ಯಶವಂತಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು: ಅಶ್ವಿನಿ ವೈಷ್ಣವ್

| Updated By: Rakesh Nayak Manchi

Updated on: Nov 27, 2023 | 9:08 PM

ರೈಲ್ವೇ ನಿಲ್ದಾಣವನ್ನು ಬಳಸಿಕೊಂಡು ಬೆಂಗಳೂರು ನಗರದ ಎರಡೂ ಬದಿಗಳನ್ನು ಜೋಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಬೆಂಗಳೂರು ನಗರ, ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರಕ್ಕೆ ಯಶವಂತಪುರವು ಪ್ರಮುಖ ರೈಲು ನಿಲ್ದಾಣವಾಗಿದೆ ಎಂದರು.

ಯಶವಂತಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು: ಅಶ್ವಿನಿ ವೈಷ್ಣವ್
ಯಶವಂತಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
Follow us on

ಬೆಂಗಳೂರು, ನ.27: ನಗರದ ಯಶವಂತಪುರ ರೈಲು ನಿಲ್ದಾಣವನ್ನು (Yeshwanthpur Railway Station) ಸುಮಾರು 377 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣವನ್ನಾಗಿ ಮರು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸೋಮವಾರ ಹೇಳಿದ್ದಾರೆ. ನಿಲ್ದಾಣದ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ನವೀಕರಿಸಿದ ರೈಲ್ವೆ ನಿಲ್ದಾಣವು ಮೇಲ್ಛಾವಣಿ ಪ್ಲಾಜಾವನ್ನು ಸಹ ಹೊಂದಿದ್ದು, ಇದು ಮಕ್ಕಳ ಆಟದ ಪ್ರದೇಶ ಮತ್ತು ಶಾಪಿಂಗ್ ಪ್ರದೇಶವನ್ನು ಹೊಂದಿರುತ್ತದೆ ಎಂದರು.

ಬೆಂಗಳೂರು ನಗರ, ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರಕ್ಕೆ ಯಶವಂತಪುರವು ಪ್ರಮುಖ ರೈಲು ನಿಲ್ದಾಣವಾಗಿದೆ. ನಗರದ ಎರಡೂ ಬದಿಗಳನ್ನು ರೈಲು ನಿಲ್ದಾಣದ ಮೂಲಕ ಸಂಪರ್ಕಿಸಲಾಗುವುದು. ಜನರು ಆರಾಮವಾಗಿ ರೈಲು ಕಾಯಲು, ಮಕ್ಕಳು ಆಟವಾಡಲು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಛಾವಣಿಯ ಪ್ಲಾಜಾ ಕೂಡ ಇರುತ್ತದೆ ಎಂದರು.

ಪ್ರಧಾನಿ ಮೋದಿಯವರ ದೂರದೃಷ್ಟಿ

ರೈಲ್ವೇ ನಿಲ್ದಾಣವನ್ನು ಬಳಸಿಕೊಂಡು ಬೆಂಗಳೂರಿನ ಎರಡೂ ಬದಿಗಳನ್ನು ಜೋಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು. ಮುಂದಿನ 20-30 ವರ್ಷಗಳಲ್ಲಿ ಯಶವಂತಪುರ ನಿಲ್ದಾಣವು ಇಲ್ಲಿಗೆ ಉಪನಗರ, ಮುಖ್ಯ ರೈಲು ಮತ್ತು ಸಿಟಿ ಮೆಟ್ರೊ ಸೇರುವುದರಿಂದ ಹೆಚ್ಚಿನ ದಟ್ಟಣೆಯನ್ನು ಪೂರೈಸಲಿದೆ ಎಂದರು.

ಇದನ್ನೂ ಓದಿ; ದೇಶದ ಮೊಬೈಲ್ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ: ಟಾಟಾ ಐಫೋನ್ ಘಟಕಕ್ಕೆ ಭೇಟಿ ನೀಡಿದ ಬಳಿಕ ಅಶ್ವಿನಿ ವೈಷ್ಣವ್ ಮಾಹಿತಿ

ಭವಿಷ್ಯದಲ್ಲಿ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು, ನಾವು ಭೂಮಿಯನ್ನು ಲಭ್ಯವಾಗುವಂತೆ ಇರಿಸಿಕೊಳ್ಳಬೇಕು. ಒಂದು ಮೀಟರ್ ಭೂಮಿ ಎಲ್ಲಿಯಾದರೂ ಲಭ್ಯವಿದ್ದರೂ, ಭವಿಷ್ಯದ ಉದ್ದೇಶಗಳಿಗಾಗಿ ಆ ಭೂಮಿಯನ್ನು ಮುಕ್ತವಾಗಿ ಇಡಬೇಕು. ರೈಲ್ವೆ ನಿಲ್ದಾಣಗಳನ್ನು ನವೀಕರಿಸಲು, ಪುನರಾಭಿವೃದ್ಧಿ ಮಾಡಲು ಮತ್ತು ವಿಸ್ತರಣೆ ಮಾಡಲು ಸಾಧ್ಯವಾಗುವಂತೆ ನಿರ್ಮಿಸಲು ಪ್ರಯತ್ನಿಸಬೇಕು ಎಂದರು.

ಯಶವಂತಪುರ ರೈಲು ನಿಲ್ದಾಣ ಪರಿಶೀಲಿಸಿದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ರೈಲು ನಿಲ್ದಾಣದ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಈ ಬಗ್ಗೆ ಅವರು ಟ್ವೀಟ್ ಮೂಲಕ ತಿಳಿಸಿದರು.

ಯಶವಂತಪುರ ನಿಲ್ದಾಣವು ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾಗಿದ್ದು, ಇದನ್ನು ವಿಶ್ವದರ್ಜೆಯ ನಿಲ್ದಾಣವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಗಮನಾರ್ಹ ಪುನರಾಭಿವೃದ್ಧಿಗೆ ಒಳಗಾಗುತ್ತಿದೆ. ನಿಲ್ದಾಣದ ಕಾರ್ಯಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳು ಸುಸೂತ್ರವಾಗಿ ನಡೆಯುತ್ತಿವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Mon, 27 November 23