
ಶಿವಮೊಗ್ಗ, ಸೆಪ್ಟೆಂಬರ್ 11: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ನಲ್ಲಿ ಓಮ್ನಿ ಹಾಗೂಬೈಕ್ ಮುಖಾಮುಖಿ ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದುರ್ಮರಣ ಹೊಂದಿದೆ. ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ (20) ಮತ್ತು ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ್ರ (25) ಮೃತ ದುರ್ದೈವಿಗಳು. ಆಗಸ್ಟ್ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥವಾಗಿತ್ತು. ಮಳೆಯ ಕಾರಣಕ್ಕೆ ಮದುವೆಯನ್ನು ಮುಂದೂಡಿದ್ದ 2 ಕುಟುಂಬಸ್ಥರು, ಡಿಸೆಂಬರ್ನಲ್ಲಿ ಇಬ್ಬರ ಮದುವೆಗೆ ದಿನಾಂಕ ನಿಗದಿ ಮಾಡಿದ್ದರು. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸೆಮಣೆ ಏರಬೇಕಿದ್ದ ಯುವತಿ ಅಪಘಾತದಲ್ಲಿ ಸಾವು
ಇನ್ನೇನು 15 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಕವಿತಾ (26) ಶಿವಮೊಗ್ಗಹೊರವಲಯದ ದುಮ್ಮಳ್ಳಿ ಕ್ರಾಸ್ ಸಕ್ಕರೆ ಫ್ಯಾಕ್ಟರಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸೆಪ್ಟೆಂಬರ್ 8 ರಂದು ಸಂಭವಿಸಿತ್ತು. ಅದರ ಕಹಿ ನೆನಪು ಮಾಸುವ ಮುನ್ನವೇ ಜೋಡಿಯೊಂದು ಇದೀಗ ರಸ್ತೆ ಅಪಘಾತಕ್ಕೆ ಬಲಿಯಾಗಿದೆ.
ಇದನ್ನೂ ಓದಿ: 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ದುರಂತ ಸಾವು, ಫೋಟೋ ಶೂಟ್ಗೆ ಹೋಗಬೇಕಿದ್ದವಳು ಮಸಣಕ್ಕೆ
ಮದುವೆ ಇರುವ ಕಾರಣ ಕಚೇರಿಯಲ್ಲಿ ಸಹೋದ್ಯೋಗಿಗಳಿಗೆ ‘ಕೆಲಸದ ಕೊನೆಯ ದಿನ’ ಎಂದು ಹೇಳಿ ಹೊರಟಿದ್ದ ಯುವತಿಯ ಬದುಕೇ ಅಪಘಾತದಿಂದ ಕೊನೆಯಾಗುವಂತಾಗಿತ್ತು. ಸಹೋದರನೊಂದಿಗೆ ಯುವತಿ ಬೈಕ್ನಲ್ಲಿ ಹೋಗುತ್ತಿದ್ದಾಗ ಇನ್ನೊಂದು ಬೈಕ್ನಲ್ಲಿ ಮಿತಿಮೀರಿದ ಲಗೇಜ್ ತುಂಬಿಕೊಂಡ ವ್ಯಕ್ತಿ ಇವರು ಹೋಗುತ್ತಿದ್ದ ಬೈಕ್ಗೆ ತಾಗಿಸಿದ್ದ. ಇದರಿಂದ ಬೈಕ್ ಪಲ್ಟಿಯಾಗಿ ಯುವತಿಯ ಸಹೋದರ ಫುಟ್ಪಾತ್ ಮೇಲೆ ಬಿದ್ದರೆ, ಆಕೆ ರಸ್ತೆಗೆ ಬಿದ್ದಿದ್ದಳು. ಈ ವೇಳೆ, ಹಿಂದೆ ಇದ್ದ ಸಿಟಿ ಬಸ್ ಆಕೆಯ ಮೇಲೆ ಹರಿದಿತ್ತು. ಪರಿಣಾಮ ಕವಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಳು.