ಕಾಂತಾರ ಚಿತ್ರ ಖ್ಯಾತಿಯ ಕೋಲ ಕಟ್ಟುವ ಪಾಣಾರ ಸಮಾಜದವರಿಗೆ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯಿಂದ ಮೋಸ

| Updated By: ಸಾಧು ಶ್ರೀನಾಥ್​

Updated on: Dec 04, 2023 | 5:58 PM

ಕಾಂತಾರ ಚಿತ್ರ ಖ್ಯಾತಿಯ ಕೋಲ ಕಟ್ಟುವ ಪಾಣಾರ ಸಮಾಜದವರಿಗೆ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯಿಂದ ಮೋಸ ನಡೆದಿದೆ ಎಂದು ಆರೋಪಿಸಲಾಗಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಿದಂತೆ ಮೇಲ್ವರ್ಗದ ಆಡಳಿತ ವ್ಯವಸ್ಥೆಯಲ್ಲಿರುವ ವ್ಯಕ್ತಿಯೊಬ್ಬ ಕೆಲವರಿಗೆ ಮೀಸಲಿರಿಸಿದ ಜಾಗದಲ್ಲಿ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ಮೊತ್ತ ವಂಚಿಸಿರುವುದಾಗಿ ತಿಳಿದು ಬಂದಿದೆ.

ಕಾಂತಾರ ಚಿತ್ರ ಖ್ಯಾತಿಯ ಕೋಲ ಕಟ್ಟುವ ಪಾಣಾರ ಸಮಾಜದವರಿಗೆ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯಿಂದ ಮೋಸ
ಕೋಲ ಕಟ್ಟುವ ಪಾಣಾರ ಸಮಾಜದವರಿಗೆ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯಿಂದ ಮೋಸ
Follow us on

ಇದು ಕಾಂತಾರ  (Kantara) ಚಿತ್ರದಲ್ಲಿ ಬರುವ ಕೋಲ ಕಟ್ಟುವ ಪಾಣಾರ ಸಮಾಜದವರಿಗಾಗಿ ಮಾಡಲಾಗಿದ್ದ ಯೋಜನೆ. ಕರಾವಳಿಯ ದೈವಾರಾಧನೆಯ ಭಾಗವಾಗಿರುವ ಕೋಲವನ್ನು ಕಟ್ಟುವ ಸಮುದಾಯದವರಿಗಾಗಿ ಮೀಸಲಿಟ್ಟ ಭೂಮಿ ಇದುವರೆಗೂ ಅವರಿಗೆ ದೊರೆತಿಲ್ಲ. ನಿವೇಶನರಹಿತರ ಹೆಸರಿನಲ್ಲಿ ಸರಕಾರದಿಂದ ಮಂಜೂರಾದ ಜಾಗದ ಅಭಿವೃದ್ಧಿಗಾಗಿ ಸರಕಾರ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಕೂಡ ಇದುವರೆಗೂ ಒಂದು ರೂಪಾಯಿ ಕೂಡ ಸೂಕ್ತ ವಿನಿಯೋಗವಾಗಿಲ್ಲ. ಹೌದು ಇಲ್ಲಿ ಹೇಳುತ್ತಿರುವುದು ಕಾಪು ವಿಧಾನಸಭಾ ಕ್ಷೇತ್ರದ (Kapu constituency) ವ್ಯಾಪ್ತಿಗೆ ಬರುವ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯ ಕರ್ಮಕಾಂಡ (Bommarabettu Gram Panchayat).

2017ರಲ್ಲಿ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಅವರು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾಗ ಬೊಮ್ಮಾರ ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ಪಾಣಾರ ಸಮುದಾಯದವರಿಗಾಗಿ ನಿವೇಶನ ಬೇಕು ಎನ್ನುವ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಸುಮಾರು 5 ಎಕರೆಯಷ್ಟು ಜಾಗವನ್ನು ಬೊಮ್ಮಾರ ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಮಂಜೂರು ಮಾಡಿದ್ದರು. ಆದರೆ ನಂತರ ವರ್ಷಗಳು ಉರುಳಿದ್ದು ಹೊರತುಪಡಿಸಿದರೆ, ಇದುವರೆಗೂ ಯಾವೊಬ್ಬ ಹಿಂದುಳಿದ ಸಮುದಾಯದವರಿಗೂ ಕೂಡ ನಿವೇಶನ ಹಂಚಿಕೆಯಾಗಿಲ್ಲ, ಅಲ್ಲದೆ ಮೀಸಲಿರಿಸಿದ ಜಾಗದ ಅಭಿವೃದ್ಧಿಗಾಗಿ ಸರಕಾರದಿಂದ ಬಂದ ಅನುದಾನವನ್ನ ಕೂಡ ಬಳಸದೆ ಪಂಚಾಯಿತಿ ಮಾಜಿ ಅಧ್ಯಕ್ಷರು ಗುಳುಂ ಮಾಡಿರುವುದು ಸದ್ಯ ಬೆಳಕಿಗೆ ಬಂದಿದೆ.

ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತ ಕೋಲ ಕಟ್ಟುವ ಪಾಣಾರ ಸಮುದಾಯದ ಹಲವು ಕುಟುಂಬಗಳಿವೆ. 2017ರಿಂದ ಇಂದು ಅಥವಾ ನಾಳೆ ತಮಗೆ ನಿವೇಶನದ ಪತ್ರ ಸಿಗಬಹುದು ಅನ್ನುವ ನೀರಿಕ್ಷೆಯಲ್ಲಿ ಪಾಣಾರ ಸಮುದಾಯ ಕಾತುರದಿಂದ ಎದುರು ನೋಡುತಿದೆ. ಆದರೆ ಕಾಂತಾರ ಸಿನಿಮಾದಲ್ಲಿ ತೋರಿಸಿದಂತೆ ಮೇಲ್ವರ್ಗದ ಆಡಳಿತ ವ್ಯವಸ್ಥೆಯಲ್ಲಿರುವ ವ್ಯಕ್ತಿ ಓರ್ವ ಕೆಲವರಿಗೆ ಮೀಸಲಿರಿಸಿದ ಜಾಗದ ಹೆಸರಿನಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತವನ್ನು ವಂಚಿಸಿರುವುದು ತಿಳಿದು ಬಂದಿದೆ.

Also Read: ಬೆಳಗಾವಿ ಅಂಗಡಿ ಮಾಲಕಿಗೆ ಚೀಟಿ ತೋರಿಸಿ ಮರಳು ಮಾಡಿ ಮಾಂಗಲ್ಯ ಸರ ಕದ್ದ ಯುವಕ

ನಿವೇಶನರಹಿತರು ಪದೇ ಪದೇ ಹಕ್ಕು ಪತ್ರಕ್ಕಾಗಿ ಬೇಡಿಕೆ ಏರಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ನ ಕೆಲವು ಸದಸ್ಯರು ಮಾಹಿತಿ ಹಕ್ಕು ಬಳಸಿಕೊಂಡು ಕಡತಗಳನ್ನು ಪಡೆದು ಪರಿಶೀಲಿಸಿದಾಗ ನಿವೇಶನ ರಹಿತರಿಗಾಗಿ ತೆಗೆದಿರಿಸಿದ ಜಾಗದ ಅಭಿವೃದ್ಧಿಗಾಗಿ ಸುಮಾರು 5.90 ಲಕ್ಷ ರೂಪಾಯಿ ಇದುವರೆಗೂ ವ್ಯಯಿಸಿರುವುದು ಪತ್ತೆಯಾಗಿದೆ. ಆದರೆ ಜಾಗ ಮಾತ್ರ ಇಂದಿಗೂ ಕೂಡ ಅದೇ ಹಾಳು ಬಿದ್ದ ಸ್ಥಿತಿಯಲ್ಲಿ ಇರುವುದು ಪಾಣಾರ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆಯಾಗಿ ಸರಕಾರ ರೈತರಿಗೆ ನಿವೇಶನ ಜಾಗ ಮಂಜೂರು ಮಾಡಿದರು ಕೂಡ ಇದುವರೆಗೂ ಯಾವುದೇ ಹಕ್ಕುಪತ್ರ ಹಂಚಿಕೆ ಆಗದೆ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರದಲ್ಲಿ ನಿವೇಶನ ಹಂಚಿಕೆಯಾಗದೆ ಇದ್ದಲ್ಲಿ ಹೋರಾಟಕ್ಕೆ ಇಳಿಯುವುದಾಗಿ ನಿವೇಶನ ರಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