ಕೆಎಸ್ ಈಶ್ವರಪ್ಪಗೆ ಮಠಾಧೀಶರ ಬೆಂಬಲ; ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲಬೇಕು ಎಂದ ಆನಂದ್ ಗುರೂಜಿ

| Updated By: ಆಯೇಷಾ ಬಾನು

Updated on: Mar 17, 2024 | 12:32 PM

ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆ,ಎಸ್. ಈಶ್ವರಪ್ಪ ಮುಂದಾಗಿದ್ದು ಈ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಆನಂದ್ ಗುರೂಜಿ ಅವರು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲಬೇಕು ಎಂದಿದ್ದಾರೆ.

ಶಿವಮೊಗ್ಗ, ಮಾರ್ಚ್​.17: ಕೇಸರಿ ಪಡೆಯ ಕಟ್ಟಾಳು ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಗೆ ಬಿಜೆಪಿಯೇ ಉಸಿರಾಗಿತ್ತು. ಆದ್ರೀಗ ಆ ಪಕ್ಷದ ವಿರುದ್ಧವೇ ಬೆಂಕಿ ಉಗುಳ್ತಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್​ಗೆ ಟಿಕೆಟ್ ಕೈ ತಪ್ಪಿದ್ದೇ ತಡ, ಶಿವಮೊಗ್ಗದಿಂದ ಸ್ವತಂತ್ರವಾಗಿ ಅಖಾಡಕ್ಕಿಳಿದು ಬಹಿರಂಗ ಸಮರ ಸಾರಿದ್ದಾರೆ. ಯಾವುದೇ ಮನವೊಲಿಕೆಗೆ ಬಗ್ಗಲ್ಲ, ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತಾ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಸದ್ಯ ಈಶ್ವರಪ್ಪನವರ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಆನಂದ್ ಗುರೂಜಿ (Anand Guruji) ಅವರು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿನ ಕೆ.ಎಸ್​.ಈಶ್ವರಪ್ಪ ನಿವಾಸಕ್ಕೆ ಆನಂದ್​ ಗುರೂಜಿ ಭೇಟಿ ನೀಡಿದ್ದಾರೆ. ಈ ವೇಳೆ ಈಶ್ವರಪ್ಪನವರು ಆನಂದ್​ ಗುರೂಜಿ ಆಶೀರ್ವಾದ ಪಡೆದಿದ್ದು ಸ್ವಾಮೀಜಿ ಆಶೀರ್ವಾದದಿಂದ ನಾನು ಚುನಾವಣೆ ಗೆಲ್ಲುತ್ತೇನೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಿಪಡಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಆನಂದ ಗುರೂಜಿ, ಈಶ್ವರಪ್ಪ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತಹ ನಾಯಕತ್ವದ ಅಗತ್ಯತೆ ಇದೆ. ಅಂತಹವರು ರಾಜಕಾರಣದಲ್ಲಿ ಇರಬೇಕು. ಈಶ್ವರಪ್ಪ ಅವರಿಗೆ ಅನ್ಯಾಯ ಆಗಬಾರದು. ನಮ್ಮೆಲ್ಲಾ ಮಠಾಧೀಶರ ಬೆಂಬಲ ಈಶ್ವರಪ್ಪ ಅವರಿಗಿದೆ. ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಗೆಲ್ಲಬೇಕು ಎಂದರು.

ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಬಂಡಾಯ ಸ್ಪರ್ಧೆ ಖಚಿತ ಎಂದ ಕೆಎಸ್ ಈಶ್ವರಪ್ಪ

ಬಿ.ಎಸ್​.ಯಡಿಯೂರಪ್ಪ ವಿರುದ್ಧ K.S​.ಈಶ್ವರಪ್ಪ ವಾಗ್ದಾಳಿ

ಧರ್ಮಕ್ಕೆ ಹೋರಾಡುವವರನ್ನ ತುಳಿಯುವ ಕೆಲಸ ಆಗ್ತಿದೆ. ಶಾಸಕ ಬಸನಗೌಡ ​ಯತ್ನಾಳ್, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ, ಈಶ್ವರಪ್ಪರನ್ನ ತುಳಿಯುವ ಕೆಲಸ ನಡೆಯುತ್ತಿದೆ. ನಮ್ಮನ್ನು ತುಳಿದರೆ ಅವರ ಮಗನ ದಾರಿ ಸಲೀಸಾಗುತ್ತದೆ. ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್​ ಕೊಟ್ಟಿಲ್ಲ. ಯಾಕೆ ಕುರುಬರು ಕಾಣಲಿಲ್ವಾ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಕುರುಬರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಶಿವಮೊಗ್ಗದಲ್ಲಿ ಮಾಜಿಸಚಿವ ಕೆ.ಎಸ್.ಈಶ್ವರಪ್ಪ ಬಿ.ಎಸ್​.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪ ಮನವೊಲಿಕೆಗೆ ಪ್ರಯತ್ನ

ನಾಳೆ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ‌ಈಶ್ವರಪ್ಪ ಅವರ ಸಂಧಾನಕ್ಕೆ ಮೂವರು ನಾಯಕರು ಆಗಮಿಸಿದ್ದರು. ಆರಗ ಜ್ಞಾನೇಂದ್ರ, ಎಂಎಲ್​ಸಿ‌ಗಳಾದ ರವಿಕುಮಾರ್, ಡಿ.ಎಸ್.ಅರುಣ್ ಅವರು ಈಶ್ವರಪ್ಪ ಜೊತೆ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದರು. ಆದರೆ ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಯಿಂದ ವಾಪಸ್ ಹೋದ ನಾಯಕರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:04 pm, Sun, 17 March 24