ರಾಜ್ಯದ 5 ಗ್ಯಾರಂಟಿ ಯೋಜನೆಗಳ ಎಫೆಕ್ಟ್ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ, ಸಿದ್ಧಿ ಬುಡಕಟ್ಟು ಸಮುದಾಯದ ಆಹಾರ ಸವಲತ್ತಿಗೆ ಬ್ರೇಕ್

| Updated By: ಸಾಧು ಶ್ರೀನಾಥ್​

Updated on: Nov 22, 2023 | 9:02 PM

ಈ ಗಿರಿಜನ ಯೋಜನೆಯಡಿ 6000 ಸಿದ್ದಿ ಕುಟುಂಬಗಳಿಗೆ ಪ್ರತೀ ತಿಂಗಳು ತಲಾ 8 ಕೆ.ಜಿ. ಅಕ್ಕಿ, 30 ಕೋಳಿ ಮೊಟ್ಟೆ, 6 ಕೆ.ಜಿ. ವಿವಿಧ ಬೇಳೆ ಕಾಳು, ಒಂದು ಲೀಟರ್‌ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಲೀಟರ್ ತುಪ್ಪ, ಒಂದು ಕೆ.ಜಿ. ಬೆಲ್ಲ, ಒಂದು ಕೆ.ಜಿ. ಸಕ್ಕರೆ, ಮೂರು ಕೆ.ಜಿ ತೊಗರಿ ಬೇಳೆ ಹಾಗೂ ಇತರ ಕಾಳುಗಳು ದೊರೆಯುತ್ತಿದ್ದವು. ಆದರೆ, ಕಳೆದ 6 ತಿಂಗಳಿನಿಂದ ಇದ್ಯಾವುದು ಕೂಡಾ ಸಿದ್ಧಿ ಬುಡಕಟ್ಟು ಸಮುದಾಯದ ಜನರಿಗೆ ದೊರೆಯುತ್ತಿಲ್ಲ.

ರಾಜ್ಯದ 5 ಗ್ಯಾರಂಟಿ ಯೋಜನೆಗಳ ಎಫೆಕ್ಟ್ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ, ಸಿದ್ಧಿ ಬುಡಕಟ್ಟು ಸಮುದಾಯದ ಆಹಾರ ಸವಲತ್ತಿಗೆ ಬ್ರೇಕ್
ಸಿದ್ಧಿ ಬುಡಕಟ್ಟು ಸಮುದಾಯದ ಆಹಾರ ಸವಲತ್ತಿಗೆ ಬ್ರೇಕ್
Follow us on

ರಾಜ್ಯ ಸರಕಾರದ (karnataka state) 5 ಗ್ಯಾರಂಟಿ ಯೋಜನೆಗಳು (5 guarantee schemes) ವಿವಿಧ ಕ್ಷೇತ್ರಗಳನ್ನು ಬಾಧಿಸತೊಡಗಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು (Siddi community) ಸಮುದಾಯದ ಹೊಟ್ಟೆಗೂ ಈ ಗ್ಯಾರಂಟಿ ಯೋಜನೆಗಳು ಹೊಡೆತ ನೀಡಿದ್ದು, ಕಳೆದ 6 ತಿಂಗಳಿಂದ ಸರಕಾರದಿಂದ ದೊರೆಯಬೇಕಾಗಿದ್ದ ಪೌಷ್ಠಿಕ ಆಹಾರ (food) ಸವಲತ್ತಿಗೆ ಬ್ರೇಕ್ ಬಿದ್ದಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಹೌದು, ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳ ಎಫೆಕ್ಟ್ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯಲಾರಂಭಿಸಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ವಿಶೇಷ ಗಿರಿಜನ ಯೋಜನೆಯಡಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿತ್ತು. 2011ರಿಂದ ಈ ಯೋಜನೆ ಪ್ರಾರಂಭಗೊಂಡಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ಆರು ತಿಂಗಳ ಕಾಲ ಅಂದ್ರೆ ಜೂನ್‌ನಿಂದ ಡಿಸೆಂಬರ್‌ವರೆಗೆ ಉಚಿತ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು.

