ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಯುವತಿಯರಿಂದ ಶ್ರೀ ಆದಿ ಶಂಕರಾಚಾರ್ಯರ ನಿಂದನೆ ಆರೋಪ: ವಿಡಿಯೋ ವೈರಲ್​​

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವತಿಯರು ಶಂಕರಾಚಾರ್ಯರನ್ನು ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಆಚಾರ್ಯ ಶಂಕರರ ಅನುಯಾಯಿಗಳು ಹಾಗೂ ನೆಟ್ಟಿಗರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಕಾನೂನು ಹೋರಾಟದ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಯುವತಿಯರಿಂದ ಶ್ರೀ ಆದಿ ಶಂಕರಾಚಾರ್ಯರ ನಿಂದನೆ ಆರೋಪ: ವಿಡಿಯೋ ವೈರಲ್​​
ಶ್ರೀ ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನ ಆರೋಪ
Edited By:

Updated on: Jul 13, 2026 | 8:14 PM

ಮುಖ್ಯಾಂಶಗಳು

  • ಯುವತಿಯರಿಂದ ಶ್ರೀ ಆದಿ ಶಂಕರಾಚಾರ್ಯರ ನಿಂದನೆ ಆರೋಪ
  • ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ಘಟನೆ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​​, ಭಾರಿ ಟೀಕೆ

ಉಡುಪಿ, ಜುಲೈ 13: ಶ್ರೀಕೃಷ್ಣ ಮಠದಲ್ಲಿ ಶ್ರೀ ಆದಿ ಶಂಕರಾಚಾರ್ಯರ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಮಠದ ರಾಜಾಂಗಣದಲ್ಲಿ ನಡೆದಿದ್ದ ಹರಿಕಥೆ ಕಾರ್ಯಕ್ರಮದ ವೇಳೆ ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ ಯುವತಿಯರು ಶಂಕರಾಚಾರ್ಯರನ್ನು ಏಕವಚನದಲ್ಲಿ ಸಂಬೋಧಿಸಿ ಮಾತನಾಡಿದ್ದಾರೆ. ಅಲ್ಲದೆ ಕೆಲವು ಕಟ್ಟು ಕತೆಗಳನ್ನು ಪ್ರಸ್ತಾಪಿಸಿ ಕೀಳು ಮಟ್ಟದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​​

ಯುವತಿಯರು ಶಂಕರಾಚಾರ್ಯರ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಬೆಳಗಾವಿಯಿಂದ ಬಂದಿದ್ದ ತಂಡದ ಧಾರ್ಮಿಕ ಕಾರ್ಯಕ್ರಮ ಇದಾಗಿತ್ತು ಎನ್ನಲಾಗಿದ್ದು, ಇವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಚಾರ್ಯ ಶಂಕರರ ಅನುಯಾಯಿಗಳು ಕಿಡಿ ಕಾರಿದ್ದಾರೆ. ತಮ್ಮ ಹೇಳಿಕೆ ಸಂಬಂಧ ಯುವತಿಯರು ಕ್ಷಮೆ ಕೇಳಬೇಕು ಇಲ್ಲವೇ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ

ನೆಟ್ಟಿಗರಿಂದ ಭಾರಿ ಆಕ್ರೋಶ

Udupi Controversy (1)

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಜಗತ್ತೇ ವಂದಿಸುವ ಶಂಕರಾಚಾರ್ಯರರನ್ನು ಹೀಗೆ ತೆಗಳಲು ಇವರ್ಯಾರು ಎಂದು ಒಬ್ಬರು ಪ್ರಶ್ನಿಸಿದ್ದರೆ, ಈ ಯುವತಿಯರು ಮೊದಲು ಶಂಕರರ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳಬೇಕು. ಬಳಿಕವಷ್ಟೇ ಇಂಥಹ ಕಾರ್ಯಕ್ರಮಗಳನ್ನು ನೀಡಬೇಕು ಎಂದು ಮತ್ತೋರ್ವರು ಹೇಳಿದ್ದಾರೆ. ಮಕ್ಕಳಲ್ಲೂ ಇಂತಹ ಭಾವನೆ ತುಂಬುತ್ತಿರೋದು ನಿಜಕ್ಕೂ ದುರ್ದೈವ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ನಾನೂ ಹುಟ್ಟಿನಿಂದ ಮಾಧ್ವನೇ. ಆದರೆ ನಮ್ಮ ಬೆಳೆವಣಿಗೆ ಮದರಸಾ ಶಿಕ್ಷಣಕ್ಕಿಂತ ಉತ್ತಮವಾಗಿದೆ ಎಂದು ನನಗೆ ಅನಿಸುವುದಿಲ್ಲ. ಸಹ ಬ್ರಾಹ್ಮಣರನ್ನೇ ದ್ವೇಷಿಸುವುದೇ? ಈ ಮಕ್ಕಳಲ್ಲೂ ಇಂತಹ ಆಲೋಚನೆಗಳನ್ನು ಬಿತ್ತಿದವರನ್ನೂ ಒಮ್ಮೆ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಆಗ ಅವರು ಇನ್ನೂ ಮಾಧ್ವರಾಗಿಯೇ ಅಥವಾ ಹಿಂದೂಗಳಾಗಿಯೇ ಉಳಿಯಲು ಸಾಧ್ಯವೇ ಎಂಬುದು ಅವರಿಗೆ ಅರ್ಥವಾಗುತ್ತದೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:03 pm, Mon, 13 July 26

Follow Us