ಗೋಕರ್ಣ ಮಹಾಬಲೇಶ್ವರ ದೇವಾಲಯದ ಅರ್ಚಕರ ಪ್ರಶ್ನೆ: ‘ಬ್ರಾಹ್ಮಣ’ ಹೇಳಿಕೆಗೆ HDK ಸ್ಪಷ್ಟನೆ

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಬ್ರಾಹ್ಮಣ ಸಮಾಜದ ಕುರಿತಾದ ಹೇಳಿಕೆಗೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅರ್ಚಕರು ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ಈ ಬಗ್ಗೆ ಗೋಕರ್ಣದಲ್ಲೇ ನಿಮ್ಮ ಸ್ಪಷ್ಟೀಕರಣ ತಿಳಿಸಿ ಎಂದು ಪ್ರಶ್ನೆ ಮಾಡಿದ್ದಾರೆ.

ಗೋಕರ್ಣ ಮಹಾಬಲೇಶ್ವರ ದೇವಾಲಯದ ಅರ್ಚಕರ ಪ್ರಶ್ನೆ: ಬ್ರಾಹ್ಮಣ ಹೇಳಿಕೆಗೆ HDK ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
Edited By: ವಿವೇಕ ಬಿರಾದಾರ

Updated on: Feb 08, 2023 | 2:57 PM

ಉತ್ತರ ಕನ್ನಡ: ಬ್ರಾಹ್ಮಣ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumaraswamy) ಆಕ್ಷೇಪಾರ್ಹ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ (BJP) ಮತ್ತು ಬ್ರಾಹ್ಮಣ (Brahman) ಸಮಾಜ ಟೀಕೆ ಮಾಡುತ್ತಿದ್ದು, ಕ್ಷಮೆ ಕೇಳುವಂತೆ ಪ್ರತಿಭಟನೆ ಮಾಡುತ್ತಿದೆ. ಇಂದು (ಫೆ.8) ಹೆಚ್​. ಡಿ ಕುಮಾರಸ್ವಾಮಿ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನದ ಅರ್ಚಕರು ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ನಿಮ್ಮ ಕುಟುಂಬದ ಮೇಲೆ ನಮಗೆ ಅಭಿಮಾನವಿದೆ. ಗೋಕರ್ಣದಲ್ಲೇ ನಿಮ್ಮ ಸ್ಪಷ್ಟೀಕರಣ ತಿಳಿಸಿ ಎಂದು ಕುಮಾರಸ್ವಾಮಿವರಿಗೆ ಸ್ಪಷ್ಟನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಹೆಚ್​.ಡಿ.ಕುಮಾರಸ್ವಾಮಿ ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಸಮುದಾಯ ಭವನಕ್ಕೆ ಜಾಗ ಕೊಟ್ಟೆ. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾನು. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು ರಾಮಕೃಷ್ಣ ಹೆಗಡೆ ಅವರನ್ನ ಸಿಎಂ ಮಾಡಿದ್ದು ದೇವೆಗೌಡರು ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ? ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು

ಕುಮಾರಸ್ವಾಮಿ ಇಂದು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಭೇಟಿ ನೀಡಿ ಆತ್ಮಲಿಂಗ ಸ್ಪರ್ಶಿಸಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೂ ಧರ್ಮವನ್ನು ನಾವು ರಕ್ಷಣೆ ಮಾಡುತ್ತೇವೆ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಗೊತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿ ? ಎಂದು ಪ್ರಶ್ನೆ ಮಾಡಿದರು.

ಕಟೀಲು ಅನ್ನುವ ಹೆಸರು ಬದಲು ಪಿಟೀಲು ಅಂತ ಇಟ್ಟುಕೊಳ್ಳಲಿ

ನಳಿನ್ ಕುಮಾರ್​​ ಕಟೀಲುಗೆ ರಾಜಕೀಯ ಬಗ್ಗೆ ಏನು ಗೊತ್ತಿದೆ. ಕಟೀಲು ಅನ್ನುವ ಹೆಸರು ಬದಲು ಪಿಟೀಲು ಅಂತ ಇಟ್ಟುಕೊಳ್ಳಲಿ. ನಮಗೆ ಸಾವರ್ಕರ್ ಸಂಸ್ಕೃತಿ‌‌ ಬೇಡ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಅನ್ನೋದನ್ನು ಜನ ನಿರ್ಧರಿಸುತ್ತಾರೆ. ರಾಜ್ಯದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಕೆಲವರು ಪಕ್ಷ ಬಿಟ್ಟು ಹೋಗುವುದು ಕಾಮನ್

ಚುನಾವಣೆ ವೇಳೆ ಕೆಲವರು ಪಕ್ಷ ಬಿಟ್ಟು ಹೋಗುವುದು ಕಾಮನ್. ಪಕ್ಷ ಬಲವರ್ಧನೆಗೆ ನನ್ನದೇ ರೀತಿಯಲ್ಲಿ ಸಂಘಟಿಸುತ್ತಿದ್ದೇನೆ. ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿ ಮಾಡಲು ಹೋಗಿ ದೇವೇಗೌಡರು ಬಂಗಾರಪ್ಪ ಮನೆಯಿಂದ ಜುಬ್ಬಾ ಹರಿಸಿಕೊಂಡು ಬಂದಿದ್ದರು. ಹೊಡೆಯುವುದು ಎಲ್ಲಿಂದ ಬಂತು? ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Wed, 8 February 23

Web contact

TV9 Kannada

Read More
Follow Us