ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ; ನಗರಸಭೆಯಿಂದ ಮಹತ್ವದ ನಿರ್ಧಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 30, 2024 | 2:34 PM

ಉಡುಪಿ ನಗರಸಭೆ ಮತ್ತೆ ಕುಡಿಯುವ ನೀರಿನ ಸರಬರಾಜು ವಿಚಾರದಲ್ಲಿ ಹೊಸ ವ್ಯವಸ್ಥೆಗೆ ಸಿದ್ಧವಾಗಿದೆ. ಹೌದು, ಕಳೆದ ಬಾರಿ ಕುಡಿಯುವ ನೀರಿನ ವಿಚಾರದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದ ನಗರ ನಿವಾಸಿಗಳಿಗೆ ಮತ್ತೆ ನೀರಿನ ತಲೆನೋವು ಪ್ರಾರಂಭವಾಗಿದೆ. ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಮ್​​ನಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ; ನಗರಸಭೆಯಿಂದ ಮಹತ್ವದ ನಿರ್ಧಾರ
ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ
Follow us on

ಉಡುಪಿ, ಏ.30: ಕರಾವಳಿಯ ಜಿಲ್ಲೆ ಉಡುಪಿ(Udupi)ಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ(Water Crisis) ತಲೆದೋರುತ್ತಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿಯೇ ಕುಡಿಯುವ ನೀರಿನ ವಿಚಾರದಲ್ಲಿ ಸಂಕಷ್ಟ ಅನುಭವಿಸಿದ್ದ ಉಡುಪಿಯ ಜಿಲ್ಲೆಯ ನಾಗರಿಕರು, ಈ ಬಾರಿ ಮತ್ತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಉಡುಪಿಯ ನಗರಸಭೆ ಇದ್ದಷ್ಟು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಉಡುಪಿ ನಗರಕ್ಕೆ ನೀರು ಪೂರೈಸುವ ಹಿರಿಯಡ್ಕ ಸಮೀಪದ ಬಜೆ ಡ್ಯಾಮ್​ನಲ್ಲಿ ಈಗಾಗಲೇ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹೀಗಾಗಿ ಇರುವ ಅಲ್ಪ ಸ್ವಲ್ಪ ನೀರನ್ನು ಸಮ ಪ್ರಮಾಣದಲ್ಲಿ ಬಳಸಲು ಆಲೋಚನೆ ಮಾಡಿ, ರೇಷನ್ ಪದ್ಧತಿಯನ್ನು ಮತ್ತೆ ಜಾರಿಗೆ ತರುವ ನಿರ್ಧಾರಕ್ಕೆ ನಗರ ಸಭೆ ಅಣಿಯಾಗುತ್ತಿದೆ.

ಸದ್ಯ ಬಜೆ ಡ್ಯಾಮ್​​ನಲ್ಲಿರುವ ನೀರಿನ ಪ್ರಮಾಣ ಮೇ 15 ರವರೆಗೆ ಮಾತ್ರ ಬಳಕೆಗೆ ಲಭ್ಯವಾಗಲಿದೆ. ಮಾರ್ಚ್ ತಿಂಗಳಿನ ಪ್ರಾರಂಭದಲ್ಲಿ 5.96 ಮೀಟರ್ ನೀರಿನ ಸಂಗ್ರಹವಿದ್ದ ಡ್ಯಾಮ್​ನಲ್ಲಿ ಈಗ 3.61 ಮೀಟರ್ ನೀರಿನ ಮಟ್ಟವಿದೆ. ಹೀಗಾಗಿ ಯಥೇಚ್ಛವಾಗಿ ನೀರನ್ನ ನಗರಸಭೆ ವ್ಯಾಪ್ತಿಯ ನಾಗರಿಕರು ಬಳಸಿದಲ್ಲಿ ಮೇ ತಿಂಗಳಿನ ಅಂತ್ಯದ ಒಳಗೆ ಡ್ಯಾಮ್​ನ ನೀರು ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಹೀಗಾಗಿ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಿಕೊಳ್ಳುವ ಅನಿವಾರ್ಯತೆ ನಗರಸಭೆಗಿದೆ.

ಇದನ್ನೂ ಓದಿ:ನೀರಿನ ಸಮಸ್ಯೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಇಲ್ಲಿದೆ ದರ ವಿವರ

ರೇಷನಿಂಗ್ ಪದ್ಧತಿಯಲ್ಲಿ ನೀರು ಬಿಡುವ ಆಲೋಚನೆ

ಕಳೆದ ಬಾರಿಯಂತೆ ನಗರಸಭೆ ವ್ಯಾಪ್ತಿಯ ಮಲ್ಪೆ, ಮಣಿಪಾಲ, ಉಡುಪಿ ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಎರಡು ದಿನಕ್ಕೊಮ್ಮೆ ರೇಷನಿಂಗ್ ಪದ್ಧತಿಯಲ್ಲಿ ನೀರು ಬಿಡುವ ಆಲೋಚನೆ ಸದ್ಯ ನಗರಸಭೆ ಮಾಡುತ್ತಿದೆ. ಇನ್ನು ನಗರಸಭಾ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಎರಡು ದಿನಗಳ ಬದಲಿಗೆ ಮೂರು ದಿನಗಳಿಗೊಮ್ಮೆಯಾದರೂ ಕುಡಿಯುವ ನೀರನ್ನು ಸರಬರಾಜು ಮಾಡಲು ನಗರಸಭೆ ಪ್ರಯತ್ನಿಸುತ್ತಿದೆ. ಒಟ್ಟಾರೆಯಾಗಿ ಈ ಬಾರಿ ಮಳೆರಾಯ ಕಳೆದ ಬಾರಿಯಂತೆ ಒಂದು ತಿಂಗಳು ಮುಂದೆ ಹೋದರೆ, ಕರಾವಳಿಯ ಬಿಸಿಲಿನ ಬೇಗೆಯ ನಡುವೆ ಕುಡಿಯಲು ನೀರು ಇಲ್ಲದೆ ಸಂಕಷ್ಟ ಪಡುವ ದಿನಗಳು ಎದುರಾಗಲಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ಸಮರ್ಪಕ ಬಳಕೆಯ ಕುರಿತು ಕಾರ್ಯೋನ್ಮುಖರಾಗಬೇಕಾದ ಅಗತ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