ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್: ಡಿಸಿಎಂ ತಂತ್ರ ಬಿಚ್ಚಿಟ್ಟ ಯತ್ನಾಳ್

ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಲೋಕಸಭಾ ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆ ಶಿವಕುಮಾರ್(DK Shivakumar)​ ಅವರು ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದಿದ್ದರೆ ಸಿಎಂ ಹುದ್ದೆ ಹೋಗುವುದು ಗ್ಯಾರಂಟಿ ಎಂದು ಭವಿಷ್ಯ ಕೂಡ ನುಡಿದಿದ್ದಾರೆ.

ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್: ಡಿಸಿಎಂ ತಂತ್ರ ಬಿಚ್ಚಿಟ್ಟ ಯತ್ನಾಳ್
ಡಿಕೆ ಶಿವಕುಮಾರ್​, ಬಸನಗೌಡ ಪಾಟೀಲ್​ ಯತ್ನಾಳ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Apr 17, 2024 | 3:52 PM

ವಿಜಯಪುರ, ಏ.17: ಲೋಕಸಭಾ ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆ ಶಿವಕುಮಾರ್(DK Shivakumar)​ ಅವರು ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್(Basanagouda patil yatnal) ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ತನ್ನ ಪರವಾಗಿರುವರನ್ನ ಆಯ್ಕೆ ಮಾಡಿಕೊಂಡು ಡಿಕೆಶಿ ಸಿಎಂ ಆಗಲು ಮುಂದಾಗಿದ್ದಾರೆ. ಅದಕ್ಕಾಗಿ ಲಿಂಗಾಯತರು, ಒಕ್ಕಲಿಗರು ಒಂದೇ ಎನ್ನುವ ಸಂದೇಶ ಕೊಡಲು ವಚನಾನಂದ ಸ್ವಾಮೀಜಿ ಪ್ರಯತ್ನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಪತನ ಎಂದು ಬಾಂಬ್ ಹಾಕಿದ ಯತ್ನಾಳ್

ಅದಕ್ಕಾಗಿಯೇ ಬಾಗಲಕೋಟೆಯಿಂದ ಶಿವಾನಂದ್ ಪಾಟೀಲ್​ರ ಮಗಳನ್ನು ಆರಿಸಿ ಕಳಿಸಿ, ಶಿವಾನಂದ್ ಪಾಟೀಲ್ ನನ್ನ ಜೊತೆ ಇದ್ದಾರೆ, ಡಿಕೆಶಿ ಹಾಗೂ ಪಾಟೀಲ್ ಸೇರಿ ಸಿದ್ದರಾಮಯ್ಯರನ್ನ ಕೆಳಗೇಳಿಸುವ ಕಾರ್ಯತಂತ್ರ ಮಾಡಿರುವ ಸಂದೇಶ ಕೊಟ್ಟಿದ್ದಾರೆ. ಮುಂದೆ ಕಾಂಗ್ರೆಸ್ ಒಡೆದು ಹೋಗುತ್ತೆ, ಹೊಸ ಸರ್ಕಾರ ರಚನೆಯಾಗುತ್ತದೆ. ಸಿದ್ದರಾಮಯ್ಯರನ್ನ ಇಳಿಸೋಕೆ ಹೋದರೆ ಕಾಂಗ್ರೆಸ್ ಇರದು, ಸರ್ಕಾರ ಪತನ ಎಂದು ಯತ್ನಾಳ್​ ಬಾಂಬ್ ಹಾಕಿದರು. ಹಾಗಾಗಿ ಸಿದ್ದರಾಮಯ್ಯ, ಡಿಕೆಶಿ ಪರವಾಗಿರುವ ಲೋಕಸಭಾ ಅಭ್ಯರ್ಥಿಗಳನ್ನು ಸೋಲಿಸಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದನ್ನೂ ಓದಿ:ಮತ್ತೊಮ್ಮೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕ ಮುಖ್ಯಮಂತ್ರಿಯಾಗುವ ಪ್ರಸ್ತಾಪ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್!

ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದಿದ್ದರೆ ಸಿಎಂ ಹುದ್ದೆ ಹೋಗುವುದು ಗ್ಯಾರಂಟಿ ಎಂದು ಭವಿಷ್ಯ ಕೂಡ ನುಡಿದು, ಐದು ಗ್ಯಾರಂಟಿಗಳ ಜೊತೆಯೂ ಇದು ಒಂದು ಗ್ಯಾರಂಟಿ ಎಂದು ಹೇಳಿದರು. ಸಚಿವ ಶಿವಾನಂದ ಪಾಟೀಲ್, ಧಾರವಾಡದ ಕೆಲ ಶಾಸಕರು, ಬೆಳಗಾವಿಯ ಲೋಕಸಭಾ ಅಭ್ಯರ್ಥಿ ಸೇರಿದಂತೆ ಇತರ ಬೆಂಬಲಿಗರನ್ನು ಸೋಲಿಸದಿದ್ದರೆ ಸಿದ್ದರಾಮಯ್ಯ ಖುರ್ಚಿ ಹೋಗೋದು ಗ್ಯಾರಂಟಿ ಎಂದರು.

ವಚನಾನಂದ ಸ್ವಾಮೀಜಿ ವಿರುದ್ದ ಯತ್ನಾಳ್​ ಕಿಡಿ

ಇದೇ ವೇಳೆ ಬಿಜೆಪಿ ವರಿಷ್ಠರು ಮುಖಂಡರ ಮೇಲೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮುನಿಸು ವಿಚಾರ, ‘ಯಡಿಯೂರಪ್ಪ , ಬೊಮ್ಮಾಯಿ ಸಿಎಂ ಆಗಿದ್ದಾಗ ವಚನಾನಂದ ಸ್ವಾಮೀಜಿ ಅವರು ಮಠಕ್ಕೆ ಎಷ್ಟು ಹಣ ಒಯ್ದಿದ್ದಾರೆ, ಎಷ್ಟು  ದುರುಪಯೋಗ ಮಾಡಿಕೊಂಡಿದ್ದಾರೆ ಹೇಳಲಿ. ಹತ್ತು ಕೋಟಿ ರೂಪಾಯಿ ಕೊಟ್ಟಿದ್ದಾರೆ. ಬೊಮ್ಮಾಯಿ ಹೆಲಿಕಾಪ್ಟರ್​ನಲ್ಲಿ ವಚನಾನಂದ ಸ್ವಾಮೀಜಿ ಓಡಾಡುತ್ತಿದ್ದರು. ಬಿಜೆಪಿ ಸರ್ಕಾರ ಹತ್ತಾರು ಕೋಟಿ ಕೊಟ್ಟಿದೆ. ಈಗ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಕಾಂಗ್ರೆಸ್​ಗೆ ಬುಕ್ ಆಗಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us