ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಕಾರ್ಯ; ತಂದೆ-ತಾಯಿಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿರುವ ಪುತ್ರರು

| Updated By: ganapathi bhat

Updated on: Apr 16, 2021 | 4:36 PM

ತಾಂಡಾದ ಹೊರ ಭಾಗದಲ್ಲಿರುವ ದುರ್ಗಾದೇವಿ ಹಾಗೂ ಇತರೆ ದೇವಸ್ಥಾನಗಳ ಪಕ್ಕದಲ್ಲಿ ರಾಮಸಿಂಗ ಹಾಗೂ ಲಕ್ಷ್ಮೀಬಾಯಿ ಹೆಸರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ದೇವಸ್ಥಾನದಲ್ಲಿ ದಿವಂಗತ ರಾಮಸಿಂಗ ಹಾಗೂ ದಿವಂಗತ ಲಕ್ಷ್ಮೀಬಾಯಿ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಕಾರ್ಯ; ತಂದೆ-ತಾಯಿಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿರುವ ಪುತ್ರರು
ತಂದೆ-ತಾಯಿಗಾಗಿ ದೇವಾಲಯ ಕಟ್ಟಿಸಿದ ಮಕ್ಕಳು
Follow us on

ವಿಜಯಪುರ: ಮಾತೃ ದೇವೋಭವ, ಪಿತೃ ದೇವೋಭವ ಎಂಬ ಮಾತು ನಮ್ಮಲ್ಲಿದೆ. ತಂದೆ – ತಾಯಿಗಳು ದೇವರ ಸಮಾನ ಎಂದು ಹೇಳುವ ಈ ಮಾತು ಎಲ್ಲರಿಗೂ ಅನ್ವಯವಾಗುತ್ತದೆ. ನಮ್ಮನ್ನು ಹೆತ್ತು, ಹೊತ್ತು, ಬೆಳೆಸಿ ವಿದ್ಯಾವಂತರನ್ನಾಗಿ ಮಾಡುವ ತಂದೆ ತಾಯಿಗಳನ್ನು ನಾವೆಷ್ಟು ಪ್ರೀತಿಯಿಂದ, ಅಕ್ಕರೆಯಿಂದ ಕಾಣುತ್ತೇವೆ ಎಂಬುದು ಈಗಿರುವ ಪ್ರಶ್ನೆ. ಸದ್ಯ ಬದಲಾದ ಕಾಲಘಟ್ಟದಲ್ಲಿ ಮೈಕ್ರೋ ಫ್ಯಾಮಿಲಿ ಕಾನ್ಸೆಪ್ಟ್​ನಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ತಂದೆ- ತಾಯಿಯನ್ನು ವೃದ್ಧಾಶ್ರಯಮದಲ್ಲೋ, ಪೇಯಿಂಗ್ ಗೆಸ್ಟ್ ನಲ್ಲೋ ಬಿಟ್ಟು ಇರುವ ಬಹುತೇಕರು ನಮ್ಮ ಮಧ್ಯೆ ಇದ್ದಾರೆ. ಆದರೆ ಇಲ್ಲೊಬ್ಬರು ತಂದೆ- ತಾಯಿ ನೆನಪಿಗಾಗಿ ಮಾಡಿರುವ ಕೆಲಸ ಮಾತ್ರ ವಿಶೇಷವಾದದ್ದು.

