ಲೋಕಾಯುಕ್ತ ಬಲೆಗೆ ಉಡುಪಿ ಅಬಕಾರಿ ಡಿಸಿ: 8 ಕೋಟಿ 69 ಲಕ್ಷ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಉಡುಪಿಯ ಅಬಕಾರಿ ಉಪ ಆಯುಕ್ತ ಶ್ರೀನಿವಾಸ್ ಟಿ. ಎಂ. ಅವರ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು 15 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 8.69 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳು ಪತ್ತೆಯಾಗಿವೆ. 11 ನಿವೇಶನಗಳು, 6 ಮನೆಗಳು, 31 ಎಕರೆ ಕೃಷಿ ಭೂಮಿ ಹಾಗೂ ಚಿನ್ನಾಭರಣ, ನಗದು ಜಪ್ತಿ ಮಾಡಲಾಗಿದೆ. ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಮಾನತು ಆದೇಶದ ಸಾಧ್ಯತೆ ಇದೆ.

ಲೋಕಾಯುಕ್ತ ಬಲೆಗೆ ಉಡುಪಿ ಅಬಕಾರಿ ಡಿಸಿ: 8 ಕೋಟಿ 69 ಲಕ್ಷ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಉಡುಪಿ ಅಬಕಾರಿ ಡಿಸಿ
Edited By:

Updated on: Mar 14, 2026 | 7:05 AM

ಉಡುಪಿ, ಮಾ.14: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು  ಪತ್ತೆ ಮಾಡಿದ್ದಾರೆ.

ಸ್ಥಿರ ಆಸ್ತಿಗಳು ಒಟ್ಟು 6,90,64,716 ರೂ. ಇದರಲ್ಲಿ ವಿವಿಧೆಡೆ 11 ನಿವೇಶನಗಳು ಇವೆ. 6 ಸುಸಜ್ಜಿತ ವಾಸದ ಮನೆಗಳು ಇದೆ. 31 ಎಕರೆ ಕೃಷಿ ಭೂಮಿ ಇದೆ ಎಂದು ಹೇಳಲಾಗಿದೆ. ಚರಾಸ್ತಿಗಳು ಒಟ್ಟು 2,66,90,001 ರೂ. ಇದರಲ್ಲಿ 3,95,941 ಹಣ, 1.47 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 17 ಲಕ್ಷ ರೂ. ಬೆಲೆಬಾಳುವ ಕಾರುಗಳು, 25.75 ಲಕ್ಷ ರೂ. ನಗದು ಠೇವಣಿ, 72.68 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

ಅಧಿಕಾರಿ ಶ್ರೀನಿವಾಸ್ ಅವರು ತಮ್ಮ ಆದಾಯದ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲಕ್ಕೆ ಎರಡು ದಿನಗಳ ಕಾಲ ಈ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀನಿವಾಸ್ ಟಿ. ಎಂ. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 13ರ ಹೊತ್ತಿಗೆ ಅವರ ವಿರುದ್ಧ ಅಧಿಕೃತವಾಗಿ ತನಿಖೆ ಆರಂಭವಾಗಿದೆ.

ಇದನ್ನೂ ಓದಿ: ಬಾಗಲಕೋಟೆ ದಲಿತ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್: ಅನುಮಾನಪಟ್ಟು ಹೊಡೆದು ಕೊಂದ್ರಾ?

ಸಾಮಾನ್ಯವಾಗಿ ಲೋಕಾಯುಕ್ತ ದಾಳಿಯಲ್ಲಿ ಇಷ್ಟು ದೊಡ್ಡ ಮಟ್ಟದ ಅಕ್ರಮ ಆಸ್ತಿ ಪತ್ತೆಯಾದಾಗ, ಸಂಬಂಧಪಟ್ಟ ಇಲಾಖೆಯು (ಅಬಕಾರಿ ಇಲಾಖೆ) ಲೋಕಾಯುಕ್ತ ವರದಿಯನ್ನು ಆಧರಿಸಿ ಅಧಿಕಾರಿಯನ್ನು ಅಮಾನತುಮಾಡುವುದು ವಾಡಿಕೆ. ಶ್ರೀನಿವಾಸ್ ಅವರ ವಿರುದ್ಧದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತರು ಸರ್ಕಾರಕ್ಕೆ ನೀಡುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಮುಂದಿನ ಒಂದೆರಡು ದಿನಗಳಲ್ಲಿ ಅಮಾನತು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ, ದಾಳಿಯ ವೇಳೆ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಹೇಗೆ ಬಂತು ಎಂಬುದಕ್ಕೆ ಶ್ರೀನಿವಾಸ್ ಅವರಿಂದ ಸಮರ್ಥನೆ ಕೇಳಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:03 am, Sat, 14 March 26

Follow Us