ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

Tumakuru News: ತುಮಕೂರು ನಗರದಲ್ಲಿ ಕಳೆದ ಎಂಟು ದಿನಗಳಿಂದ ಇಂದಿರಾ ಕ್ಯಾಂಟೀನ್‌ಗಳು ಸಂಪೂರ್ಣ ಬಂದ್ ಆಗಿದ್ದು, ಕೈಗೆಟುಕುವ ದರದಲ್ಲಿ ಊಟ ಸವಿಯುತ್ತಿದ್ದ ನೂರಾರು ಬಡವರು ಹಾಗೂ ಶ್ರಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತದಿಂದ ಬಿಲ್ ಬಾಕಿ ಇರೋದೇ ಕ್ಯಾಂಟೀನ್​​ಗಳು ಕ್ಲೋಸ್​​ ಆಗಲು ಕಾರಣ ಎನ್ನಲಾಗ್ತಿದೆಯಾದರೂ, ಅಧಿಕಾರಿಗಳು ಮಾತ್ರ ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿರುವ ಆರೋಪ ಮಾಡಿದ್ದಾರೆ.

ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!
ಬಾಗಿಲು ಬಂದ್​​ ಆಗಿರುವ ಇಂದಿರಾ ಕ್ಯಾಂಟೀನ್​​
Image Credit source: Tv9 Kannada
Edited By:

Updated on: Jun 23, 2026 | 6:02 PM

ತುಮಕೂರು, ಜೂನ್​​ 23: ಬಡವರ ಹಸಿವು ನೀಗಿಸಲೆಂದೇ ಆರಂಭಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್​​ ಯೋಜನೆ ಹಳ್ಳ ಹಿಡಿದೆಯಾ ಎಂಬ ಅನುಮಾನವೀಗ ಸಾರ್ವಜನಿಕರನ್ನು ಕಾಡತೊಡಗಿದೆ. ಇದಕ್ಕೆ ಕಾರಣವಾಗಿರೋದು ಇಂದಿರಾ ಕ್ಯಾಂಟೀನ್​​ಗಳ ನಿರ್ವಹಣೆ ಸರಿಯಾಗಿ ಇಲ್ಲದಿರೋದು. ಒಂದೆರಡಲ್ಲ ಬರೋಬ್ಬರಿ ಎಂಟು ದಿನಗಳಿಂದ ತುಮಕೂರು ನಗರದಲ್ಲಿರುವ 6 ಇಂದಿರಾ ಕ್ಯಾಂಟೀನ್​​ಗಳು ಕ್ಲೋಸ್​​ ಆಗಿದ್ದು, ಇವುಗಳನ್ನೇ ನಂಬಿಕೊಂಡಿದ್ದ ನೂರಾರು ಮಂದಿಯೀಗ ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಡುಗೆ ಕಾಂಟ್ರಾಕ್ಟ್ ವಹಿಸಿಕೊಂಡವರಿಗೆ ಜಿಲ್ಲಾಡಳಿತ ಹಣ ಪಾವತಿಸದಿರೋದೇ ಕ್ಯಾಂಟೀನ್​​ಗಳು ಬಾಗಿಲು ಮುಚ್ಚಲು ಕಾರಣ ಎನ್ನಲಾಗಿದೆ.

ಅಧಿಕಾರಿಗಳು ಹೇಳೋದೇನು?

ಹೌದು, ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ತಿಂಡಿ ಮತ್ತು ಊಟ ನೀಡುವ ಆಶಯದೊಂದಿಗೆ ಆರಂಭವಾದ ಇಂದಿರಾ ಕ್ಯಾಂಟೀನ್​​ಗಳಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಅಡುಗೆ ಗುತ್ತಿಗೆ ಪಡೆದವರಿಗೆ ಜಿಲ್ಲಾಡಳಿತ ಹಣ ಪಾವತಿಸದ ಕಾರಣ ಕೆಲಸಗಾರರಿಗೂ ಕಳೆದ ಒಂದು ವರ್ಷದಿಂದ ಸಂಬಳ ಬಾಕಿಯಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಅವರೂ ಕೆಲಸ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನು ಕೇಳಿದರೆ ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದರು. ಅದಕ್ಕೆ ನೋಟಿಸ್​ ಕೊಟ್ಟಿದ್ದೇವೆ. ಆದರೆ ಅವರು ಉತ್ತರ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್; ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ

ಆದರೆ ಮಾಹಿತಿ ಪ್ರಕಾರ ಗುತ್ತಿಗೆದಾರರು ಕ್ಯಾಂಟೀನ್​​ನ ದಿಢೀರ್ ಆಗಿಯೇನು ಮುಚ್ಚಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಹಣಕ್ಕಾಗಿ ಮನವಿ ಮಾಡಿದ್ದಾರೆ. ಆರಂಭದಲ್ಲಿ ರಾತ್ರಿ ಊಟ ಬಂದ್ ಮಾಡಿದ್ದು, ತದನಂತರ ಬೆಳಗ್ಗಿನ ತಿಂಡಿ ಬಂದ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದ ಕಾರಣ ಈಗ ಸಂಪೂರ್ಣ ಕ್ಯಾಂಟೀನ್​​ ಬಂದ್​​ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಬಿಲ್​​ ಎಷ್ಟು ಬಾಕಿಯಿದೆ? ಎಷ್ಟು ತಿಂಗಳ ಹಣ ಬರಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಗುತ್ತಿಗೆದಾರರಿಗೆ ಜಿಲ್ಲಾಡಳಿತ ಬಿಲ್​​ ಪಾವತಿಸಿಲ್ಲ ಎಂಬುದು ಸತ್ಯವೋ? ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬ ಆರೋಪ ನಿಜವೋ? ಗೊತ್ತಿಲ್ಲ. ಆದರೆ ಇಂದಿರಾ ಕ್ಯಾಂಟೀನ್​​ಗಳು ಬಂದ್​​ ಆಗಿರುವುದರಿಂದ ಬಡವರಂತೂ ಸಂಕಷ್ಟಕ್ಕೆ ಸಿಲುಕಿರುವುದು ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:57 pm, Tue, 23 June 26

Follow Us