ವಿಜಯಪುರ ತಾಲೂಕಿನ ಜಾಲಗೇರಿ ತಾಂಡಾದ ವಾಸಿಗಳಾಗಿದ್ದ ರಾಮಸಿಂಗ ಹಾಗೂ ಲಕ್ಷ್ಮೀಬಾಯಿ ರಾಮಸಿಂಗ ಜಾಧವ್ ಅವರ ಮರಣಾನಂತರ ಅವರ ಮಕ್ಕಳಾದ ಡಾ.ಅಶೋಕಕುಮಾರ, ಗುಲಾಬಚಂದ, ಧರ್ಮೇಂದ್ರ ಹಾಗೂ ಪ್ರಕಾಶ ಎಂಬ ನಾಲ್ವರು ಪುತ್ರರು, ತಮ್ಮ ತಂದೆ -ತಾಯಿಯವರ ನೆನಪು ಸದಾ ಕಾಲ ಚಿರಸ್ಥಾಯಿಯಾಗಿ ಉಳಿಯಬೇಕೆಂದು ಕನಸು ಕಂಡಿದ್ದರು. ನಮಗೆ ಜನ್ಮ ನೀಡಿ, ಶಿಕ್ಷಣ ಕೊಡಿಸಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದ ತಂದೆ -ತಾಯಿಯರನ್ನು ನಿತ್ಯ ಪೂಜಿಸುವಂತಾಗಬೇಕೆಂದು ಹಂಬಲಿಸಿದ್ದರು. ಹೀಗಾಗಿ ಅವರ ಕಾಲಾ ನಂತರ ನಾಲ್ವರೂ ಮಕ್ಕಳು ತಾಂಡಾದ ಗುರು ಹಿರಿಯರ ಒಪ್ಪಿಗೆ ಮೇರೆಗೆ ತಂದೆ ತಾಯಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

ತಾಂಡಾದ ಹೊರ ಭಾಗದಲ್ಲಿರುವ ದುರ್ಗಾದೇವಿ ಹಾಗೂ ಇತರೆ ದೇವಸ್ಥಾನಗಳ ಪಕ್ಕದಲ್ಲಿ ರಾಮಸಿಂಗ ಹಾಗೂ ಲಕ್ಷ್ಮೀಬಾಯಿ ಹೆಸರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ದೇವಸ್ಥಾನದಲ್ಲಿ ದಿವಂಗತ ರಾಮಸಿಂಗ ಹಾಗೂ ದಿವಂಗತ ಲಕ್ಷ್ಮೀಬಾಯಿ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ನಿತ್ಯ ಪೂಜೆ ಮಾಡಲೇಂದೇ ಓರ್ವರನ್ನು ನೇಮಿಸಲಾಗಿದೆ.

ದೇವಾಲಯ ಉದ್ಘಾಟನೆ
ಈ ತಂದೆ -ತಾಯಿ ದೇವಸ್ಥಾನದಲ್ಲಿ ಸಕಲ ಪೂಜಾ ವಿಧಿ ವಿಧಾನಗಳನ್ನು, ಹೋಮ ಹವನಗಳನ್ನು ಮಾಡಿ, ಶಾಂತಿ ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಲಂಬಾಣಿ ಭಜನೆ ಹಾಗೂ ಲಂಬಾಣಿ ನೃತ್ಯ ಎಲ್ಲರ ಗಮನ ಸೆಳೆದವು. ತಮ್ಮ ತಂದೆ ತಾಯಿಯವರ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ. ತಂದೆ ತಾಯಿಯವರ ಋಣ ತೀರಿಸಲಾಗಲ್ಲ. ನಾಲ್ಕು ಸಹೋದರರು ನಾವೆಲ್ಲಾ ಕೂಡಿ ತಂದೆ ತಾಯಿ ದೇವಾಲಯ ಕಟ್ಟಿಸಿದ್ದೇವೆ. ನಮ್ಮ ತಾಂಡಾದ ನಾಯಕರು, ಕಾರಭಾರಿಗಳು ಹಾಗೂ ಇತರೆಲ್ಲರೂ ನಮಗೆ ಬೆನ್ನೆಲುಬಾಗಿ ನಿಂತರು. ಈ ದೇವಸ್ಥಾನ ಅವರ ಸ್ಮರಣೆಗಾಗಿ, ಅವರ ಋಣಕ್ಕಾಗಿ ಎಂದು ದೇವಸ್ಥಾನ ನಿರ್ಮಾಣ ಮಾಡಿದ ಡಾ ಆಶೋಕಕುಮಾರ ಜಾಧವ್ ಹೇಳಿದ್ದಾರೆ.

