ಕಾರವಾರ: ಭಾರಿ ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮುಂಗಾರು ಮಳೆಯ ಅಬ್ಬರದ ನಡುವೆ ಸಮುದ್ರದ ಅಲೆಗಳಲ್ಲಿ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ್ದಾರೆ. ಭಾರೀ ಮಳೆಯಿಂದ ಸಮುದ್ರ ಉಕ್ಕಿ ಹರಿಯುತ್ತಿದ್ದರೂ, ಪೊಲೀಸರು ಕ್ಷಣಾರ್ಧದಲ್ಲಿ ಸ್ಪೀಡ್ ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ, ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ತಂದು ಮಾನವೀಯತೆ ಮೆರೆದಿದ್ದಾರೆ.
ಕಾರವಾರ ಜು.17: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಅಲೆಗಳ ಆರ್ಭಟ ತೀವ್ರಗೊಂಡಿದೆ. ಇಂತಹ ಪ್ರಾಣಾಪಾಯದ ಸನ್ನಿವೇಶದಲ್ಲಿ ಕಾರವಾರದ ಪ್ರಸಿದ್ಧ ಟಾಗೋರ್ ಕಡಲತೀರದಲ್ಲಿ (Tagore Beach) ಕಡಲಿಗೆ ಇಳಿದು ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ್ದಾರೆ. ಕಾರವಾರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಮುದ್ರ ತೀವ್ರವಾಗಿ ಉಕ್ಕಿ ಹರಿಯುತ್ತಿದ್ದು, ಅಲೆಗಳ ರಭಸ ಹೆಚ್ಚಾಗಿದೆ. ಈ ವೇಳೆ ಟಾಗೋರ್ ಕಡಲತೀರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಯಾರಿಗೂ ತಿಳಿಯದಂತೆ ಸಮುದ್ರದ ಆಳಕ್ಕೆ ಇಳಿದಿದ್ದಾನೆ. ಅಲೆಗಳ ಅಬ್ಬರಕ್ಕೆ ಸಿಲುಕಿ ಆತ ನೀರಿನಲ್ಲಿ ಮುಳುಗುತ್ತಿರುವುದನ್ನು ತೀರದಲ್ಲಿದ್ದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತಕ್ಷಣವೇ ಗಮನಿಸಿದ್ದಾರೆ. ಸ್ವಲ್ಪ ತಡಮಾಡಿದ್ದರೂ ಯುವಕ ಸಮುದ್ರದ ಪಾಲಾಗುತ್ತಿದ್ದನು. ಆದರೆ, ಪೊಲೀಸರು ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ತಕ್ಷಣವೇ ಸ್ಪೀಡ್ ಬೋಟ್ ಮೂಲಕ ಸಮುದ್ರದ ಮಧ್ಯಕ್ಕೆ ಧಾವಿಸಿದ್ದಾರೆ. ಅಲೆಗಳ ನಡುವೆಯೂ ಚಾಣಾಕ್ಷತನದಿಂದ ಬೋಟ್ ಮುನ್ನಡೆಸಿದ ಪೊಲೀಸ್ ಸಿಬ್ಬಂದಿ, ಮುಳುಗುತ್ತಿದ್ದ ಯುವಕನನ್ನು ಸುರಕ್ಷಿತವಾಗಿ ನೀರಿನಿಂದ ಮೇಲೆತ್ತಿ ಬೋಟ್ ಒಳಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ಸಮುದ್ರದ ಮಧ್ಯದಿಂದ ಸುರಕ್ಷಿತವಾಗಿ ದಡಕ್ಕೆ ತಂದು ಬಿಟ್ಟಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



