AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashok: ‘ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅರಿವಾಗಿದೆ’; ಗ್ರಾಮ ವಾಸ್ತವ್ಯದ ನಂತರ ಸಚಿವ ಆರ್ ಅಶೋಕ್ ಹೇಳಿಕೆ

ಸಚಿವ ಆರ್.ಅಶೋಕ್ ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ನಂತರ ಅವರು ಮಾತನಾಡಿ ಅಸ್ಪೃಶ್ಯತೆಯ ಅರಿವು ತಮಗಾಗಿದೆ ಎಂದಿದ್ದಾರೆ. ನಂತರ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದರ ಹಿಂದೆ ಐಸಿಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

R Ashok: ‘ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅರಿವಾಗಿದೆ’; ಗ್ರಾಮ ವಾಸ್ತವ್ಯದ ನಂತರ ಸಚಿವ ಆರ್ ಅಶೋಕ್ ಹೇಳಿಕೆ
ಸಚಿವ ಆರ್.ಅಶೋಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Feb 20, 2022 | 2:47 PM

Share

ಉಡುಪಿ: ಗ್ರಾಮ ವಾಸ್ತವ್ಯದಲ್ಲಿ (Village Stay) ಹೊಸ ಅನುಭವ, ಹೊಸ ವಿಚಾರ ಸಿಕ್ಕಿದೆ. ಅಸ್ಪೃಷ್ಯತೆ ಹೇಗಿರುತ್ತದೆ ಎಂಬ ಅನುಭವ ನನಗೆ ಆಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್ (R Ashok) ನುಡಿದಿದ್ದಾರೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜೂರಿನಲ್ಲಿ ಗ್ರಾಮ ವಾಸ್ತವ್ಯದ ನಂತರ ಅವರು ಮಾತನಾಡಿದರು. ಮುಖ್ಯ ವಾಹಿನಿಗೆ ಬಾರದ ನೂರಾರು ಜನಾಂಗಗಳಿವೆ. ಕಣ್ಣೆದುರು ಸಮಸ್ಯೆ ಇದ್ದರೂ ಕಣ್ಮುಚ್ಚಿಕೊಂಡು ಓಡಾಡುತ್ತಿದ್ದೇವೆ. ಜೀವನದಲ್ಲಿ ನೋಡದೆ ಇರುವ ಸತ್ಯಸಂಗತಿಗಳು ಅರಿವಾಗಿವೆ ಎಂದು ಆರ್​.ಅಶೋಕ್ ಅನುಭವ ಹಂಚಿಕೊಂಡಿದ್ದಾರೆ. ಹಿಂದುಳಿದ ಜಿಲ್ಲೆ ಯಾದಗಿರಿಗೆ ಮುಂದಿನ ಭೇಟಿ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಕುಡುಬಿ ಸಮುದಾಯದ ಪ್ರಗತಿಯ ಕುರಿತು ಮಾತನಾಡಿದ ಸಚಿವರು, ಕುಡುಬಿ ಸಮುದಾಯಕ್ಕೆ 50 ಎಕರೆ ಜಮೀನು ಮೀಸಲಿಡುವುದಾಗಿ ಘೋಷಿಸಿದ್ದಾರೆ. ಜತೆಗೆ ಕೊರಗ ಸಮುದಾಯದ ಯುವಕನಿಗೆ ಗ್ರಾಮ ಸಹಾಯಕ ಹುದ್ದೆಯನ್ನು ನೀಡಲಾಗುವುದು. ಯಾವ ಸಮಾಜವನ್ನು ದೂರ ಇಡಲಾಗಿತ್ತೋ, ಅದೇ ಸಮುದಾಯದ ಯುವಕ ನಾಳೆಯಿಂದ ಗ್ರಾಮದಲ್ಲಿ ಗ್ರಾಮ ಸಹಾಯಕ ಎಂದು ಆರ್.ಅಶೋಕ್ ಹೇಳಿದ್ದಾರೆ.

ಹಿಜಾಬ್ ವಿವಾದದ ಹಿಂದೆ ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ: ಆರ್.ಅಶೋಕ್ ಹೇಳಿಕೆ

