ಉತ್ತರಾಖಂಡ ಚಾರಣ: ಕುಂದಾಪುರ ಮೂಲದ ಚಾರಣಿಗ ಸಾವು

ಉತ್ತರಾಖಂಡದ ಸಹಸ್ರ ತಾಲ್ ಶಿಖರಕ್ಕೆ ಚಾರಣಕ್ಕೆ ತೆರಳಿದ್ದ ರಾಜ್ಯದ 22 ಜನರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಬದುಕಿದವರ ರಕ್ಷಣೆ ಮಾಡಲಾಗಿದ್ದು, ಮೃತದೇಹಗಳನ್ನು ತರುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು, ಮೃತಪಟ್ಟವರಲ್ಲಿ ಕುಂದಾಪುರ ಮೂಲದ ಓರ್ವ ವ್ಯಕ್ತಿಯೂ ಇದ್ದಾರೆ.

ಉತ್ತರಾಖಂಡ ಚಾರಣ: ಕುಂದಾಪುರ ಮೂಲದ ಚಾರಣಿಗ ಸಾವು
ಚಾರಣಿಗ ಪದ್ಮನಾಭ ಭಟ್​
Edited By:

Updated on: Jun 07, 2024 | 10:55 AM

ಉಡುಪಿ, ಜೂನ್​ 07: ಉತ್ತರಾಖಂಡದ ಸಹಸ್ತ್ರ ತಾಲ್​ ಶಿಖರಕ್ಕೆ (Uttarakhand Sahasratal) ಚಾರಣಕ್ಕೆ ತೆರಳಿ ಹವಾಮಾನ ವೈಪರಿತ್ಯದಿಂದ ಕುಂದಾಪುರ (Kundapur) ಮೂಲದ ಓರ್ವ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಕುಂದಾಪುರ ತಾಲೂಕಿನ ಕುಂಭಾಶಿ ಮೂಲದ ಪದ್ಮನಾಭ ಭಟ್ ಮೃತಪಟ್ಟವರು. ಚಾರಣಕ್ಕೆ ತೆರಳಿದ್ದ 22 ಜನರ ತಂಡದಲ್ಲಿ ಪದ್ಮನಾಭ ಭಟ್ ಕೂಡ ಇದ್ದರು. ಪದ್ಮನಾಭ ಭಟ್ ಅವರು ಮೂಲತಃ ಕುಂಭಾಶಿಯವರು. ಆದರೆ, ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಕಾಶಿಯ ಸಹಸ್ತ್ರ ತಾಲ್​ಗೆ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ಕೆಳಗೆ ಬರುವಾಗ ಹವಾಮಾನ ವೈಪರಿತ್ಯದಿಂದ ದುರ್ಘಟನೆ ಸಂಭವಿಸಿದೆ.

ದುರ್ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ. ಇನ್ನು, ಅಪಾಯಕ್ಕೆ ಸಿಲುಕಿದ್ದ 13 ಜನರನ್ನು ರಕ್ಷಣೆ ಮಾಡಲಾಗಿದ್ದು, ಇವರು ಗುರುವಾರ ರಾತ್ರಿ 9:30ರ ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿಗೆ ಬಂದರು. ರಕ್ಷಣಾ ಕಾರ್ಯಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಈ ಚಾರಣಿಗರ ಜೊತೆಗೆ ಬಂದಿದ್ದಾರೆ.

ಇದನ್ನೂ ನೋಡಿ: ಸಹಸ್ರತಾಲ್ ಶಿಖರದಲ್ಲಿ 9 ಮಂದಿ ಸಾವಿಗೆ ಕಾರಣವೇನು? ಚಾರಣಿಗರ ತಂಡದ ಅಧ್ಯಕ್ಷರು ಹೇಳಿದ್ದೇನು ನೋಡಿ

ಬುಧುವಾರ ಐದು ಮೃತದೇಹಗಳು ಸಿಕ್ಕಿದ್ದವು. ಗುರುವಾರ ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. 9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದೀಗ, ದೆಹಲಿಯಿಂದ ಎರಡು ಪ್ರತ್ಯೇಕ ಇಂಡಿಗೋ ವಿಮಾನಗಳಲ್ಲಿ 4 ಮೃತದೇಹಗಳು ಬೆಂಗಳೂರಿಗೆ ಬಂದಿವೆ. ಮೃತರನ್ನು ಪದ್ಮನಾಭ್, ಸಿಂಧೂ, ಸುಜಾತಾ, ವಿನಾಯಕ್ ಎಂದು ಗುರುತಿಸಾಲಗಿದೆ. ಈಗಾಗಲೇ ಮೂವರ ಮೃತದೇಹಗಳು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಮತ್ತೆರಡು ಮೃತದೇಹಗಳು ಮಧ್ಯಾಹ್ನ ಬರಲಿವೆ. ಪದ್ಮನಾಭ್ ಅವರ ಮೃತದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೇನ್ಸ್ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಸಚಿವ ಕೃಷ್ಣಭೈರೇಗೌಡ ಮಾತನಾಡಿ, “ಈಗಾಗಲೇ ಮೂವರ ಮೃತದೇಹಗಳು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಉಳಿದ ಮೃತದೇಹಗಳು ಕರೆತರುವ ಕೆಲಸ ಆಗುತ್ತಿದೆ. ಮೃತಪಟ್ಟವರ ಸಂಬಂಧಿಕರಿಗೆ ಅಗತ್ಯ ಸಹಕಾರ ನೀಡಲಾಗುತ್ತೆ. ಮೃತರ ವಿಳಾಸ, ವೈಯಕ್ತಿಕ ವಿಚಾರ ಬಹಿರಂಗಪಡಿಸುವುದಿಲ್ಲ” ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Prajwal Amin

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us