ಈ ಗಿರಿಜನ ಯೋಜನೆಯಡಿ 6000 ಸಿದ್ದಿ ಕುಟುಂಬಗಳಿಗೆ ಪ್ರತೀ ತಿಂಗಳು ತಲಾ 8 ಕೆ.ಜಿ. ಅಕ್ಕಿ, 30 ಕೋಳಿ ಮೊಟ್ಟೆ, 6 ಕೆ.ಜಿ. ವಿವಿಧ ಬೇಳೆ ಕಾಳು, ಒಂದು ಲೀಟರ್‌ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಲೀಟರ್ ತುಪ್ಪ, ಒಂದು ಕೆ.ಜಿ. ಬೆಲ್ಲ, ಒಂದು ಕೆ.ಜಿ. ಸಕ್ಕರೆ, ಮೂರು ಕೆ.ಜಿ ತೊಗರಿ ಬೇಳೆ ಹಾಗೂ ಇತರ ಕಾಳುಗಳು ದೊರೆಯುತ್ತಿದ್ದವು. ಆದರೆ, ಕಳೆದ 6 ತಿಂಗಳಿನಿಂದ ಇದ್ಯಾವುದು ಕೂಡಾ ಸಿದ್ಧಿ ಬುಡಕಟ್ಟು ಸಮುದಾಯದ ಜನರಿಗೆ ದೊರೆಯುತ್ತಿಲ್ಲ.

ಉತ್ತರಕ‌ನ್ನಡ ಜಿಲ್ಲೆಯಲ್ಲಿ ಸಿದ್ಧಿ ಸಮುದಾಯ ಎಸ್‌ಟಿ ಜನಾಂಗದಡಿ ಬರುತ್ತಿದ್ದು, ಇವರಿಗೆ ಪೌಷ್ಠಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ಸರಕಾರದಿಂದ ಈ ಯೋಜನೆ ಪ್ರಾರಂಭ ಮಾಡಲಾಗಿತ್ತು. ಈ ವರ್ಷ ಜೂನ್ ತಿಂಗಳಿಂದ ಈ ಸವಲತ್ತಿಗೆ ಅಡ್ಡಿಯಾಗಿದ್ದು, ಅಧಿಕಾರಿಗಳ ಬಳಿ ಕೇಳಿದ್ರೆ ಟೆಂಡರ್ ಆಗಿಲ್ಲ, ಟೆಂಡರ್ ದುಬಾರಿ ಹೋಗ್ತಿದೆ, ಟೆಂಡರ್‌ಗೆ ಅಷ್ಟು ಫಂಡ್ ಇಲ್ಲ, ಕೆಲವೊಂದು ಸಮಸ್ಯೆಗಳಿವೆ ಅಂತಾ ವಿವಿಧ ಸಬೂಬುಗಳನ್ನು ನೀಡ್ತಿದ್ದಾರೆ.

ಈ ವರ್ಷ ಮಳೆಯಾಗದ ಕಾರಣ ಸಿದ್ಧಿ ಸಮುದಾಯದ ಜನರಿಗೆ ಅಷ್ಟೊಂದು ಕೂಲಿ ಕೆಲಸವೂ ದೊರಕಿಲ್ಲ. ಇದರಿಂದ ಸಮುದಾಯದ ಜನರು ಉಪವಾಸ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೌಷ್ಠಿಕ ಆಹಾರ ದೊರೆಯದ ಬಗ್ಗೆ ಈಗಾಗಲೇ ಶಾಸಕರು, ಸಚಿವರು ಹಾಗೂ ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿದೆ. ಕೂಡಲೇ ಪೌಷ್ಠಿಕ ಆಹಾರ ಸವಲತ್ತನ್ನು ಸರಕಾರ ಒದಗಿಸದಿದ್ದಲ್ಲಿ ಡಿಸೆಂಬರ್ ತಿಂಗಳು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಿದ್ಧಿ ಸಮುದಾಯದ ಮುಖಂಡರು ನೀಡಿದ್ದಾರೆ.

ಒಟ್ಟಿನಲ್ಲಿ ಕಳೆದ 6 ತಿಂಗಳಿನಿಂದ ಸಿದ್ಧಿ ಸಮುದಾಯಕ್ಕೆ ದೊರೆಯಬೇಕಾಗಿದ್ದ ಆಹಾರ ಸವಲತ್ತು ಅವರಿಗೆ ಮರೀಚಿಕೆಯಾಗಿದೆ. ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣದ ಕೊರತೆಯಾಗಿರುವ ಕಾರಣ ಬಡವರ ಹೊಟ್ಟೆ ತುಂಬಿಸುವ ಯೋಜನೆಗಳಿಗೆ ಸರಕಾರ ಕತ್ತರಿ ಹಾಕಲು ಮುಂದಾಗಿದೆಯೇ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಆದ್ರೆ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

ವರದಿ: ಸೂರಜ್ ಉತ್ತೂರೆ, ಟಿವಿ 9, ಉತ್ತರ ಕನ್ನಡ‌