‘‘ಹಿಜಾಬ್ ವಿವಾದದ ಹಿಂದೆ ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ’’ ಎಂದು ಆರೋಪಿಸಿರುವ ಅಶೋಕ್, ‘‘ಒಂದು ಸಂಸ್ಥೆಯ ಹಿಜಾಬ್ ವಿಚಾರ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ? ಆರು ವಿದ್ಯಾರ್ಥಿಗಳೇ ಇಷ್ಟೆಲ್ಲಾ ಮಾಡುವುದಕ್ಕೆ ಸಾಧ್ಯವೇ? ಕೆಲವರು ಟಿಸಿ ಕೇಳ್ತಿದ್ದಾರೆ, ಕೆಲವರು ಶಾಲೆಗೆ ಬರಲ್ಲ ಎನ್ನುತ್ತಿದ್ದಾರೆ. ವಿದ್ಯೆ ಮುಖ್ಯ, ಧರ್ಮ ಮುಖ್ಯ ಅಲ್ಲ ಎಂದು ವಿನಂತಿಸುವೆ. ವಿದ್ಯೆ ಇದ್ದರೆ ಧರ್ಮ. ದೇಶ ದೊಡ್ಡದು, ಧರ್ಮ ದೊಡ್ಡದಲ್ಲ ಅರ್ಥ ಮಾಡಿಕೊಳ್ಳಿ’’ ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷದ ನಿಲುವಿನ ಕುರಿತು ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಕಾಂಗ್ರೆಸ್​ಅನ್ನು ನಂಬಿಕೊಂಡು ಹೋದರೆ ದೇವರೇ ಗತಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಡಕು ಬೀದಿಯಲ್ಲಿದೆ. ವಿಧಾನಸಭೆಯಲ್ಲಿ ಹಿಜಾಬ್ ವಿವಾದ ಚರ್ಚೆಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ನ ಬಂಡವಾಳ ಏನೆಂಬುದು ಜನಕ್ಕೆ ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.

‘ಹಿಜಾಬ್ ವಿಚಾರದಲ್ಲಿ ಪೋಷಕರು ಶಾಪ ಹಾಕುತ್ತಿದ್ದಾರೆ’ ಎಂಬ ಯು.ಟಿ.ಖಾದರ್ ಹೇಳಿಕೆಗೆ ತಿರುಗೇಟು ನೀಡಿರುವ ಅಶೋಕ್, ‘‘ಹಿಜಾಬ್ ಧರಿಸುವವರು ಶಾಪ ಹಾಕುತ್ತಿರಬಹುದು. ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲವು ಜನರು. ಇಡೀ ಕರ್ನಾಟಕ ಗುಡ್ಡೆ ಹಾಕಿದರೂ ನೂರು ಜನ ಸಿಗಲ್ಲ. ಹಿಜಾಬ್ ಪರ ಇರುವವರ ವೋಟು ಬೇಡ, ಅನುಕಂಪ ಬೇಡ’’ ಎಂದು ಹೇಳಿದ್ದಾರೆ.

ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಹಿಜಾಬ್, ಕೇಸರಿ ಮುಖ್ಯವಲ್ಲವೆಂದು ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲ್ವಿಗಳು ಹಿಜಾಬ್ ಮುಖ್ಯವಲ್ಲ ಎಂದಿದ್ದಾರೆ. ಆದರೆ ಕೆಲವರು ದೇಶದ ಮಾತು ಕೇಳದೆ ವಿದೇಶದ ಮಾತು ಕೇಳುತ್ತಿದ್ದಾರೆ. 2 ಲಕ್ಷ ಸಂಬಳ ತೆಗೆದುಕೊಂಡು ವಿಧಾನಸಭೆಯಲ್ಲಿ ವಿಪಕ್ಷವರರು ಗೊರಕೆ ಹೊಡೆಯುತ್ತಿದ್ದಾರೆ. ವಿರೋಧ ಪಕ್ಷಕ್ಕೆ ಸರ್ಕಾರ ಕಿವಿ ಹಿಂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಈಶ್ವರಪ್ಪ ವಜಾಗೆ ಪಟ್ಟು ಹಿಡಿದ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಅಶೋಕ್, ಸಚಿವ ಕೆ.ಎಸ್​.ಈಶ್ವರಪ್ಪರನ್ನು ನೇಮಕ ಮಾಡಿದ್ದು ಬಿಜೆಪಿ. ಕಾಂಗ್ರೆಸ್​ ಪಕ್ಷದ ಎಲ್ಲರೂ ಬಿಜೆಪಿಗೆ ಸೇರಿಕೊಂಡುಬಿಡಿ. ಆಮೇಲೆ ನೀವು ಬಿಜೆಪಿಗೆ ಸಲಹೆ ಕೊಡಿ ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ:

ಹಿಜಾಬ್​​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ನಟಿ ಝೈರಾ ವಾಸಿಂ​; ‘ದಂಗಲ್​’ ಬೆಡಗಿಯ ನಿಲುವು ಏನು?

ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಕಳೆದುಕೊಂಡ ವಿದ್ಯಾರ್ಥಿ, ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

Published On - 2:46 pm, Sun, 20 February 22

Follow Us
Web contact
Web contact

TV9 Kannada

Read More