ತುಮಕೂರು: ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದರ್ಪ; 10ಕ್ಕೂ ಹೆಚ್ಚು ರೈತರು ಆಸ್ಪತ್ರೆಗೆ ದಾಖಲು

|

Updated on: Apr 01, 2023 | 1:31 PM

ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ವಿರೋಧಿಸಿದ್ದಕ್ಕೆ ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ನಾಲ್ವರು ರೈತರಿಗೆ ಗಂಭೀರ ಗಾಯಗಳಾಗಿದ್ದು, ಸಿಬ್ಬಂದಿಗೂ ಗಾಯಗಳಾಗಿವೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ತುಮಕೂರು: ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದರ್ಪ; 10ಕ್ಕೂ ಹೆಚ್ಚು ರೈತರು ಆಸ್ಪತ್ರೆಗೆ ದಾಖಲು
ಸಂತ್ರಸ್ಥ ರೈತರು
Follow us on

ತುಮಕೂರು: ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ವಿರೋಧಿಸಿದ್ದಕ್ಕೆ ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಗಂಗಯ್ಯನಪಾಳ್ಯದಲ್ಲಿರುವ ‘ಬಗರ್ ಹುಕುಂ’ ಭೂಮಿಯನ್ನ ಅಲ್ಲಿನ ರೈತರು ಕಳೆದ 40, 50 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದರು. ಆದರೆ ಏಕಾಏಕಿ ಕಳೆದ ಮೂರು ವರ್ಷಗಳ ಹಿಂದೆ, ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿ ಅರಣ್ಯ ಇಲಾಖೆ ರೈತರಿಂದ ಭೂಮಿಯನ್ನ ವಶಪಡಿಸಿಕೊಂಡಿತ್ತು. ಅಂದಿನಿಂದ ಇಂದಿನವರೆಗೂ ‘ಬಗರ ಹುಕುಂ’ ಭೂಮಿ ಪಡೆಯಲು ರೈತರು ಹೋರಾಟ ಮಾಡುತ್ತಿದ್ದರು.

ರೈತ ಸಂಘಟನೆ ಹಾಗೂ ನೂರಾರು ರೈತರಿಂದ ನಿರಂತರ ಹೋರಾಟ ನಡೆಯುತ್ತಲೇ ಇತ್ತು. ಆದರೆ ನಿನ್ನೆ(ಮಾ.30) ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಟ್ರಂಚ್ ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಜಟಾಪಟಿ ನಡೆದಿದೆ. ಈ ಜಟಾಪಟಿ ತಾರಕಕ್ಕೇರಿ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ 29 ಹೆಚ್ಚು ರೈತರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಗುಬ್ಬಿ ವಲಯ ಅರಣ್ಯ ಅಧಿಕಾರಿ ದುಗ್ಗಪ್ಪ ಈ ಹಿಂದೆಯೂ ಹೀಗೆ ಮಾಡಿದ್ದರಂತೆ. ಇದೀಗ ಮತ್ತೊಮ್ಮೆ ಈ ಘಟನೆ ಮರುಕಳಿಸಿದೆ.

ಇದನ್ನೂ ಓದಿ:Dharwad: ಸಿನಿಮಾ ಶೈಲಿಯಲ್ಲಿ ಹೊಡೆದಾಟ! ಊರ ದೇವರ ಪೂಜೆ ನಾನೇ ಮಾಡುವೆ ಎಂದ ಅರ್ಚಕ, ಬೇಡವೆಂದ ಗ್ರಾಮಸ್ಥರು -ಕಾರಣ ಏನು?

ಇದೇ ವಿಚಾರಕ್ಕೆ ರೈತರು ತಹಶೀಲ್ದಾರ್ ಎಸಿ, ಡಿಸಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ನಡೆಸಿದ್ದರು. ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಒಂದು ಬಾರಿ ರೈತರಿಗೆ ಸರ್ವೆ ಮಾಡಿ ಭೂಮಿ ಕೊಡಿ ಎಂದು ಹೇಳಿದ್ದರು. ಇನ್ನೊಂದು ಸಲ ಇಲ್ಲ ಅದಕ್ಕೆ ಸರ್ಕಾರ ತಡೆಹಿಡಿದಿದೆ ಎಂದು ಉತ್ತರ ಕೊಟ್ಟಿದ್ದರು. ಕೊನೆಗೆ ಜಂಟಿ ಸರ್ವೆ ಮಾಡಿ ನೋಡೋಣಾ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಜಂಟಿ ಸರ್ವೇ ಆದ ಮೇಲೆಯೇ ಅರಣ್ಯ ಇಲಾಖೆ ಸಿಬ್ಬಂದಿ ಟ್ರಂಚ್ ಹೊಡೆಯಲು ಮುಂದಾಗಿದ್ದರಂತೆ. ಈ ವೇಳೆ ಗ್ರಾಮಸ್ಥರೇ ಮೊದಲು ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ತಮ್ಮ ರಕ್ಷಣೆಗಾಗಿ ಸಿಬ್ಬಂದಿ ಹೀಗೆ ಮಾಡಬೇಕಾಗಿ ಬಂತು ಎನ್ನುತ್ತಾರೆ ಡಿಎಫ್ಒ ಅನುಪಮಾ.

ಇನ್ನು ಘಟನೆ ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ರೈತರು ಪ್ರತಿಭಟನೆ ಮಾಡಿದ್ರು. ಈ ಗಲಾಟೆಯಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರಿಗೆ ಗಾಯವಾಗಿದೆ. ಇಬ್ಬರು ಸಿಬ್ಬಂದಿ ಕೂಡ ಹಲ್ಲೆಗೊಳಗಾಗಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದು ಏನೇ ಸಮಸ್ಯೆಗಳಿದ್ದರೂ ಕಾನೂನು ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನ ಬಿಟ್ಟು ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹೀಗೆ ಏಕಾಏಕಿ ಲಾಠಿ ಪ್ರಹಾರ ಮಾಡಿದ್ದು ಯಾವ ನ್ಯಾಯ ಎನ್ನುವುದು ಜನಸಾಮಾನ್ಯರ ಪ್ರಶ್ನೆ.

ವರದಿ: ಮಹೇಶ್ ಟಿವಿ9 ತುಮಕೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