ಬೀದಿ ನಾಯಿಗಳ ಹಾವಳಿ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಛೀಮಾರಿ

ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಬೀದಿ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಿರೋದನ್ನು ಮನಗಂಡ ಸುಪ್ರೀಂಕೋರ್ಟ್​ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಿತ್ತು. ಆದರೆ ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯ ಹೊರತುಪಡಿಸಿ ಉಳಿದವರು ಈ ಬಗ್ಗೆ ಮಾಹಿತಿ ನೀಡದ ಕಾರಣ ಕೋರ್ಟ್​ ಗರಂ ಆಗಿದ್ದು, ಈ ಬಗ್ಗೆ ಖಡಕ್​ ಸೂಚನೆ ರವಾನಿಸಿದೆ.

ಬೀದಿ ನಾಯಿಗಳ ಹಾವಳಿ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಛೀಮಾರಿ
ಸುಪ್ರೀಂಕೋರ್ಟ್
Updated By: ಪ್ರಸನ್ನ ಹೆಗಡೆ

Updated on: Oct 27, 2025 | 2:23 PM

ದೆಹಲಿ, ಅಕ್ಟೋಬರ್​ 27: ಬೀದಿ ನಾಯಿಗಳ ಹಾವಳಿ ವಿಚಾರವಾಗಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂಕೋರ್ಟ್ (Supreme Court) ಛೀಮಾರಿ ಹಾಕಿದೆ. ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯ ಹೊರತುಪಡಿಸಿ ಉಳಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅನುಸರಣಾ ವರದಿಗಳನ್ನು ಸಲ್ಲಿಸಲು ವಿಫಲರಾದ ಕಾರಣ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಅಲ್ಲದೆ, ನವೆಂಬರ್ 3ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಅಧಿಕಾರಿಗಳು ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ​ಎಚ್ಚರಿಕೆಯನ್ನು ಕೋರ್ಟ್ ನೀಡಿದೆ.

ಸುಪ್ರೀಂಕೋರ್ಟ್​ ತೀವ್ರ ಅಸಮಾಧಾನ

2023ರ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅನುಷ್ಠಾನದ ಕುರಿತು ಅಫಿಡವಿಟ್ ಸಲ್ಲಿಸದ ರಾಜ್ಯಗಳ ಬಗ್ಗೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್​​ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಸಭಾಂಗಣದಲ್ಲಿ ಕಲಾಪ ನಡೆಸೋದಾಗಿಯೂ ಪೀಠ ತಿಳಿಸಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಬೀದಿ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಿರೋದನ್ನು ಮನಗಂಡ ಸುಪ್ರೀಂಕೋರ್ಟ್​ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಲಾಗಿತ್ತು. ಆದರೆ ಮೂರು ರಾಜ್ಯಗಳನ್ನು ಹೊರತುಪಡಿಸಿ ಉಳಿದವರು ಈ ಬಗ್ಗೆ ಮಾಹಿತಿ ನೀಡದ ಕಾರಣ ಕೋರ್ಟ್​ ಗರಂ ಆಗಿದ್ದು, ಈ ಬಗ್ಗೆ ಖಡಕ್​ ಸೂಚನೆ ರವಾನಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್

ಕರ್ನಾಟಕದಲ್ಲಿ 2 ಲಕ್ಷದ 81 ಸಾವಿರ ನಾಯಿ ಕಡಿತ ಕೇಸ್​

2025ರಲ್ಲಿ ಜನವರಿಯಿಂದ ಜುಲೈ​ ತನಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 2 ಲಕ್ಷದ 81 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ. 19 ಜನ ರೇಬಿಸ್​​ನಿಂದ ಮೃತಪಟ್ಟಿದ್ದಾರೆ. ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಮಾತ್ರವಲ್ಲದೆ ಉದ್ಯಮಿಗಳ ಮೇಲೂ ಬೀದಿ ನಾಯಿಗಳು ದಾಳಿ ಮಾಡಿರುವ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಇತ್ತೀಚೆಗೆ ಬ್ರಿಟನ್ ಮೂಲದ ಉದ್ಯಮಿ, ಗೇಮ್ ಡಿಸೈನರ್​ ಆಗಿರುವ ಒಲಿವರ್​​ ಜಾನ್ ಎಂಬವರ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿದ್ದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸೆಪ್ಟೆಂಬರ್ 21ರಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ಮುಂಭಾಗದ ರಸ್ತೆಯಲ್ಲಿ ಜಾನ್ ಹಾಗೂ ಪತ್ನಿ ಜಾಗಿಂಗ್ ಮಾಡುತ್ತಿದ್ದ ವೇಳೆ ಬೀದಿ ನಾಯಿಗಳು ಅಟ್ಟಾಡಿಸಿ ದಾಳಿ ಮಾಡಿದ್ದವು. ಬಳಿಕ ಸ್ಥಳೀಯರು ಜಾನ್​ರನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.