ಲಂಬಾಣಿ ಭಜನೆ ಹಾಗೂ ಲಂಬಾಣಿ ನೃತ್ಯ

ಡಾ. ಅಶೋಕಕುಮಾರ, ಗುಲಾಬಚಂದ, ಧರ್ಮೇಂದ್ರ ಹಾಗೂ ಪ್ರಕಾಶ ಅವರ ತಂದೆ ರಾಮಸಿಂಗ ಅವರು 2015 ರಲ್ಲಿ ಮೃತಪಟ್ಟಿದ್ದರು. ನಂತರ ಇವರ ತಾಯಿ ಲಕ್ಷ್ಮೀಬಾಯಿ ಕಳೆದ 2020 ಆಗಸ್ಟ್ 2 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ ಮೃತ ಪಟ್ಟ ತಂದೆ ತಾಯಿಯವರ ನೆನಪಿಗಾಗಿ ದೇವಸ್ಥಾನ ನಿರ್ಮಾಣ ಮಾಡಲು ನಾಲ್ವರು ಸಹೋದರರು ತೀರ್ಮಾನ ಮಾಡಿ ದೇವಸ್ಥಾನ ಕಟ್ಟಿಸಿದ್ದಾರೆ.

ಎರಡೂವರೆ ಲಕ್ಷಕ್ಕೂ ಆಧಿಕ ಹಣವನ್ನು ದೇವಾಲಯ ನಿರ್ಮಾಣ ಮಾಡಲು ಇವರು ಖರ್ಚು ಮಾಡಿದ್ದಾರೆ. ಸದ್ಯ ದೇವಸ್ಥಾನದಲ್ಲಿ ಇವರ ತಂದೆ ತಾಯಿಯ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಬ್ಬರ ಮೂರ್ತಿಗಳನ್ನು ಸ್ಥಾಪಿಸಲು ಇವರೆಲ್ಲಾ ಚಿಂತಿಸಿದ್ದರು. ಇದೀಗ ಜಾಲಗೇರಿ ತಾಂಡಾ 5 ರಲ್ಲಿ ಜಾಧವ್ ಕುಟುಂಬದವರು ತಂದೆ ತಾಯಿ ದೇವಸ್ಥಾನ ನಿರ್ಮಾಣ ಮಾಡಿದ್ದು, ಎಲ್ಲೆಡೆ ಖ್ಯಾತಿಗೆ ಪಾತ್ರವಾಗಿದೆ.

ನಾವೆಲ್ಲಾ ಮಾತೃದೇವೋಭವ, ಪಿತೃದೇವೋಭವ ಎಂದು ಮಾತನಾಡುತ್ತೇವೆ. ಆದರೆ ಜಾಧವ್ ಸಹೋದರರು ಮಾತಿಗಿಂತ ಕೃತಿ ಮೇಲು ಎಂಬಂತೆ ತಂದೆ ಹಾಗೂ ತಾಯಿ ನೆನಪಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದು, ಅತ್ಯಂತ ದೊಡ್ಡ ಕೆಲಸವಾಗಿದೆ ಎಂದು ತಾಂಡಾದ ವಾಸಿ ಹಾಗೂ ವೈದ್ಯರಾದ ಡಾ. ಬಾಬುರಾವ್ ನಾಯಕ್ ಹೇಳಿದ್ದಾರೆ. ಸಂಬಂಧಗಳೇ ಗೌಣವಾಗುತ್ತಿರುವ ಇಂದಿನ ದಿನಗಳಲ್ಲಿ ಜಾಧವ್ ಕುಟುಂಬದವರು ಇತರರಿಗೆಲ್ಲಾ ಮಾದರಿಯಾಗುವ ಕೆಲಸ ಮಾಡಿದ್ದಾರೆ. ತಂದೆ- ತಾಯಿಗಳಿಂದ ದೂರವಾಗಿ ಬೇರೆ ಮನೆ ಮಾಡುವವರಿಗೆ ಇವರು ವೈರುಧ್ಯವಾಗಿದ್ದು, ಹಿರಿಯರ ಮೆಲಿನ ಪ್ರೀತಿಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ:

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್​ ಫೇರ್​ ಸ್ವೀಕರಿಸಿದ ಇರ್ಫಾನ್​ ಖಾನ್​ ಪುತ್ರ

(Vijayapura Sons build temple and performs worship for their parents after death)