
ಶಿವಮೊಗ್ಗ, (ಜುಲೈ 20): ಸುಮಾರು 450 ಕೋಟಿ ರೂ ವೆಚ್ಚದಲ್ಲಿ 750 ಎಕರೆ ಜಾಗದಲ್ಲಿ ನಿರ್ಮಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಉದ್ಘಾಟನೆಗೊಂಡು ಎರಡು ವರ್ಷಗಳೇ ಕಳೆದಿದೆ. 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಉದ್ಘಾಟಿಸಿದ್ದರು.ಆದರೆ ಉದ್ಘಾಟನೆಗೊಂಡು ಎರಡು ವರ್ಷ ಕಳೆದರು ಸಹ ನೈಟ್ ಲ್ಯಾಡಿಂಗ್ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಹೌದು.. ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ಕರ್ನಾಟಕದ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಲ್ಲಿಯ ವರೆಗೆ ನೈಟ್ ಲ್ಯಾಡಿಂಗ್ ವ್ಯವಸ್ಥೆ ಮಾಡಿಲ್ಲ.
ರಾತ್ರಿ ಲ್ಯಾಂಡಿಂಗ್ ಗೆ ಬೇಕಾದ DVOR (Doppler VHF omni Directional Range)ಸಾಧನ ಸಹ ಬಂದಾಗಿದೆ. ಆದರೆ ಅಳವಡಿಕೆಗೆ ಹಣ ಬಿಡುಗಡೆ ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಈ ಸಂಬಂಧ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಪ್ರತಿಕ್ರಿಯಿಸಿ, ನೈಟ್ ಲ್ಯಾಡಿಂಗ್ ಗೆ ಬೇಕಾದ ಉಪಕರಣ ಚೈನೈನಿಂದ ತರಿಸಿದ್ದೇನೆ. ಆದ್ರೆ, ಅದನ್ನು ಅಳವಡಿಸಲು ಒಂದು ಕೋಟಿ ಬೇಕಾಗುತ್ತೆ. ಅದನ್ನ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಉಸ್ತುವಾರಿಯಲ್ಲಿರುವ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ನೈಟ್ ಲ್ಯಾಡಿಂಗ್ ಇಲ್ಲದೇ ಸಾಕಷ್ಟು ಸಮಸ್ಯೆಯನ್ನ ಪ್ರಯಾಣಿಕರು ಅನುಭವಿಸುತ್ತಿದ್ದಾರೆ. ವಿಸಿಬಲಿಟಿ ಸಮಸ್ಯೆಯಿಂದ ವಿಮಾನಗಳು ಕೆಲವೊಮ್ಮೆ ಲ್ಯಾಡಿಂಗ್ ಆಗದೆ ಆಗಸದಲ್ಲೇ ಕನಿಷ್ಟ ನಾಲ್ಕೈದು ರೌಂಡ್ ಸುತ್ತಿ, ನಂತರ ಕೆಳಗಿಳಿಯುತ್ತಿರುವ ಘಟನೆಗಳು ನಡೆದ ಉದಾಹರಣೆಗಳು ಇವೆ. ಇದರ ಜೊತೆಗೆ ವಿಸಿಬಲಿಟಿ ಸಮಸ್ಯೆಯಿಂದ ಹಲವು ಬಾರಿ ವಿಮಾನ ಬೆಂಗಳೂರಿಗೆ ವಾಪಸ್ ಹೋಗಿರುವುದು ಉಂಟು.
ಕೆಲವೊಮ್ಮೆ ಬೇರೆ ಏರ್ಪೋರ್ಟ್ ಗೂ ಹೋಗಿ ಲ್ಯಾಡಿಂಗ್ ಆಗಿರುವ ಘಟನೆಗಳು ನಡೆದಿದೆ. DVOR ಸಾಧನ ಅಳವಡಿಕೆ ಮಾಡಿದರೇ ಯಾವಾಗ ಬೇಕಾದರೂ ವಿಮಾನ ಲ್ಯಾಡಿಂಗ್ ಮಾಡಬಹುದಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ನಿರ್ಲಕ್ಷ್ಯ ವಹಿಸದೇ ಟೆಂಡರ್ ಕರೆದು ನೈಟ್ ಲ್ಯಾಡಿಂಗ್ ಉಪಕರಣ ಅಳವಡಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಪ್ರಯಾಣಿಕರು ಹಾಗೂ ಕೈಗಾರಿಕೋದ್ಯಮಿಗಳು.
ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವೆ ತಿಕ್ಕಾಟ ಮಲೆನಾಡಿನಲ್ಲಿ ಮುಂದುವರೆದಿದೆ. ಈಗಾಗಲೇ ಸಿಗಂದೂರು ಸೇತುವೆ ವಿಚಾರದಲ್ಲಿ ಎರಡು ರಾಜ್ಯ ಹಾಗೂ ಕೇಂದ್ರ ನಡುವಿನ ಮುಸುಕಿನ ಗುದ್ದಾಟ ನಡೆದಿದೆ. ಈ ನಡುವೆ ಈಗ ಏರ್ ಪೋರ್ಟ್ ನೈಟ್ ಲ್ಯಾಂಡಿಂಗ್ ಸಮಸ್ಯೆ ಮುನ್ನಲೆಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