವುದು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ 40 ವರ್ಷಗಳ ರಾಜಕಾರಣದಲ್ಲಿ ಇದು ಅತ್ಯಂತ ದುಃಖದ ದಿನ. ಹಿಜಾಬ್‌ ವಿರೋಧಿಸುವ ಮನಸ್ಸುಗಳು ನಮ್ಮ ರಾಷ್ಟ್ರ ಧ್ವಜವನ್ನು ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾರೆಂದರೆ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ಅರ್ಥವಾಗುತ್ತಿಲ್ಲ. ನಮ್ಮ ಧ್ವಜವೇ ನಮ್ಮ ಧರ್ಮ. ಅದಕ್ಕೆ ಗೌರವ ಕೊಡಲಾಗದಂತಹ ಮನಸ್ಥಿತಿಗಳನ್ನು ನಾವು ಬೆಳೆಸುತ್ತಿದ್ದೇವೆ ಎಂದರೆ ನಾವು ತಲೆ ತಗ್ಗಿಸಲೇಬೇಕಾಗಿದೆ. ಕೇಸರಿ ಬಣ್ಣದ ಬಗ್ಗೆ ಎಲ್ಲರಿಗೂ ಗೌರವ ಇದೆ. ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಬಣ್ಣ ಇದೆ. ಹೀಗಿರುವಾಗ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸುವ ಅಗತ್ಯವೇನಿತ್ತು? ಇನ್ನು ಒಂದು ವಾರದ ಮಟ್ಟಿಗಾದರೂ ಕಾಲೇಜುಗಳನ್ನು ಮುಚ್ಚಿಸಿ, ಇಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ಬಸ್​, ಅಂಗಡಿಗಳ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಬಂಧಿಸುವಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದ 6 ವಿದ್ಯಾರ್ಥಿಗಳನ್ನು ಠಾಣೆಗೆ ಕರೆದುಕೊಂಡು ಹೋಗುವ ವೇಳೆ ವಿದ್ಯಾರ್ಥಿಗಳ ಪೋಷಕರು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಇದನ್ನೂ ಓದಿ: Hijab: ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ಮಂಗಳೂರು, ಹಾಸನ, ಹರಿಹರದಲ್ಲಿ ಪ್ರತಿಭಟನೆ

Hijab Row Hearing Live: ಹೈಕೋರ್ಟ್​ನಲ್ಲಿ ಹಿಜಾಬ್​ ಅರ್ಜಿ ವಿಚಾರಣೆ ಆರಂಭ: ಅರ್ಜಿದಾರರಿಗೆ ನ್ಯಾಯಮೂರ್ತಿಯಿಂದ ಹಲವು ಪ್ರಶ್ನೆ

Published On - 3:55 pm, Tue, 8 February 22