ಪತ್ನಿಯ ಕೊಂದು ಹೃದಯಾಘಾತದ ಕಥೆ ಕಟ್ಟಿದ ಪತಿ! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಾಕ್ಷಸೀ ಕೃತ್ಯ

Uttara Kannada News: ಪತ್ನಿಯನ್ನು ರಾತ್ರೋರಾತ್ರಿ ಕೊಲೆ ಮಾಡಿ, ಆಕೆಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರನ್ನು ನಂಬಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನ ರಾಕ್ಷಸೀ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಬಳಿ ಘಟನೆ ನಡೆದಿದ್ದು, ಸದ್ಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಬಳಿಕ ಆರೋಪಿ ಗಣಪತಿ ನಾಯ್ಕ ಎಂಬಾತನನ್ನು ಬಂಧಿಸಲಾಗಿದೆ.

ಪತ್ನಿಯ ಕೊಂದು ಹೃದಯಾಘಾತದ ಕಥೆ ಕಟ್ಟಿದ ಪತಿ! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಾಕ್ಷಸೀ ಕೃತ್ಯ
ಗಣಪತಿ ಮಂಜುನಾಥ ನಾಯ್ಕ ಹಾಗೂ ಮಂಗಲಾ
Image Credit source: tv9
Edited By:

Updated on: Aug 29, 2026 | 7:25 AM

ಮುಖ್ಯಾಂಶಗಳು

  • ಪತ್ನಿಯ ಕೊಲೆ ಮಾಡಿ ಹೃದಯಾಘಾತದ ಕಥೆ ಕಟ್ಟಿದ್ದ ಪತಿ
  • ಸಿಸಿಟಿವಿ ಪರಿಶೀಲನೆಯಿಂದ ಬಯಲಾದ ಸತ್ಯ
  • ಮೂರು ವರ್ಷದ ಮಗು ಅನಾಥ

ಕಾರವಾರ, ಆಗಸ್ಟ್ 29: ಪತ್ನಿಗೆ ಹೃದಯಾಘಾತವಾಗಿದೆ ಎಂದು ಕಥೆ ಕಟ್ಟಿದ್ದ ಪತಿಯೊಬ್ಬನ ರಾಕ್ಷಸೀ ಕೃತ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಲಗಿದ್ದ ಪತ್ನಿಯ ಬಾಯಿ-ಮೂಗು ಒತ್ತಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮೂರು ವರ್ಷದ ಮಗು ತನ್ನ ತಾಯಿ-ತಂದೆ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆ.

ಹೃದಯಾಘಾತದ ಕಥೆ ಕಟ್ಟಿದ್ದ ಪತಿ

ಮಂಕಿ ಗ್ರಾಮದ 27 ವರ್ಷದ ಮಂಗಲಾ ಕೊಲೆಯಾದ ಮಹಿಳೆ. ಆಕೆಯ ಪತಿ ಗಣಪತಿ ಮಂಜುನಾಥ ನಾಯ್ಕ ಕೊಲೆ ಆರೋಪ ಎದುರಿಸುತ್ತಿದ್ದಾನೆ. ದಂಪತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೆ, ಗಣಪತಿ ನಾಯ್ಕ ಕುಡಿತದ ಚಟ ಹೊಂದಿದ್ದು, ಕೈಗೆ ಬರುತ್ತಿದ್ದ ಹಣವನ್ನು ಖರ್ಚು ಮಾಡುತ್ತಿದ್ದ ಎನ್ನಲಾಗಿದೆ.

ಮಧ್ಯರಾತ್ರಿ ಪತ್ನಿಯ ಕೊಲೆ

ಆಗಸ್ಟ್ 25ರ ಮಧ್ಯರಾತ್ರಿ ದಂಪತಿ ನಡುವೆ ಗಲಾಟೆ ನಡೆದಿದೆ. ರಾತ್ರಿ 2 ಗಂಟೆಯ ಬಳಿಕ ಕೋಣೆಯಲ್ಲಿ ಮಲಗಿದ್ದ ಮಂಗಲಾಳ ಮೇಲೆ ಗಣಪತಿ ನಾಯ್ಕ ಹಲ್ಲೆ ನಡೆಸಿದ್ದಾನೆ. ಬಾಯಿ-ಮೂಗು ಒತ್ತಿ ಹಿಡಿದು, ಕುತ್ತಿಗೆ ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಮೃತಪಟ್ಟ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಹೊಸ ಕಥೆ ಕಟ್ಟಿದ್ದಾನೆ. ಮನೆಯಲ್ಲಿದ್ದ ತಂದೆ-ತಾಯಿಗೆ ಮಂಗಲಾಳಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾನೆ. ಬಳಿಕ ಆಕೆಯ ಕುಟುಂಬಸ್ಥರಿಗೂ ಕರೆ ಮಾಡಿ ಇದೇ ವಿಚಾರ ತಿಳಿಸಿದ್ದಾನೆ.

ಸಿಸಿಟಿವಿ ದೃಶ್ಯಗಳಿಂದ ಬಯಲಾಯ್ತು ಸತ್ಯ

ತನ್ನದೇ ಆಟೋ ರಿಕ್ಷಾದಲ್ಲಿ ಮಂಗಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಪ್ರಾಣಪಕ್ಷಿ ಹಾರಿ ಹೋಗಿದ್ದರಿಂದ ವಾಪಾಸು ಮನೆಗೆ ಕರೆದುಕೊಂಡು ಬಂದಿರುವುದಾಗಿ ಆರೋಪಿ ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಮಂಗಲಾ ಅವರ ಸಹೋದರಿ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರಂಭದಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಮನೆಯ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಆಟೋವನ್ನು ಹೊರಗೆ ತೆಗೆದುಕೊಂಡು ಹೋಗಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಗಣಪತಿ ನಾಯ್ಕನ ಮೇಲಿನ ಅನುಮಾನ ಮತ್ತಷ್ಟು ಬಲಗೊಂಡಿದೆ.

ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡ ಆರೋಪಿ

ಗಣಪತಿ ನಾಯ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ತಾಯಿ ಕೊಲೆಯಾಗಿದ್ದು, ತಂದೆ ಜೈಲು ಸೇರಿರುವುದರಿಂದ ಏನೂ ಅರಿಯದ ಪುಟ್ಟ ಮಗು ಇದೀಗ ಅಜ್ಜ-ಅಜ್ಜಿಯ ಆರೈಕೆಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us