ಪ್ರಾಸಿಕ್ಯೂಷನ್​: ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರಿಗೊಂದು ಸಿದ್ದರಾಮಯ್ಯ ಕಿವಿಮಾತು

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಇಡೀ ಪಕ್ಷ ಷಡ್ಯಂತ್ರಕ್ಕೆ ಸವಾಲು ಎಂದು ಬೀದಿಗಿಳಿದು ತೊಡೆತಟ್ಟಿದೆ. ಇಂದು ರಾಜ್ಯಾದ್ಯಂತ ಮಂತ್ರಿ ಹಾದಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಬೆಂಕಿ ಹಚ್ಚಿ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಅನಾಹುತಗಳು ಸಂಭವಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಮಹತ್ವದ ಕಿವಿಮಾತು ಹೇಳಿದ್ದಾರೆ.

ಪ್ರಾಸಿಕ್ಯೂಷನ್​: ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರಿಗೊಂದು ಸಿದ್ದರಾಮಯ್ಯ ಕಿವಿಮಾತು
ಸಿದ್ದರಾಮಯ್ಯ

Updated on: Aug 19, 2024 | 6:40 PM

ಬೆಂಗಳೂರು, (ಆಗಸ್ಟ್​ 19): ಮುಡಾ ಕೇಸ್​ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರೋದನ್ನ ಖಂಡಿಸಿ ನಾಡಿನಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು (ಆಗಸ್ಟ್ 19) ಕಾಂಗ್ರೆಸ್ ನಾಯಕರು, ಕಾರ್ಯಕರ್ಯರು ಬೀದಿಗಳಿದು ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇನ್ನು ಸಿದ್ದರಾಮಯ್ಯ ಪರ ಮಾತನಾಡುವಾಗ ಓರ್ವ ಕಾರ್ಯಕರ್ತ ಹೃದಯಾಘಾತದಿಂದ ಮೃತಪಟ್ಟಿದ್ದರೆ, ಮತ್ತೋರ್ವ ಕಾರ್ಯಕರ್ತನಿಗೆ ಬೆಂಕಿ ತಗಲು ಗಾಯಗೊಂಡಿದ್ದಾನೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ತಮ್ಮ ಅಭಿಮಾನಿಗಳಿಗಳಿಗೆ, ಕಾರ್ಯಕರ್ತರಿಗೆ ದಯವಿಟ್ಟು ಎಚ್ಚರಿಕೆಯಿಂದಿರಿ ಎಂದು ಕಿವಿ ಮಾತು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿರೋಧಿಸಿ ಬೆಂಗಳೂರಿನ ಪ್ರೆಸ್ ಕ್ಲಬ್​​ನಲ್ಲಿ ಸುದ್ದಿಗೋಷ್ಠಿ ನಡೆಯುತ್ತಿರುವ ವೇಳೆ ಹೃದಯಾಘಾತದಿಂದ ಕಾಂಗ್ರೆಸ್​​ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತಕ್ಕೆ ಬಲಿಯಾಗಿದ್ದು, ರವಿಚಂದ್ರನ್ ಸಾವಿಗೆ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಾಸಿಕ್ಯೂಷನ್ ವಿರೋಧಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್​ ಕಾರ್ಯಕರ್ತ ಹೃದಯಾಘಾತದಿಂದ ಸಾವು


ಬಾಗಲಕೋಟೆಯಲ್ಲಿ ಪ್ರತಿಭಟನೆ ವೇಳೆ ಟೈರ್​ಗೆ ಬೆಂಕಿ ಹಚ್ಚುವ ವೇಳೆ ಕಾಂಗ್ರೆಸ್​ ಕಾರ್ಯಕರ್ತನಿಗೆ ಗಾಯವಾಗಿದೆ. ದ್ಯಾಮಪ್ಪ ಎಂಬ ನನ್ನ ಅಭಿಮಾನಿಯೊಬ್ಬರು ಬೆಂಕಿ ತಗುಲಿ ಗಾಯಗೊಂಡಿರುವುದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ನಡೆಸುವ ವೇಳೆ ದ್ಯಾಮಪ್ಪ ಎಂಬ ನನ್ನ ಅಭಿಮಾನಿಯೊಬ್ಬರು ಗಾಯಗೊಂಡ ವಿಚಾರ ಈಗಷ್ಟೆ ತಿಳಿಯಿತು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ್ತು ನಮ್ಮ ಪಕ್ಷದ ಪರವಾಗಿದೆ. ಇಂದು ಹೋರಾಟ ನಡೆಸುತ್ತಿರುವ ನನ್ನೆಲ್ಲ ಆತ್ಮೀಯ ಬಂಧುಗಳು ಪ್ರತಿಭಟನೆಯ ವೇಳೆ ದಯವಿಟ್ಟು ಎಚ್ಚರಿಕೆಯಿಂದಿರಿ. ನಿಮ್ಮ ಕಾಳಜಿ, ಆಕ್ರೋಶವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಆದರೆ ನನಗೆ ನಿಮ್ಮೆಲ್ಲರ ಆರೋಗ್ಯ, ಜೀವವೂ ಮುಖ್ಯ. ನಿಮ್ಮ ಪ್ರೀತಿಗೆ ನಾನು ಸದಾ ಋಣಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಎಲ್ಲಾ ಅವಘಡದಿಂದ ಸಿದ್ದರಾಮಯ್ಯ ಅವರು ತಮ್ಮ ಅಭಿಮಾನಿ ಹಾಗೂ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us